ETV Bharat / bharat

ಕೇರಳ: ಸ್ನಾನಕ್ಕೆ ತೆರಳಿದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

author img

By ETV Bharat Karnataka Team

Published : Oct 16, 2023, 7:09 PM IST

Updated : Oct 16, 2023, 10:21 PM IST

ಸ್ನಾನಕ್ಕೆಂದು ಕೆರೆಗೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತ್ರಿಶೂರ್​ನಲ್ಲಿ ಇಂದು ನಡೆದಿದೆ.

ನೀರಿನಲ್ಲಿ ಮುಳುಗಿ ಸಾವು
ನೀರಿನಲ್ಲಿ ಮುಳುಗಿ ಸಾವು

ತ್ರಿಶೂರ್ (ಕೇರಳ): ತ್ರಿಶೂರ್ ಜಿಲ್ಲೆಯ ಪುತ್ತೂರು ಕೈನೂರುನ ಕೆರೆಗೆ ಸ್ನಾನಕ್ಕೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ. ಮೃತರನ್ನು ಅರ್ಜುನ್ ಅಲೋಶಿಯಸ್, ಅಬಿ ಜಾನ್, ನಿವೇದ್ ಕೃಷ್ಣ ಮತ್ತು ಜಿಯಾದ್ ಹುಸೇನ್ ಎಂದು ಗುರುತಿಸಲಾಗಿದೆ. ಇವರು ತ್ರಿಶೂರ್‌ನ ಎಲ್ತುರುತ್ ಸೇಂಟ್ ಅಲೋಶಿಯಸ್ ಕಾಲೇಜು ಮತ್ತು ತ್ರಿಶೂರ್ ಸೇಂಟ್ ಥಾಮಸ್ ಕಾಲೇಜಿನ ಪದವಿ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಘಟನೆ ಸಂಭವಿಸಿದೆ.​ ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇತ್ತೀಚಿನ ಘಟನೆಗಳು: ಅಕ್ಟೋಬರ್​ 10 ರಂದು ದೊಡ್ಡಬಳ್ಳಾಪುರದಲ್ಲಿ ರೈತರೊಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದರು. ರಾಮಪುರ ಗ್ರಾಮದ ಕುಮಾರ್ (43) ಎಂಬವರು ದನಗಳ ಮೈ ತೊಳೆಯಲು ಜಾಲಿಕಟ್ಟೆಗೆ ಹೋಗಿದ್ದರು. ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದಾಗಿ ಮನೆಯವರು ​ಜಾಲಿಕಟ್ಟೆಗೆ ಬಳಿ ಬಂದು ನೋಡಿದಾಗ ಚಪ್ಪಲಿ ಕಂಡು ಬಂದಿದ್ದವು. ಆತಂಕಗೊಂಡ ಮನೆಯವರು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದ್ದರು. ಆದರೆ ಅಷ್ಟೊತ್ತಿಗೆ ರಾತ್ರಿಯಾಗಿದ್ದು ರೈತನ ಶವ ಹುಡುಕಲು ಸಾಧ್ಯವಾಗಿರಲಿಲ್ಲ. ಅಕ್ಟೋಬರ್​ 11ರಂದು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಶವ ಹೊರತೆಗೆದಿದ್ದರು.

ದಾವಣಗೆರೆ ಜಿಲ್ಲೆಯಲ್ಲಿ ಪಿಕ್​ನಿಕ್​ಗೆ ತೆರಳಿದ್ದ ತಂದೆ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಸೆಪ್ಟೆಂಬರ್​ 29 ರಂದು ನಡೆದಿತ್ತು. ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂಗೆ ಮಿಟ್ಲಕಟ್ಟೆ ಗ್ರಾಮದ ಚಂದ್ರು ಹಾಗೂ ಪತ್ನಿ ಮಕ್ಕಳು ರಜೆ ಹಿನ್ನೆಲೆಯಲ್ಲಿ ಡ್ಯಾಂ ನೋಡಲು ತೆರಳಿದ್ದರು. ಈ ವೇಳೆ ಮಕ್ಕಳಿಬ್ಬರು ಈಜುವುದಕ್ಕಾಗಿ ನೀರಿಗೆ ಇಳಿದಿದ್ದರು. ಇಬ್ಬರು ಮಕ್ಕಳು ಈಜುತ್ತಾ ನೀರಿನ ಸುಳಿಗೆ ಸಿಲುಕಿದ್ದರು. ಮಕ್ಕಳು ಕಾಪಾಡಲು ತಂದೆ ಚಂದ್ರು ನೀರಿಗಿಳಿದು ಓರ್ವ ಮಗನನ್ನು ದಡಕ್ಕೆ ಸುರಕ್ಷಿತವಾಗಿ ಕರೆ ತಂದಿದ್ದರು. ಆದರೆ ಇನ್ನೊಬ್ಬ ಮಗನನ್ನು ರಕ್ಷಿಸಲು ಹೋಗಿದ್ದು ಕಾಪಾಡಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ನೀರಿನ ಸುಳಿಗೆ ಮಗ ಶೌರ್ಯ ಪ್ರಾಣ ಕಳೆದುಕೊಂಡಿದ್ದ. ಕೊನೆಗೆ ಅಸ್ವಸ್ಥರಾದ ಚಂದ್ರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ನೀರಿನಲ್ಲಿ ಸಾವನ್ನಪ್ಪಿದ್ದ ಶೌರ್ಯನ ಮೃತದೇಹವನ್ನು ಹೊರತೆಗೆದಿದ್ದರು.

ಇದನ್ನೂ ಓದಿ: ಪಂಜಾಬ್: ಕಾಲುವೆಗೆ ಬಿದ್ದ ಸಿಮೆಂಟ್ ಮಿಕ್ಸರ್ ಟ್ರಕ್; ಚಾಲಕ, ಕಂಡಕ್ಟರ್​ಗೆ ಗಾಯ

Last Updated :Oct 16, 2023, 10:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.