ETV Bharat / bharat

ಭುಗಿಲೆದ್ದ ಹಿಂಸಾಚಾರ: ಜಾರ್ಖಂಡ್​ನಲ್ಲಿ ನಿಷೇಧಾಜ್ಞೆ ಜಾರಿ.. ಉನ್ನತ ಮಟ್ಟದ ತನಿಖೆಗೆ ಸೂಚನೆ

author img

By

Published : Jun 11, 2022, 9:57 PM IST

ಜಾರ್ಖಂಡ್​ನಲ್ಲಿ ಭುಗಿಲೆದ್ದ ಹಿಂಸಾಚಾರದಿಂದಾಗಿ ರಾಂಚಿ, ರಾಮಗಢದಲ್ಲಿ ಪರಿಸ್ಥಿತಿ ಹತೋಟಿಗೆ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಅಲ್ಲದೇ, ಹಿಂಸಾಚಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಸಿಎಂ ಹೇಮಂತ್ ಸೊರೆನ್ ಸೂಚಿಸಿದ್ದಾರೆ.

ಜಾರ್ಖಂಡ್​ನಲ್ಲಿ ನಿಷೇಧಾಜ್ಞೆ ಜಾರಿ
ಜಾರ್ಖಂಡ್​ನಲ್ಲಿ ನಿಷೇಧಾಜ್ಞೆ ಜಾರಿ

ರಾಂಚಿ(ಜಾರ್ಖಂಡ್​): ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್​ ಶರ್ಮಾ ವಿರುದ್ಧ ಜಾರ್ಖಂಡ್​ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಮೃತಪಟ್ಟು, 24 ಜನರು ಗಾಯಗೊಂಡು ತೀವ್ರ ತಲ್ಲಣ ಮೂಡಿಸಿದೆ. ಹೀಗಾಗಿ ಜಾರ್ಖಂಡ್​ನ ರಾಂಚಿ ಮತ್ತು ರಾಮಗಢ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ, ಈ ಹಿಂಸಾಚಾರದ ಕುರಿತು ಉನ್ನತ ಮಟ್ಟದ ತನಿಖೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಶನಿವಾರ ಆದೇಶಿಸಿದ್ದಾರೆ.

ಪ್ರವಾದಿ ಮುಹಮದ್​ರ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿಯ ಉಚ್ಚಾಟಿತ ಮುಖಂಡೆ ನೂಪುರ್​ ಶರ್ಮಾ ವಿರುದ್ಧ ರಾಂಚಿ ಮತ್ತು ರಾಮಗಢದಲ್ಲಿ ನಡೆದ ಪ್ರತಿಭಟನೆ ಭಾರಿ ಹಿಂಸಾಚಾರಕ್ಕೆ ತಿರುಗಿ, ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದೇ ವೇಳೆ ಪೊಲೀಸರಿಗೂ ಗಾಯಗಳಾಗಿವೆ. ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಹೀಗಾಗಿ ರಾಜಧಾನಿ ರಾಂಚಿ ಮತ್ತು ರಾಮಗಢ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದರಿಂದ ಸೂಕ್ಷ್ಮ ಸ್ಥಳಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಜನರು ಸಂಯಮದಿಂದ ವರ್ತಿಸುವಂತೆ ಪೊಲೀಸರು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ.

ಎಲ್ಲಾ ಅಂಗಡಿಗಳು ಮತ್ತು ಕಚೇರಿಗಳನ್ನು ಮುಚ್ಚಲಾಗಿದೆ. ರಸ್ತೆಗಳಲ್ಲಿ ಯಾವುದೇ ರೀತಿಯ ಸಂಚಾರ ನಡೆಯುತ್ತಿಲ್ಲ. ಪಲಾಮು, ಗರ್ಹ್ವಾ ಮತ್ತು ಲತೇಹರ್ ಪ್ರದೇಶಗಳಲ್ಲೂ ಸಹ ಹೈ ಅಲರ್ಟ್ ಘೋಷಿಸಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೂ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಹಿಂಸಾಚಾರವನ್ನು ಪೊಲೀಸರು ತಡೆದ ಹೊರತಾಗಿಯೂ ಶುಕ್ರವಾರ ತಡರಾತ್ರಿ ಬಡಾ ತಲಾಬ್‌ನ ಸೂರ್ಯ ದೇವಾಲಯದ ಮೇಲೆ ಕೆಲವು ಸಮಾಜಘಾತುಕರು ದಾಳಿ ಮಾಡಿದ್ದಾರೆ. ದೇವಸ್ಥಾನದ ಮೇಲೆ ಪೆಟ್ರೋಲ್ ಬಾಂಬ್ ಎಸೆದು ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ತಿಳಿದ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ತನಿಖೆಗೆ ಸಿಎಂ ಸೂಚನೆ: ರಾಂಚಿಯನ್ನು ಬೆಚ್ಚಿಬೀಳಿಸಿದ ಮಾರಣಾಂತಿಕ ಹಿಂಸಾಚಾರದ ತನಿಖೆಗಾಗಿ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಶನಿವಾರ ಆದೇಶಿಸಿದ್ದಾರೆ.

ಇಬ್ಬರ ಸಾವಿಗೆ ಕಾರಣವಾದ ಮತ್ತು 24 ಜನರು ಗಾಯಗೊಂಡಿರುವ ಹಿಂಸಾಚಾರದ ತನಿಖೆಗಾಗಿ ಹಿರಿಯ ಐಎಎಸ್ ಅಧಿಕಾರಿ ಅಮಿತಾಭ್ ಕೌಶಾಲ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಸಂಜಯ್ ಲಾಟ್ಕರ್ ಅವರನ್ನು ಒಳಗೊಂಡ ದ್ವಿಸದಸ್ಯ ಸಮಿತಿಯನ್ನು ರಚಿಸಲಾಗಿದೆ.

ಹಿಂಸಾಚಾರದ ಕುರಿತು ಸಮಿತಿಯು ಒಂದು ವಾರದಲ್ಲಿ ರಾಜ್ಯ ಸರ್ಕಾರಕ್ಕೆ ವವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇದಲ್ಲದೇ, ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನೂ (ಎಸ್‌ಐಟಿ) ರಚಿಸಲಾಗಿದೆ. ಹಿಂಸಾಚಾರ ಕುರಿತು ಇದುವರೆಗೆ 3 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಅನೀಶ್ ಗುಪ್ತಾ ಹೇಳಿದ್ದಾರೆ.

ಓದಿ: ಉತ್ತರಪ್ರದೇಶದಲ್ಲಿ ಗಲಭೆ ಸೃಷ್ಟಿಸಿದ 227 ಜನರ ಬಂಧನ.. ಕಠಿಣ ಕ್ರಮಕ್ಕೆ ಸಿಎಂ ಯೋಗಿ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.