ETV Bharat / bharat

ಎಲ್​ಇಟಿ ಉಗ್ರನಾಗಿ ಬದಲಾಗಿದ್ದ ಸರ್ಕಾರಿ ಶಿಕ್ಷಕ ಸೆರೆ: ಮೊದಲ ಬಾರಿಗೆ ಪರ್ಫ್ಯೂಮ್ ಐಇಡಿ ಪತ್ತೆ!

author img

By

Published : Feb 2, 2023, 4:59 PM IST

Updated : Feb 2, 2023, 5:26 PM IST

ಜಮ್ಮು ಮತ್ತು ಕಾಶ್ಮೀರದ ನರ್ವಾಲ್‌ ಕೈಗಾರಿಕಾ ಪ್ರದೇಶದಲ್ಲಿ ಅವಳಿ ಐಇಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ದೊರೆತಿದೆ.

govt-teacher-turned-let-terrorist-involved-in-multiple-blasts-in-jammu
ಜಮ್ಮು - ಕಾಶ್ಮೀರದ ಅವಳಿ ಸ್ಫೋಟ ಪ್ರಕರಣ: ಎಲ್​ಇಟಿ ಉಗ್ರನಾಗಿ ರೂಪಗೊಂಡಿದ್ದ ಸರ್ಕಾರಿ ಶಿಕ್ಷಕನ ಸೆರೆ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಸರ್ಕಾರಿ ಶಾಲಾ ಶಿಕ್ಷಕನ ಹುದ್ದೆಯಲ್ಲಿ ಇದ್ದುಕೊಂಡೇ ಭಯೋತ್ಪಾದಕ ಚಟುವಟಿಕೆಯಲ್ಲಿ ನಿರತನಾಗಿದ್ದ ಉಗ್ರನನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ. ಆರೀಫ್​ ಎಂಬಾತನೇ ಬಂಧಿತ ಶಿಕ್ಷಕ. ಲಷ್ಕರ್-ಎ-ತೋಯ್ಬಾ ಸಂಘಟನೆಯಲ್ಲಿ ಈತ ಗುರುತಿಸಿಕೊಂಡಿದ್ದ. ಇತ್ತೀಚೆಗೆ ಜಮ್ಮುವಿನಲ್ಲಿ ನಡೆದ ಅವಳಿ ಸ್ಫೋಟದಲ್ಲೂ ಭಾಗಿಯಾಗಿದ್ದ ಎಂದು ಡಿಜಿಪಿ ದಿಲ್ಬಾಗ್​ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ಜಮ್ಮುನಲ್ಲಿ ಅವಳಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಎನ್‌ಐಎ ತಂಡ ಭೇಟಿ

ಗಣರಾಜ್ಯೋತ್ಸವ ಆಚರಣೆಗೆ ಐದು ದಿನ ಬಾಕಿಯಿರುವಾಗಲೇ ಅಂದರೆ, ಜನವರಿ 21ರಂದು ಜಮ್ಮುವಿನ ನರ್ವಾಲ್‌ ಕೈಗಾರಿಕಾ ಪ್ರದೇಶದಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಸ್ಫೋಟಿಸಲಾಗಿತ್ತು. ಮೊದಲ ಸ್ಟೋಟದಲ್ಲಿ ಐವರು ಮತ್ತು ಎರಡನೇ ಸ್ಫೋಟದಲ್ಲಿ ನಾಲ್ವರು ಸೇರಿ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದರು. ಈ ಸ್ಫೋಟದ ಬಗ್ಗೆ ಭಾರತೀಯ ಸೇನೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಭದ್ರತಾ ಪರಿಣಾಮ ವಿಶ್ಲೇಷಣೆ ದಳ (ಎಸ್​ಐಎ) ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ತನಿಖೆ ಕೈಗೊಂಡಿದ್ದರು.

ಶಿಕ್ಷಕನೇ ಉಗ್ರ!​: ಬಂಧಿತ ಆರೀಫ್​ ಎಲ್​ಇಟಿ ಉಗ್ರ ಸಂಘಟನೆಯಲ್ಲಿ ತೊಡಗಿದ್ದು, ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದಾನೆ. ಈತ ನರ್ವಾಲ್‌ ಪ್ರದೇಶದಲ್ಲಿ ನಡೆದ ಸ್ಫೋಟಗಳ ಹಿಂದಿನ ರೂವಾರಿ. ಸ್ಫೋಟಗಳ ನಂತರ ಉಗ್ರನಿಗೆ ಹಣ ಕೂಡ ಸಂದಾಯವಾಗಿತ್ತು. 2010ರಲ್ಲಿ ಮೊದಲ ಬಾರಿಗೆ ಸರ್ಕಾರಿ ಶಿಕ್ಷಕನಾಗಿದ್ದ. ನಂತರ 2016ರಲ್ಲಿ ಶಿಕ್ಷಕ ಹುದ್ದೆಯನ್ನು ಕಾಯಂಗೊಳಿಸಲಾಗಿತ್ತು ಎಂದು ಡಿಜಿಪಿ ದಿಲ್ಬಾಗ್​ ಸಿಂಗ್​ ಮಾಹಿತಿ ನೀಡಿದರು.

ಡ್ರೋನ್​​ ಮೂಲಕ ಐಇಡಿ ರವಾನೆ: ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸುವುದರ ಭಾಗವಾಗಿ ಆರೀಫ್ ಕೆಲಸ ಮಾಡುತ್ತಿದ್ದ. ನರ್ವಾಲ್‌ ಪ್ರದೇಶದಲ್ಲಿ ಸ್ಫೋಟಕ್ಕೆ ಬಳಸಿದ ಐಇಡಿಗಳನ್ನು ಕಳೆದ ಡಿಸೆಂಬರ್​ನಲ್ಲಿ ಡ್ರೋನ್‌ಗಳ​ ಮೂಲಕ ಆರೀಫ್​ಗೆ ರವಾನಿಸಲಾಗಿತ್ತು. ನರ್ವಾಲ್‌ ಪ್ರದೇಶದಲ್ಲಿ ಸ್ಫೋಟಗಳ ಮೂಲಕ ಅತಿಹೆಚ್ಚು ಜನರಿಗೆ ಹಾನಿ ಮಾಡುವ ಉದ್ದೇಶವನ್ನು ಈ ಉಗ್ರ ಹೊಂದಿದ್ದ. ಆದರೆ, ಪೊಲೀಸರ ಸಮಯೋಚಿತ ಕಾರ್ಯದಿಂದ ಅನೇಕ ಜೀವಗಳು ಉಳಿದಿವೆ ಎಂದು ಡಿಜಿಪಿ ತಿಳಿಸಿದ್ದಾರೆ.

ಪರ್ಫ್ಯೂಮ್ ಐಇಡಿ ಪತ್ತೆ: ಬಂಧಿತ ಉಗ್ರನಿಂದ 'ಪರ್ಫ್ಯೂಮ್ ಐಇಡಿ'ಯನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಈ ಪರ್ಫ್ಯೂಮ್ ಬಾಟಲಿಯ ಮಾದರಿಯ ಐಇಡಿ ದೊರೆತಿದೆ. ಈ ಹಿಂದೆ ಯಾವತ್ತೂ ಇಂತಹ ಐಇಡಿ ಸಿಕ್ಕಿರಲಿಲ್ಲ. ಇದರ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ದಿಲ್ಬಾಗ್​ ಸಿಂಗ್ ಪ್ರಕರವನ್ನು ವಿವರಿಸಿದರು.

ಅಲ್ಲದೇ, ಈ ಹಿಂದೆ ನಡೆದ ಕತ್ರಾ ಬಸ್​ ದಾಳಿ ಮತ್ತು ಶಾಸ್ತ್ರಿನಗರದಲ್ಲಿ ನಡೆದ ಐಇಡಿ ದಾಳಿ ಪ್ರಕರಣದಲ್ಲಿ ಆರೀಫ್​ ಕೈವಾಡದ ಸಂಶಯವಿದೆ. ಈ ಘಟನೆಗಳ ಹಿಂದಿನ ರೂವಾರಿಯಾದ ಪಾಕಿಸ್ತಾನದ ಕರಾಚಿ ಮೂಲದ ಖಾಸೀಂನೊಂದಿಗೆ ಆರೀಫ್​ ಸಂಪರ್ಕ ಹೊಂದಿದ್ದಾನೆ ಎಂಬ ಮಾಹಿತಿಯೂ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಕೆಲಸದಲ್ಲಿ ಇದ್ದುಕೊಂಡೇ ಉಗ್ರರೊಂದಿಗೆ ನಂಟು: ಶಿಕ್ಷಕ, ಪೊಲೀಸ್​ ಸೇರಿ ಐವರು ವಜಾ

ಕಳೆದ ವರ್ಷದ ಇದೇ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ ಜಮ್ಮು ಮತ್ತು ಕಾಶ್ಮೀರದ ಐವರು ಸರ್ಕಾರಿ ನೌಕರರನ್ನು ಸೇವೆಯಿಂದಲೇ ವಜಾಗೊಳಿಸಲಾಗಿತ್ತು. ಮೂವರು ಪೊಲೀಸರು ಮತ್ತು ಓರ್ವ ಶಿಕ್ಷಕ ಕೂಡ ಇದರಲ್ಲಿ ಸೇರಿದ್ದ. ಇವರು ಉಗ್ರರೊಂದಿಗೆ ನಂಟು ಹೊಂದಿದ್ದು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.

Last Updated : Feb 2, 2023, 5:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.