ETV Bharat / bharat

ಸೂರತ್​ ಕೋರ್ಟ್ ತೀರ್ಪು ಪ್ರಶ್ನಿಸಿ ರಾಹುಲ್​ ಗಾಂಧಿ ಅರ್ಜಿ: ಬೇಸಿಗೆ ರಜೆ ನಂತರ ತೀರ್ಪು ಪ್ರಕಟ - ಗುಜರಾತ್ ಹೈಕೋರ್ಟ್

author img

By

Published : May 2, 2023, 5:11 PM IST

Updated : May 2, 2023, 6:03 PM IST

ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್​ ಕೋರ್ಟ್​ ತೀರ್ಪು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಗುಜರಾತ್ ಹೈಕೋರ್ಟ್​ ಕಾಯ್ದಿರಿಸಿದೆ.

Gujarat High Court reserves verdict on Rahul Gandhis plea in defamation case
ಮಾನನಷ್ಟ ಮೊಕದ್ದಮೆ: ರಾಹುಲ್​ ಗಾಂಧಿ ಅರ್ಜಿಯ ತೀರ್ಪು ಕಾಯ್ದಿರಿಸಿದ ಗುಜರಾತ್​ ಹೈಕೋರ್ಟ್​

ಅಹಮದಾಬಾದ್​ (ಗುಜರಾತ್​): ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ವಿಚಾರವಾಗಿ ಸಲ್ಲಿಸಲಾಗಿದ್ದ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ಮಧ್ಯಂತರ ಪರಿಹಾರ ನೀಡಲು ಗುಜರಾತ್ ಹೈಕೋರ್ಟ್​ ನಿರಾಕರಿಸಿದೆ. ಎರಡು ವರ್ಷದ ಜೈಲು ಶಿಕ್ಷೆ ವಿಧಿಸಿರುವ ಸೂರತ್​ ಕೋರ್ಟ್​ ಆದೇಶಕ್ಕೆ ತಡೆ ಕೋರಿ ರಾಹುಲ್​ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಹೈಕೋರ್ಟ್​ ಕಾಯ್ದಿರಿಸಿದೆ. ಬೇಸಿಗೆ ರಜೆಯ ನಂತರ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಈ ಪ್ರಕರಣದ ತೀರ್ಪು ಪ್ರಕಟಿಸಲಿದ್ದಾರೆ.

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ಪರವಾಗಿ ಮಂಡಿಸಿದ ಅಂಶಗಳ ಪಟ್ಟಿ..

2019ರ ಏಪ್ರಿಲ್ 13ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ರಾಹುಲ್​ ಗಾಂಧಿ ಎಲ್ಲ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮವನ್ನು ಹೊಂದಿದ್ದು ಹೇಗೆ ಎಂದು ರಾಹುಲ್​ ಗಾಂಧಿ ಪ್ರಶ್ನಿಸಿದ್ದರು. ಈ ಬಗ್ಗೆ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೇ ಮಾರ್ಚ್ 23ರಂದು ಸೂರತ್ ವಿಚಾರಣಾ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆ ಸೆಕ್ಷನ್ 499 ಮತ್ತು 500ರಡಿಯಲ್ಲಿ ರಾಹುಲ್​ ಗಾಂಧಿ ಅಪರಾಧಿ ಎಂದು ಘೋಷಿಸಿ, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ನಂತರ ಈ ಆದೇಶ ಪ್ರಶ್ನಿಸಿ ಏಪ್ರಿಲ್ 3ರಂದು ರಾಹುಲ್​ ಗಾಂಧಿ ಸೂರತ್ ಸೆಷನ್​ ನ್ಯಾಯಾಲಯ ಮೊರೆ ಹೋಗಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಅರ್ಜಿ ಜಾಮೀನಿಗಾಗಿ ಮತ್ತು ಇನ್ನೊಂದು ಅರ್ಜಿಯಲ್ಲಿ ತಮ್ಮ ಮೇಲೆ ಬಾಕಿ ಉಳಿದಿರುವ ಅಪರಾಧದ ತಡೆ ಕೋರಿದ್ದರು. ಸೆಷನ್​ ನ್ಯಾಯಾಲಯವು ರಾಹುಲ್​ ಗಾಂಧಿಗೆ ಜಾಮೀನು ಮಂಜೂರು ಮಾಡಿದರೂ, ಶಿಕ್ಷೆಗೆ ತಡೆಯಾಜ್ಞೆ ನೀಡುವ ಮನವಿ ಅದು ತಿರಸ್ಕರಿಸಿತ್ತು.

ಹೀಗಾಗಿ ಕಾಂಗ್ರೆಸ್​ ನಾಯಕ ರಾಹುಲ್​, ಗುಜರಾತ್​ ಹೈಕೋರ್ಟ್​ನಲ್ಲಿ ತಮ್ಮ ವಿರುದ್ಧದ ಶಿಕ್ಷೆಗೆ ತಡೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ. ಕಳೆದ ಬುಧವಾರ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಗೀತಾ ಗೋಪಿ ಅವರ ಮುಂದೆ ಈ ಪ್ರಕರಣವನ್ನು ತುರ್ತು ವಿಚಾರಣೆಗಾಗಿ ಅರ್ಜಿ ಬಂದಿತ್ತು. ಆದರೆ, ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು. ನಂತರ ಈ ಪ್ರಕರಣವನ್ನು ನ್ಯಾಯಮೂರ್ತಿ ಹೇಮಂತ್ ಪ್ರಚ್ಛಕ್ ಅವರಿಗೆ ವಹಿಸಲಾಗಿದೆ.

ಮೇ 8ರಿಂದ ಜೂನ್ 3ರವರೆಗೆ ರಜೆ: ಏಪ್ರಿಲ್​ 29ರಂದು ನ್ಯಾಯಮೂರ್ತಿ ಹೇಮಂತ್ ಪ್ರಚ್ಛಕ್ ಅರ್ಜಿ ವಿಚಾರಣೆ ನಡೆಸಿ, ಇಂದಿಗೆ ಮುಂದೂಡಿಕೆ ಮಾಡಿದ್ದರು. ರಾಹುಲ್​ ಗಾಂಧಿ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ವಿಷಯದಲ್ಲಿ ಎರಡೂ ಕಡೆಯ ವಾದಗಳು ಮುಕ್ತಾಯವಾಗಿದ್ದು, ಮಧ್ಯಂತರ ಅಥವಾ ಅಂತಿಮ ಆದೇಶ ತುರ್ತಾಗಿ ನೀಡಬೇಕೆಂದು ನ್ಯಾಯ ಪೀಠವನ್ನು ಕೋರಿದರು. ಆದಾಗ್ಯೂ, ಈ ಹಂತದಲ್ಲಿ ಯಾವುದೇ ಮಧ್ಯಂತರ ರಕ್ಷಣೆ ನೀಡಲಾಗುವುದಿಲ್ಲ ಎಂದು ನ್ಯಾ. ಹೇಮಂತ್ ಪ್ರಚ್ಚಕ್ ಹೇಳಿದರು.

ಅಲ್ಲದೇ, ದಾಖಲೆಗಳು ಮತ್ತು ಪ್ರಕ್ರಿಯೆಗಳನ್ನು ಪರಿಶೀಲಿಸಿದ ನಂತರವೇ ಅಂತಿಮ ಆದೇಶವನ್ನು ನೀಡುವುದಾಗಿ ನ್ಯಾಯಮೂರ್ತಿ ಹೇಳಿದರು. ಜೊತೆಗೆ ಮೇ 8ರಿಂದ ಜೂನ್ 3 ರವರೆಗೆ ಇರುವ ಬೇಸಿಗೆ ರಜೆಯ ನಂತರದ ಹೈಕೋರ್ಟ್​ ಮತ್ತೆ ಆರಂಭವಾದ ಬಳಿಕ ತೀರ್ಪಿನ ವಿಷಯವನ್ನು ಮುಂದೂಡಿಕೆ ಮಾಡುವುದಾಗಿ ತಿಳಿಸಿದರು. ಇದೇ ವೇಳೆ ಪ್ರಕರಣದ ಮೂಲ ದೂರುದಾರ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಪರವಾಗಿ ಹಾಜರಾದ ವಕೀಲ ನಿರುಪಮ್ ನಾನಾವತಿ ಅವರು, ಮಧ್ಯಂತರ ಪರಿಹಾರಕ್ಕಾಗಿ ರಾಹುಲ್​ ಪರ ಸಿಂಘ್ವಿ ಮಾಡಿದ ಮನವಿಗೆ ವಿರೋಧ ವ್ಯಕ್ತಪಡಿಸಿದರು. ಇನ್ನು, ಈ ಪ್ರಕರಣದಲ್ಲಿ ಎರಡು ವರ್ಷದ ಜೈಲು ಶಿಕ್ಷೆಗೆ ಗುರಿಯಾದ ನಂತರ ವಯನಾಡು ಲೋಕಸಭಾ ಸ್ಥಾನದಿಂದ ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ.

ಇದನ್ನೂ ಓದಿ: ಮೋದಿ ಜೀ ಭಾಷಣದಲ್ಲಿ ನಿಮ್ಮ ಬಗ್ಗೆ ಹೇಳಬೇಡಿ, ಜನರ ಬಗ್ಗೆ ಮಾತನಾಡಿ: ರಾಹುಲ್​ ಗಾಂಧಿ

Last Updated :May 2, 2023, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.