ETV Bharat / bharat

G20 Summit: ದೆಹಲಿಗೆ ಅಭೂತಪೂರ್ವ ಪೊಲೀಸ್‌ ಭದ್ರತೆ; ವಾಹನ ಸಂಚಾರಕ್ಕೆ ನಿರ್ಬಂಧ

author img

By PTI

Published : Sep 8, 2023, 9:47 AM IST

ನವದೆಹಲಿಯ ಪ್ರಗತಿ ಮೈದಾನದಲ್ಲಿ ನಾಳೆ ಮತ್ತು ನಾಡಿದ್ದು (ಸೆ.9-10) ನಡೆಯಲಿರುವ ಜಿ20 ಶೃಂಗಸಭೆಗೆ ಮುನ್ನ ದೆಹಲಿ ಪೊಲೀಸರು ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

G20 summit
ಜಿ 20 ಶೃಂಗಸಭೆ

ನವದೆಹಲಿ : ಜಿ20 ಶೃಂಗಸಭೆಯ ಮುನ್ನಾದಿನದಂದು ರಾಷ್ಟ್ರ ರಾಜಧಾನಿಯಾದ್ಯಂತ ವಿಶೇಷವಾಗಿ ನವದೆಹಲಿ ಜಿಲ್ಲೆಯಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಪೊಲೀಸರು, ಅರೆಸೈನಿಕ ಪಡೆಗಳು ಸೇರಿದಂತೆ ಇತರೆ ಭದ್ರತಾ ಏಜೆನ್ಸಿಗಳನ್ನು ನಗರದಲ್ಲಿ ನಿಯೋಜಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜನೆಗೊಂಡಿರುವ ಮಾರ್ಕ್ಸ್ ವುಮೆನ್ ಮತ್ತು ಸಶಸ್ತ್ರ ಪಡೆಗಳು ಗಸ್ತು ತಿರುಗುತ್ತಿದ್ದು, ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ದೆಹಲಿ ಪೊಲೀಸರಿಗೆ 50,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, K9 ಶ್ವಾನದಳ ಮತ್ತು ಮೌಂಟೆಡ್ ಪೊಲೀಸರು ಸಹಾಯ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತ ನೀಡಿದ್ದಾರೆ.

ವಿಮಾನ ನಿಲ್ದಾಣದಿಂದ ಹೋಟೆಲ್‌ಗಳಿಗೆ ಮತ್ತು ಹೋಟೆಲ್‌ಗಳಿಂದ ಜಿ20 ಶೃಂಗಸಭೆ ನಡೆಯುವ ಸ್ಥಳಗಳವರೆಗೆ ವಿದೇಶಿ ಪ್ರತಿನಿಧಿಗಳಿಗೆ ದೆಹಲಿ ಪೊಲೀಸರು ಫೂಲ್‌ಪ್ರೂಫ್ ಭದ್ರತೆಯನ್ನು (Foolproof security) ಒದಗಿಸುತ್ತಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರಿಗೆ ಭಾರತೀಯ ವಾಯುಪಡೆ (IAF), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಮತ್ತು ಕೆಲವು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಂತಹ (CAPF) ವಿಶೇಷ ಕೇಂದ್ರೀಯ ಸಂಸ್ಥೆಗಳೂ ಸಹ ನೆರವು ನೀಡುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಧ್ವಜ ಮೆರವಣಿಗೆ (Flag marches), ವರ್ಧಿತ ಗಸ್ತು ಮತ್ತು ಪಿಕೆಟ್ ತಪಾಸಣೆ (Picket checking) ನಡೆಸಲಾಗುತ್ತಿದೆ. ಹಾಗೆಯೇ, ಮಧ್ಯಪ್ರದೇಶದ ಕರೇರಾದಲ್ಲಿರುವ ತರಬೇತಿ ಕೇಂದ್ರದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನಡೆಸಿದ ನಾಲ್ಕು ವಾರಗಳ ವಿಶೇಷ ತರಬೇತಿ ಅವಧಿಯನ್ನು ಪೂರ್ಣಗೊಳಿಸಿದ ಹತ್ತೊಂಬತ್ತು ಮಾರ್ಕ್ಸ್‌ ವುಮನ್‌ಗಳನ್ನೂ ಸಹ ಶೃಂಗಸಭೆಯ ಸಮಯದಲ್ಲಿ ಭದ್ರತೆಗಾಗಿ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಗಡಿಗಳಲ್ಲಿ ಹೆಚ್ಚುವರಿ ಪಿಕೆಟ್‌ಗಳನ್ನು ಅಳವಡಿಸಲಾಗುತ್ತಿದೆ. ಕಣ್ಗಾವಲಿಗಾಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಆರ್‌ಡಬ್ಲ್ಯೂಎ (ನಿವಾಸಿಗಳ ಕಲ್ಯಾಣ ಸಂಘಗಳು), ಎಮ್​ಡಬ್ಲ್ಯೂಎ (ಮಾರುಕಟ್ಟೆ ಕಲ್ಯಾಣ ಸಂಘಗಳು) ಮತ್ತು ಅಮನ್ ಸಮಿತಿ ಸದಸ್ಯರೊಂದಿಗೆ ನಿಯಮಿತ ಸಂವಹನ ನಡೆಸಲಾಗುತ್ತಿದೆ.

ವಾಹನ ಸಂಚಾರಕ್ಕೆ ನಿರ್ಬಂಧ: ಇಂದು ಬೆಳಗ್ಗಿನಿಂದಲೇ ದೆಹಲಿಯಲ್ಲಿ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಶುಕ್ರವಾರ ಬೆಳಗ್ಗೆ 5 ರಿಂದ ಭಾನುವಾರ ರಾತ್ರಿ 11:59 ರವರೆಗೆ ನಿಯಂತ್ರಿತ ವಲಯ-I ಎಂದು ಗೊತ್ತುಪಡಿಸಲಾಗಿದೆ. ಜೊತೆಗೆ, ಮೂರು ದಿನಗಳ ಕಾಲ ಆನ್‌ಲೈನ್ ಆರ್ಡರ್ ಡೆಲಿವರಿ ಮತ್ತು ಇತರೆ ಹಲವು ಸೇವೆಗಳ ಮೇಲೆ ನಿಷೇಧ ಹೇರಲಾಗಿದೆ.

ಎಲ್ಲಾ ಸಂಸ್ಥೆಗಳು ಅಂದರೆ ಶಾಲೆಗಳು, ಕಚೇರಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು ಮತ್ತು ಮಾರುಕಟ್ಟೆಗಳು ನವದೆಹಲಿಯಲ್ಲಿ ಸೆಪ್ಟೆಂಬರ್ 8 ರಿಂದ 10 ರವರೆಗೆ ಮುಚ್ಚಲ್ಪಡುತ್ತವೆ. ಹಾಲು, ತರಕಾರಿಗಳು, ಹಣ್ಣುಗಳು, ವೈದ್ಯಕೀಯ ಸಾಮಗ್ರಿಗಳಂತಹ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರ ದೆಹಲಿ ಪ್ರವೇಶಿಸಲು ಅನುಮತಿಸಲಾಗಿದೆ. ಶೃಂಗಸಭೆಯ ಸಂದರ್ಭದಲ್ಲಿ ದೆಹಲಿಗೆ ಭೇಟಿ ನೀಡುವ ನಿವಾಸಿಗಳಿಗೆ ಸರಿಯಾದ ಐಡಿ (ಗುರುತಿನ ಚೀಟಿ) ಅಗತ್ಯವಿರುತ್ತದೆ. ಮೆಟ್ರೋ ಚಾಲನೆಯಲ್ಲಿದೆ, ಆದರೆ ಕೆಲವು ನಿರ್ಬಂಧ ಹೇರಲಾಗಿದೆ.

ಸೆಪ್ಟೆಂಬರ್ 7 ರಿಂದ 10 ರವರೆಗೆ ಭಾರಿ ಸರಕು ವಾಹನಗಳು, ಮಧ್ಯಮ ಸರಕು ವಾಹನಗಳು ಮತ್ತು ಲಘು ಸರಕು ವಾಹನಗಳು ದೆಹಲಿ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಹಾಗೆಯೇ, ಅಂತರರಾಜ್ಯ ಬಸ್‌ಗಳು ಮತ್ತು ದೆಹಲಿ ಸಾರಿಗೆ ನಿಗಮ (DTC) ಬಸ್‌ಗಳು ಮತ್ತು ದೆಹಲಿ ಇಂಟಿಗ್ರೇಟೆಡ್ ಮಲ್ಟಿ ಮಾಡಲ್ ಟ್ರಾನ್ಸಿಟ್ ಸಿಸ್ಟಮ್ (DIMTS) ಬಸ್​ನಂತಹ ಸ್ಥಳೀಯ ನಗರ ಬಸ್‌ಗಳು ಮಥುರಾ ರಸ್ತೆಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. (ಪಿಟಿಐ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.