ETV Bharat / bharat

ಮುಲಾಯಂ ಸಿಂಗ್​ರಿಗೆ ಪದ್ಮವಿಭೂಷಣ ನೀಡಿದ್ದು ಬಿಜೆಪಿಯ ಹೃದಯ ವೈಶಾಲ್ಯ: ಯುಪಿ ಸಚಿವ ಜೈವೀರ್ ಸಿಂಗ್

author img

By

Published : Jan 27, 2023, 4:05 PM IST

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದಕ್ಕೆ ಸಮಾಜವಾದಿ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಲಾಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

Honoured Mulayam Singh even though he ordered firing on kar sevaks UP Min
Honoured Mulayam Singh even though he ordered firing on kar sevaks UP Min

ಇಟಾವಾ (ಉತ್ತರ ಪ್ರದೇಶ) : ಸಮಾಜವಾದಿ ಪಕ್ಷದ ಮುಖಂಡರು ರಾಮಚರಿತಮಾನಸ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುತ್ತಿರುವುದನ್ನು ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ವಿವಾದದ ಬಗ್ಗೆ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮೌನವಾಗಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಎಸ್​​ಪಿ ನಾಯಕರು ಸಂಕುಚಿತ ಮನಸ್ಸಿನವರಾಗಿದ್ದು, ಇದು ಅವರ ನಡವಳಿಕೆಯಲ್ಲಿ ಪ್ರತಿಫಲಿಸುತ್ತಿದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ಗುಂಡು ಹಾರಿಸಲು ಮುಲಾಯಂ ಸಿಂಗ್ ಯಾದವ್ ಆದೇಶ ನೀಡಿದ್ದರೂ ನಾವು ಅವರಿಗೆ ಪದ್ಮವಿಭೂಷಣ ನೀಡಿದ್ದೇವೆ. ಇದು ಭಾರತೀಯ ಜನತಾ ಪಕ್ಷದ ಹೃದಯ ವೈಶಾಲ್ಯ ತೋರಿಸುತ್ತದೆ. ನಮ್ಮ ನಾಯಕರಿಗೆ ದೊಡ್ಡ ಮನಸ್ಸು ಮತ್ತು ಕ್ಷಮಿಸುವ ಸ್ವಭಾವವಿದೆ ಎಂದು ಸಚಿವ ಜೈವೀರ್ ಸಿಂಗ್ ಇಟಾವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕಲ್ಯಾಣ್ ಸಿಂಗ್ ನಿಧನರಾದಾಗ, ತುಂಬಾ ಹತ್ತಿರದಲ್ಲೇ ವಾಸಿಸುತ್ತಿರುವ ಅಖಿಲೇಶ್, ದಿವಂಗತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲು ಕೂಡ ಅವರ ನಿವಾಸಕ್ಕೆ ಹೋಗಲಿಲ್ಲ. ಆದರೆ ಮುಲಾಯಂ ಸಿಂಗ್ ನಿಧನರಾದಾಗ ಕಲ್ಯಾಣ್ ಸಿಂಗ್ ಅವರ ಪುತ್ರ ರಾಜವೀರ್ ಶ್ರದ್ಧಾಂಜಲಿ ಸಲ್ಲಿಸಲು ಹೋಗಿದ್ದರು ಎಂದು ಜೈವೀರ್ ಸಿಂಗ್ ತಿಳಿಸಿದರು.

ಮುಲಾಯಂ ಸಿಂಗ್ ಯಾದವ್‌ಗೆ ಭಾರತ ರತ್ನ ನೀಡಬೇಕೆಂದು ಎಸ್‌ಪಿ ಸಂಸದೆ ಡಿಂಪಲ್ ಯಾದವ್ ಅವರ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಅವರು ಪ್ರಧಾನಿಯಾದಾಗ ಅವರು ಅದನ್ನು ಮಾಡಬಹುದು. ಅವರಿಗೆ ನಮ್ಮ ಶುಭಾಶಯಗಳು ಎಂದು ಹೇಳಿದರು.

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ಬುಧವಾರ ಘೋಷಿಸಲಾಗಿದೆ. ಆದರೆ, ಮುಲಾಯಂ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಿದ ಕೇಂದ್ರದ ಕ್ರಮಕ್ಕೆ ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಮುಲಾಯಂ ಸಿಂಗ್ ಯಾದವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವ ಮೂಲಕ ಅವರ ಮೇರು ವ್ಯಕ್ತಿತ್ವ ಅಪಹಾಸ್ಯ ಮಾಡಿದೆ ಎಂದು ಹೇಳಿದರು. ‘ನೇತಾಜಿ’ ಮುಲಾಯಂ ಸಿಂಗ್ ಯಾದವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕಿತ್ತು ಎಂದು ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.

ಮಾಜಿ ರಕ್ಷಣಾ ಸಚಿವ ಮುಲಾಯಂ ಸಿಂಗ್ ಯಾದವ್ (82) ತಾವು ಚಿಕಿತ್ಸೆ ಪಡೆಯುತ್ತಿದ್ದ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಅಕ್ಟೋಬರ್ 10, 2022 ರಂದು ನಿಧನರಾದರು. ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು.

ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಸಂಸ್ಥಾಪಕ ಮತ್ತು ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅವರು 1989 ರಿಂದ 1991, 1993 ರಿಂದ 1995 ಮತ್ತು 2003 ರಿಂದ 2007 ರವರೆಗೆ ಮೂರು ಅಲ್ಪಾವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಯಾದವ್ ಅವರು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ತಂದೆ. ಮುಲಾಯಂ ಸಿಂಗ್ ಅವರು 1996-1998 ರಲ್ಲಿ ಭಾರತದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1974-2007 ರ ನಡುವೆ ಏಳು ಅವಧಿಗೆ ಉತ್ತರ ಪ್ರದೇಶದ ಶಾಸಕರಾಗಿ ಆಯ್ಕೆಯಾದರು.

ಇದನ್ನೂ ಓದಿ: 'ದ್ವೇಷವಿಲ್ಲವೆಂದು ಅರಿಯಲು 3 ಸಾವಿರ ಕಿಮೀ ನಡೆಯಬೇಕಾಯಿತಾ?' ರಾಹುಲ್ ವಿರುದ್ಧ ಅಣ್ಣಾಮಲೈ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.