ETV Bharat / bharat

I.N.D.I.A ಸೀಟು ಹಂಚಿಕೆ; ಇಬ್ಬರು ಮಾಜಿ ಸಿಎಂಗಳಿಗೆ ಮಹತ್ವದ ಜವಾಬ್ದಾರಿ ವಹಿಸಿದ ಕಾಂಗ್ರೆಸ್

author img

By ETV Bharat Karnataka Team

Published : Dec 19, 2023, 6:37 PM IST

ಐಎನ್​ಡಿಐಎ ಮೈತ್ರಿಕೂಟದ ಪಕ್ಷಗಳೊಂದಿಗೆ ಸೀಟು ಹಂಚಿಕೆ ಅಂತಿಮಗೊಳಿಸಲು ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ್ ಬಘೇಲ್ ಅವರಿಗೆ ಕಾಂಗ್ರೆಸ್ ಮಹತ್ವದ ಜವಾಬ್ದಾರಿ ವಹಿಸಿದೆ.

INDIA meet: Kharge ropes in former CMs Ashok Gehlot,
INDIA meet: Kharge ropes in former CMs Ashok Gehlot,

ನವದೆಹಲಿ: ವಿಪಕ್ಷಗಳ ಮೈತ್ರಿಕೂಟವಾಗಿರುವ ಐಎನ್​ಡಿಐಎ ಒಕ್ಕೂಟದ ಪಕ್ಷಗಳೊಂದಿಗೆ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಚರ್ಚೆ ಮಾಡಲು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್​​ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ವಹಿಸಿದ್ದಾರೆ.

ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪಕ್ಷದಲ್ಲಿ ಈ ಇಬ್ಬರು ಅನುಭವಿ ಹಿರಿಯರ ಪಾತ್ರದ ಬಗ್ಗೆ ಊಹಾಪೋಹಗಳು ಸೃಷ್ಟಿಯಾಗಿದ್ದವು. ಆದರೆ ಸದ್ಯ ಇವರಿಬ್ಬರಿಗೂ ಕಾಂಗ್ರೆಸ್ ಪ್ರಮುಖ ಜವಾಬ್ದಾರಿಯನ್ನು ವಹಿಸಿದೆ. ಗೆಹ್ಲೋಟ್, ಬಘೇಲ್ ಮತ್ತು ಸಮಿತಿಯ ಇತರ ಸದಸ್ಯರು ಈಗ ತಮ್ಮ ರಾಜಕೀಯ ಅನುಭವ ಮತ್ತು ಕೌಶಲಗಳನ್ನು ಬಳಸಿಕೊಂಡು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ಎಸ್​ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಆರ್​ಜೆಡಿ ನಾಯಕ ಲಾಲು ಯಾದವ್ ಅವರೊಂದಿಗೆ ಲೋಕಸಭಾ ಸ್ಥಾನಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಉತ್ತರಪ್ರದೇಶದಲ್ಲಿ ಪಕ್ಷದ ಲೋಕಸಭಾ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ರಾಹುಲ್ ಮತ್ತು ಪ್ರಿಯಾಂಕಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದ ಒಂದು ದಿನದ ನಂತರ ಕಾಂಗ್ರೆಸ್​ ಮೈತ್ರಿ ಸಮಿತಿಯನ್ನು ರಚಿಸಿರುವುದು ಗಮನಾರ್ಹ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವು ಎನ್​ಸಿಪಿ ಮತ್ತು ಶಿವಸೇನೆ ಯುಬಿಟಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಅಲ್ಲಿ ಸೀಟು ಹಂಚಿಕೆಗೆ ಹೆಚ್ಚಿನ ಸಮಸ್ಯೆಯಾಗಲಾರದು ಎಂದು ಪಕ್ಷದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಷಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಖಂಡ್​ನ ಎಐಸಿಸಿ ಉಸ್ತುವಾರಿ ಅವಿನಾಶ್ ಪಾಂಡೆ, "ಇದು ಪಕ್ಷದ ಅಧ್ಯಕ್ಷರು ಕೈಗೊಂಡಿರುವ ಮಹತ್ವದ ನಿರ್ಣಯವಾಗಿದೆ ಮತ್ತು ಐಎನ್​ಡಿಐಎ ಮೈತ್ರಿಕೂಟದೊಂದಿಗೆ ನಮ್ಮ ಬದ್ಧತೆ ತೋರಿಸುತ್ತದೆ. ಚುನಾವಣೆಗಳನ್ನು ನಿರ್ವಹಿಸುವಲ್ಲಿ ಹಾಗೂ ರಾಷ್ಟ್ರ ರಾಜಕಾರಣದ ಬಗ್ಗೆ ಅಪಾರ ಅನುಭವ ಹೊಂದಿರುವ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಗೆಹ್ಲೋಟ್ ಮತ್ತು ಬಘೇಲ್ ಅವರನ್ನು ಐದು ಜನರ ಸಮಿತಿಯಲ್ಲಿ ನೇಮಿಸಲಾಗಿದೆ. ಅವರು ಆಯಾ ರಾಜ್ಯಗಳ ಎಐಸಿಸಿ ಉಸ್ತುವಾರಿಗಳಿಂದ ಸೀಟು ಹಂಚಿಕೆ ವರದಿ ಪಡೆದು ಅದರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರಿಗೆ ಮಾಹಿತಿ ನೀಡಲಿದ್ದಾರೆ. ಈ ಸಮಿತಿ ಹೊಂದಾಣಿಕೆಗಳ ಬಗ್ಗೆ ಚರ್ಚೆ ಮಾಡಲಿದೆ. ಸಮಿತಿಯಲ್ಲಿ ನಮ್ಮ ಹಿರಿಯ ನಾಯಕರ ಉಪಸ್ಥಿತಿಯು ಹಿರಿಯ ಮಿತ್ರರಾದ ಮಮತಾ ಬ್ಯಾನರ್ಜಿ, ಲಾಲು ಪ್ರಸಾದ್, ನಿತೀಶ್ ಕುಮಾರ್ ಮತ್ತು ಶರದ್ ಪವಾರ್ ಮತ್ತು ಅಖಿಲೇಶ್ ಯಾದವ್ ಅವರಂಥ ಯುವ ನಾಯಕರೊಂದಿಗೆ ಸಂವಾದ ನಡೆಸಲು ಸಹಾಯಕವಾಗಲಿದೆ" ಎಂದು ಹೇಳಿದರು.

"ಮುಂದಿನ ಲೋಕಸಭೆಗೆ ಸೀಟು ಹಂಚಿಕೆಗೆ ಐಎನ್​ಡಿಐಎ ಮೈತ್ರಿಕೂಟ ಬದ್ಧವಾಗಿದೆ ಮತ್ತು ನಾವು ಬಿಜೆಪಿ ವಿರುದ್ಧ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಕೆಲ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ದೆಹಲಿಯಲ್ಲಿ ಸಭೆ ನಡೆಯುತ್ತಿದೆ" ಎಂದು ಅವರು ತಿಳಿಸಿದರು.

ಇದನ್ನೂ ಓದಿ : ನವದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ನಾಲ್ಕನೇ ನಿರ್ಣಾಯಕ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.