ETV Bharat / bharat

ಲೂಧಿಯಾನ ದುರಂತ: ಕಾರ್ಖಾನೆಗೆ ಕ್ಲೀನ್ ಚಿಟ್, ಜನರ ಸಾವಿಗೆ ಕೊಳಚೆ ಅನಿಲವೇ ಕಾರಣ

author img

By

Published : May 5, 2023, 1:24 PM IST

ಲುಧಿಯಾನದ ಗಿಯಾಸ್ಪುರದಲ್ಲಿ ವಿಷಾನಿಲ ಸೋರಿಕೆಯಿಂದ ಐವರು ಮಹಿಳೆಯರು, ಮೂವರು ಮಕ್ಕಳು ಸೇರಿದಂತೆ ಒಟ್ಟು 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೂಧಿಯಾನ ಡಿಸಿಪಿ ಸುರ್ಭಿ ಮಲಿಕ್ ಅವರು ಪಂಜಾಬ್ ಸರ್ಕಾರಕ್ಕೆ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖಾ ವರದಿ ಸಲ್ಲಿಸಿದ್ದಾರೆ.

gas leak
ಅನಿಲ ಸೋರಿಕೆ

ಲೂಧಿಯಾನ (ಪಂಜಾಬ್) : ಗಿಯಾಸ್ಪುರ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಯ ಎರಡು ಪುಟಗಳ ವರದಿಯನ್ನು ಲೂಧಿಯಾನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸುರ್ಭಿ ಮಲಿಕ್ ಅವರು ಪಂಜಾಬ್ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಪ್ರಸ್ತುತ ಪ್ರಾಥಮಿಕ ತನಿಖಾ ವರದಿಯಲ್ಲಿ ಕಾರ್ಖಾನೆಗೆ ಕ್ಲೀನ್ ಚಿಟ್ ನೀಡಲಾಗಿದ್ದು, ಹೈಡ್ರೋಜನ್ ಸಲ್ಫೈಡ್ ಅನಿಲವು 11 ಜನರ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿವೆ.

ಮೂಲಗಳ ಪ್ರಕಾರ, ಈ ಪ್ರದೇಶದಲ್ಲಿ ಯಾವುದೇ ಕಾರ್ಖಾನೆಯಿಂದ ಹೊರ ಬರುವ ತ್ಯಾಜ್ಯ ಅಥವಾ ರಾಸಾಯನಿಕವನ್ನು ಚರಂಡಿಗೆ ಎಸೆಯಲಾಗುತ್ತಿದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಅಂತಿಮವಾಗಿ, 11 ಜನರ ಸಾವಿಗೆ ಯಾರೂ ಕಾರಣರಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೂಧಿಯಾನ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಲೂಧಿಯಾನ ಪೊಲೀಸ್ ಕಮಿಷನರ್ ಅವರು ಪ್ರತ್ಯೇಕ ಎಸ್‌ಐಟಿ ತಂಡವನ್ನ ಕೂಡ ರಚಿಸಿದ್ದಾರೆ. 11 ಜನರ ಸಾವಿಗೆ ಹೈಡ್ರೋಜನ್ ಸಲ್ಫೈಡ್ ಅನಿಲ ಕಾರಣವೆಂದು ತಿಳಿದುಬಂದಿದೆ. "ಅವಘಡ ಸಂಭವಿಸಿದ ಪ್ರದೇಶದ ಸುತ್ತಮುತ್ತ ಹೆಚ್ಚಿನ ಸಂಖ್ಯೆಯ ಕಾರ್ಖಾನೆಗಳಿದ್ದು, ಕಾರ್ಖಾನೆಗಳ ತ್ಯಾಜ್ಯವು ಮನೆಗಳ ಕೊಳಚೆಯೊಂದಿಗೆ ಮಿಶ್ರಣವಾಗಿದೆ" ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು. ಆದರೆ, ತನಿಖೆಯಲ್ಲಿ ಕಾರ್ಖಾನೆ ತ್ಯಾಜ್ಯಾದಿಂದ ಘಟನೆ ಸಂಭವಿಸಿದೆ ಎಂದು ಬಹಿರಂಗವಾಗಿಲ್ಲ. ಬದಲಾಗಿ, ಕೊಳಚೆ ಅನಿಲಕ್ಕೆ ವಾತಾಯನ ವ್ಯವಸ್ಥೆ ಇಲ್ಲದ ಕಾರಣ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಲೂಧಿಯಾನದಲ್ಲಿ ಅನಿಲ ಸೋರಿಕೆ: ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಸಾವು

ನಿಯಮದಂತೆ, ಅನಿಲ ಸೋರಿಕೆ ತಡೆಯಲು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಿಮಣಿಗಳನ್ನು ನಿರ್ಮಿಸುವುದು ಅವಶ್ಯಕ. ಆದರೆ, ಚಿಮಣಿ ಇಲ್ಲದ ಕಾರಣ ಗ್ಯಾಸ್ ಶೇಖರಣೆಗೊಂಡು ಜನರ ಮನೆಗಳಿಗೆ ಸೋರಿಕೆಯಾಗಿ ಸಾವು ನೋವು ಸಂಭವಿಸಿದೆ. ಲೂಧಿಯಾನ ಸಂಸದ ರವನೀತ್ ಬಿಟ್ಟು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಪತ್ರ ಬರೆದು, ಈ ಬಗ್ಗೆ ತನಿಖೆ ನಡೆಸಿ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆದರೆ, ಈ ವಿಷಯವನ್ನು ಮುಂಚಿತವಾಗಿಯೇ ಅರಿತ ಎನ್‌ಜಿಟಿ, ಈ ವಿಷಯದ ಬಗ್ಗೆಯೂ ವಿಚಾರಣೆ ನಡೆಸಿದೆ. ಜೊತೆಗೆ, ಘಟನೆಯಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂಬ ಬೇಡಿಕೆ ಸಹ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಲೂಧಿಯಾನದಲ್ಲಿ ಅನಿಲ ಸೋರಿಕೆ: ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಸಾವು

ಏನಿದು ಪ್ರಕರಣ?: ಗಿಯಾಸ್ಪುರದಲ್ಲಿ ವಿಷಾನಿಲ ಸೋರಿಕೆಯಿಂದ ಒಟ್ಟು ಹನ್ನೊಂದು ಮಂದಿ ಮೃತಪಟ್ಟಿದ್ದರು. ಬೆಳಗ್ಗೆ ಮಾರುಕಟ್ಟೆಗೆ ತರಕಾರಿ ಮತ್ತು ಹಾಲು ಖರೀದಿಗೆ ಬಂದ ಕೆಲವರು ಪ್ರಜ್ಞಾಹೀನರಾದಾಗ ಪ್ರಕರಣ ಬಯಲಿಗೆ ಬಂದಿತ್ತು. ಇವರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮೃತರು ಉತ್ತರ ಪ್ರದೇಶ, ಬಿಹಾರದಿಂದ ಬಂದ ವಲಸಿಗರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.