ETV Bharat / bharat

ದೆಹಲಿ, ಮುಂಬೈ ಕಚೇರಿಗಳ ಮೇಲೆ ಐಟಿ ದಾಳಿ: ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದ ಬಿಬಿಸಿ

author img

By

Published : Feb 14, 2023, 2:06 PM IST

Updated : Feb 14, 2023, 4:05 PM IST

ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ - ಅಧಿಕಾರಿಗಳಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದ ಬಿಬಿಸಿ

ದೆಹಲಿಯ ಬಿಬಿಸಿ ಕಚೇರಿಯ ಮೇಲೆ ತೆರಿಗೆ ಇಲಾಖೆ ದಾಳಿ
ದೆಹಲಿಯ ಬಿಬಿಸಿ ಕಚೇರಿಯ ಮೇಲೆ ತೆರಿಗೆ ಇಲಾಖೆ ದಾಳಿ

ನವದೆಹಲಿ/ಲಂಡನ್​: ದೆಹಲಿ ಮತ್ತು ಮುಂಬೈನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳಿಗೆ ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದು ಹೇಳಿದೆ.

  • The Income Tax Authorities are currently at the BBC offices in New Delhi and Mumbai and we are fully cooperating.

    We hope to have this situation resolved as soon as possible.

    — BBC News Press Team (@BBCNewsPR) February 14, 2023 " class="align-text-top noRightClick twitterSection" data=" ">

2002ರಲ್ಲಿ ಗುಜರಾತ್​ ಗಲಭೆ ಕುರಿತು ಇತ್ತೀಚಿಗೆ ಬಿಬಿಸಿ ಚಿತ್ರಿಸಿದ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಎಂಬ ಸಾಕ್ಷ್ಯಚಿತ್ರವು ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಅಲ್ಲದೇ, ಭಾರತದಲ್ಲಿ ಇದರ ಪ್ರಸಾರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿತ್ತು. ಇದರ ಬೆಳವಣಿಗೆ ನಂತರ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ ಮಾಡಿದೆ. ಈ ಕುರಿತು ಲಂಡನ್​ನ ಬಿಬಿಸಿ ಮುಖ್ಯ ಕಚೇರಿ ಟ್ವೀಟ್​ ಮಾಡಿದ್ದು, ಪ್ರಸ್ತುತ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇದ್ದಾರೆ. ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಈ ಪರಿಸ್ಥಿತಿಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದೂ ನಾವು ಭಾವಿಸುತ್ತೇವೆ ಎಂದು ಟ್ವೀಟ್​ ಮಾಡಿದೆ.

ಭಾರತದ ವಿರುದ್ಧ ದ್ವೇಷಪೂರಿತ ವರದಿ - ಬಿಜೆಪಿ: ಮತ್ತೊಂದೆಡೆ, ಐಟಿ ದಾಳಿ ವಿಷಯವು ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಬಿಜೆಪಿಯು ಟೀಕೆಗೆ ಭಯ ಪಡುತ್ತಿದೆ ಎಂದು ಕಾಂಗ್ರೆಸ್​ ವಾಗ್ದಾಳಿ ಮಾಡಿದೆ. ಇದೇ ವೇಳೆ ಕೇಂದ್ರದ ಆಡಳಿತಾರೂಢ ಬಿಜೆಪಿ ಸಹ ಪ್ರತಿಕ್ರಿಯೆ ನೀಡಿದ್ದು, ಭಾರತದ ವಿರುದ್ಧ ಬಿಬಿಸಿ ದ್ವೇಷಪೂರಿತ ವರದಿಯನ್ನು ಬಿಡುಗಡೆ ಮಾಡಿದೆ. ಅಲ್ಲದೇ, ಬಿಬಿಸಿಯ ಅಪ್ರಚಾರ ಮತ್ತು ಕಾಂಗ್ರೆಸ್‌ನ ಅಜೆಂಡಾ ಒಟ್ಟಿಗೆ ಸಾಗುತ್ತಿವೆ ಎಂದು ಆರೋಪಿಸಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಬಿಬಿಸಿ ವಿಶ್ವದ ಅತ್ಯಂತ ಭ್ರಷ್ಟ ಸಂಸ್ಥೆಯಾಗಿದೆ. ಆಗಿನ ಪ್ರಧಾನಿ ಇಂದಿರಾ ಗಾಂಧಿ ಬಿಬಿಸಿ ಪ್ರಸಾರದ ಮೇಲೆ ನಿಷೇಧಿಸಿದ್ದರು ಎಂಬುದನ್ನು ಕಾಂಗ್ರೆಸ್ ನೆನಪಿಟ್ಟುಕೊಳ್ಳಬೇಕು. ಅಲ್ಲದೇ, ಬಿಬಿಸಿಯು ಭಾರತದ ವಿರುದ್ಧ ದುರುದ್ದೇಶದಿಂದ ಕೆಲಸ ಮಾಡುವ ಕಳಂಕಿತ ಇತಿಹಾಸ ಹೊಂದಿದೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲ, ಬಿಬಿಸಿ ಭಯೋತ್ಪಾದಕರನ್ನು 'ವರ್ಚಸ್ವಿ ಯುವ ಉಗ್ರಗಾಮಿ' ಎಂದು ವರ್ಣಿಸುವ ಮತ್ತು ಭಾರತದ ಹೋಳಿಯನ್ನು 'ಕೊಳಕು' ಹಬ್ಬ ಎಂದು ಕರೆಯುವ ವರದಿಗಳನ್ನು ಉಲ್ಲೇಖಿಸಿದ ಟೀಕಿಸಿದ ಅವರು, ಬಿಬಿಸಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ದೇಶದ ಸಂವಿಧಾನದ ಬಗ್ಗೆ ಸ್ವಲ್ಪ ಕೂಡ ಗೌರವವಿಲ್ಲ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ಜಾಗತಿಕವಾಗಿ ಮುನ್ನಡೆಯುತ್ತಿದ್ದು, ಇದನ್ನು ಸಹಿಸದ ಅನೇಕ ಶಕ್ತಿಗಳಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷಗಳಿಗೂ ಇದನ್ನು ಸಹಿಸಲು ಆಗದೇ ನೋವು ಅನುಭವಿಸುತ್ತಿವೆ ಎಂದು ದೂರಿದರು.

ಜೊತೆಗೆ ಕಾಂಗ್ರೆಸ್ ದೇಶ ವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ ಭಾಟಿಯಾ, ಮೋದಿ ಮೇಲಿನ ದ್ವೇಷ ನಿಮಗೆ (ಕಾಂಗ್ರೆಸ್​ನವರಿಗೆ ಎಷ್ಟರಮಟ್ಟಿಗಿದೆ ಎಂದರೆ ನೀವು ತನಿಖಾ ಸಂಸ್ಥೆಯ ಕೆಲಸವನ್ನೂ ರಾಜಕೀಯಗೊಳಿಸುತ್ತೀರಿ. ನೀವು ಯಾವಾಗಲೂ ಸುಪ್ರೀಂಕೋರ್ಟ್ ಮತ್ತು ಚುನಾವಣಾ ಆಯೋಗದಂತಹ ಸಾಂವಿಧಾನಿಕ ಅಧಿಕಾರಗಳನ್ನು ಪ್ರಶ್ನಿಸುತ್ತೀರಿ. ಐಟಿ ಅಧಿಕಾರಿಗಳಿಗೆ ತಮ್ಮ ಕೆಲಸವನ್ನು ಮಾಡಲು ಬಿಡುಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ, ಪರಿಶೀಲನೆ: ಕಾಂಗ್ರೆಸ್​ ಟೀಕಾಪ್ರಹಾರ

Last Updated : Feb 14, 2023, 4:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.