ETV Bharat / bharat

Exclusive: ರೈಲು ಬೆಂಕಿ ದುರಂತ ಪ್ರಕರಣ: ಬೆಂಕಿಯ ಜ್ವಾಲೆ, ಪ್ರಯಾಣಿಕರ ಕಿರುಚಾಟ ಕೇಳಿಯೇ ನಿದ್ರೆಯಿಂದ ಎದ್ದ ಸ್ಥಳೀಯ ಜನರು

author img

By ETV Bharat Karnataka Team

Published : Aug 26, 2023, 6:26 PM IST

ತಮಿಳುನಾಡಿನ ಮಧುರೈ ಬಳಿ ನಡೆದ ರೈಲು ಬೆಂಕಿ ದುರಂತದ ಕುರಿತು ಸ್ಥಳೀಯ ಜನರು ಹಾಗೂ ಪ್ರತ್ಯಕ್ಷದರ್ಶಿಗಳು ಭಯಾನಕ ಮಾಹಿತಿ ನೀಡಿದ್ದಾರೆ. ನಾಲ್ವೈದು ಜನರ ರಕ್ಷಿಸಿದ ಉತ್ತರ ಪ್ರದೇಶದ ಮೂಲದ ವ್ಯಕ್ತಿಯೊಬ್ಬರ ಪತ್ನಿ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ.

exclusive-madurai-train-fire-accident-eyewitness-account-on-how-it-happened
ರೈಲು ಬೆಂಕಿ ದುರಂತ ಪ್ರಕರಣ: ಬೆಂಕಿಯ ಜ್ವಾಲೆ, ಪ್ರಯಾಣಿಕರ ಕಿರುಚಾಟ ಕೇಳಿಯೇ ನಿದ್ರೆಯಿಂದ ಎದ್ದ ಸ್ಥಳೀಯ ಜನರು

ಮಧುರೈ (ತಮಿಳುನಾಡು): ತಮಿಳುನಾಡಿನ ಮಧುರೈ ರೈಲ್ವೆ ನಿಲ್ದಾಣದ ಸಮೀಪ ರೈಲಿನಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಅಗ್ನಿ ದುರಂತದಲ್ಲಿ 10 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಹೊತ್ತಿ ಉರಿಯುತ್ತಿದ್ದ ರೈಲಿನ ಬೆಂಕಿಯ ಜ್ವಾಲೆ ಹಾಗೂ ಪ್ರಯಾಣಿಕರ ಕಿರುಚಾಟ ಕೇಳಿಯೇ ನಿದ್ರೆಯಲ್ಲಿದ್ದ ಸ್ಥಳೀಯ ಜನರು ಎಚ್ಚರಗೊಂಡಿದ್ದಾರೆ. ಈ ಅಗ್ನಿಯ ಜ್ವಾಲೆ ಎಷ್ಟಿತ್ತೆಂದರೆ ರೈಲಿನ ಸಮೀಪ ಕೂಡ ಜನರಿಗೆ ಹೋಗಲು ಸಾಧ್ಯವಾಗಿಲ್ಲ.

ತಮಿಳುನಾಡಿನ ರಾಮೇಶ್ವರಂ ತೆರಳುತ್ತಿದ್ದ ಖಾಸಗಿ ಪಾರ್ಟಿ ಕೋಚ್​ನಲ್ಲಿ ಬೆಳಗ್ಗೆ 5.15ರ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ. ನಿನ್ನೆ (ಆ. 25) ನಾಗರಕೋಯಿಲ್ ಜಂಕ್ಷನ್‌ನಲ್ಲಿ ರೈಲು ಸಂಖ್ಯೆ 16730 (ಪುನಲೂರ್-ಮಧುರೈ ಎಕ್ಸ್‌ಪ್ರೆಸ್)ಗೆ ಈ ಕೋಚ್​ ಜೋಡಿಸಲಾಗಿತ್ತು. ಮಧುರೈ ಸ್ಟೇಬ್ಲಿಂಗ್ ಲೈನ್‌ನಲ್ಲಿ ಇದನ್ನು ಬೇಪರ್ಡಿಸಿ ನಿಲ್ಲಿಸಲಾಗಿತ್ತು. ಆದರೆ, ಬೋಗಿಯಲ್ಲಿದ್ದ ಪ್ರಯಾಣಿಕರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಸಾಗಣೆ ಮಾಡಿದ್ದೇ ಈ ಬೆಂಕಿ ಅವಘಡಕ್ಕೆ ಕಾರಣ ಎಂದು ದಕ್ಷಿಣ ರೈಲ್ವೆ ಹೇಳಿದೆ.

ರೈಲು ಅಗ್ನಿ ದುರಂತ ನಡೆದ ಮಧುರೈ-ಬೋಡಿ ಲೈನ್ ರೈಲ್ವೆ ಯಾರ್ಡ್‌ಗೆ ಹೊಂದಿಕೊಂಡಂತೆ ವಾಸಿಸುತ್ತಿದ್ದ ಸ್ಥಳೀಯರು ಬೆಂಕಿಯ ಜ್ವಾಲೆ ನೋಡಿ ಬೆಚ್ಚಿಬಿದ್ದಿದ್ದಾರೆ. ಬೆಂಕಿಯಿಂದ ರೈಲಿನಲ್ಲಿ ಸಿಲುಕಿದವರ ರೋದನವನ್ನೇ ಕೇಳಿಯೇ ಹಾಸಿಗೆಯಿಂದ ಎದ್ದು ಓಡಿ ಬಂದಿದ್ದಾರೆ. ಅಗ್ನಿ ದುರಂತ ವಿಷಯ ತಿಳಿಸಲು ಕೆಲವರು ಸ್ಟೇಷನ್ ಮಾಸ್ಟರ್ ಕಚೇರಿಯತ್ತ ಸುಮಾರು ಒಂದು ಕಿ.ಮೀ ದೂರ ಧಾವಿಸಿದರೆ, ಕೆಲವರು ಸಮೀಪದ ಅಗ್ನಿಶಾಮಕ ಠಾಣೆಗೆ ಮಾಹಿತಿ ಮುಟ್ಟಿಸಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಜ್ವಾಲೆಗಳಿಂದ ಬೋಗಿ ಸಮೀಪ ತೆರಳಲು ಸಹ ತಮಗೆ ಸಾಧ್ಯವಾಗಲಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಾಣ ಉಳಿಸಿಕೊಳ್ಳಲು ರೈಲಿನಿಂದ ಜಿಗಿದ ಜನ: ಪ್ರತ್ಯಕ್ಷದರ್ಶಿಗಳಲ್ಲಿ ಒಬ್ಬರಾದ ಮಧುರೈ ನಿವಾಸಿ ಮನ್ನನ್ ಮಾತನಾಡಿ, "ನಾನು ರೈಲು ಬೆಂಕಿ ದುರಂತ ನಡೆದ ಸ್ಥಳದ ಸಮೀಪ ವಾಸಿಸುತ್ತಿದ್ದೇನೆ. ಮುಂಜಾನೆ ಜನರ ಕಿರುಚಾಟವನ್ನು ಕೇಳಿ ನಾನು ನಿದ್ರೆಯಿಂದ ಎದ್ದು ಹೊರಬಂದೆ. ಹಾಸಿಗೆ ಬಿಟ್ಟು ಸ್ಥಳಕ್ಕೆ ಧಾವಿಸಿದಾಗ ಕೆಲವರು ಉರಿಯುತ್ತಿರುವ ರೈಲಿನಿಂದ ಪ್ರಾಣ ಉಳಿಸಿಕೊಳ್ಳಲು ಜಿಗಿಯುವುದನ್ನು ಕಂಡೆ. ಬಹುಪಾಲು ಸಂತ್ರಸ್ತರು ಸ್ಲೀಪರ್ ಕಂಪಾರ್ಟ್‌ಮೆಂಟ್‌ನ ಮೇಲ್ಭಾಗದಲ್ಲಿ ಮಲಗಿದ್ದರು'' ಎಂದು ಭಯಾನಕ ದೃಶ್ಯವನ್ನು ವಿವರಿಸಿದರು.

ನಾಲ್ವೈದು ಜನರ ರಕ್ಷಿಸಿದ.. ಆದರೆ, ಪತ್ನಿ ಉಳಿಯಲಿಲ್ಲ: ಈ ಘಟನೆಯಲ್ಲಿ ಪತ್ನಿಯನ್ನು ಕಳೆದುಕೊಂಡ ಉತ್ತರ ಪ್ರದೇಶದ ಪ್ರಯಾಣಿಕ ಶಿವ ಪ್ರತಾಪ್ ಸಿಂಗ್ ಚೌಹಾಣ್ ಕೂಡ ಈ ದುರಂತದ ಪ್ರತ್ಯಕ್ಷದರ್ಶಿಯಾಗಿದ್ದಾರೆ. ನಾಲ್ವೈದು ಜನರನ್ನು ಚೌಹಾಣ್​ ರಕ್ಷಿಸಿ ಹಿರೋ ಆಗಿದ್ದರೂ, ತಮ್ಮ ಪತ್ನಿ ಮಿಥಿಲೇಶ್‌ ಕುಮಾರಿ ಹಾಗೂ ಸೋದರ ಮಾವ ಶತ್ರುಕಾನನ್‌ ಸಿಂಗ್‌ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು 'ಈಟಿವಿ ಭಾರತ್'​ ಜೊತೆಗೆ ತಮ್ಮ ಅಳಲು ತೋಡಿಕೊಂಡರು.

"ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡ ನಂತರ ಕೋಚ್​ನಲ್ಲಿ ತೀವ್ರವಾದ ಬೆಂಕಿ ಕಾಣಿಸಿಕೊಂಡಿತು. ನಾನು ನಾಲ್ಕೈದು ಜನರನ್ನು ಬೆಂಕಿಯ ದವಡೆಯಿಂದ ಪಾರು ಮಾಡುವಲ್ಲಿ ಯಶಸ್ವಿಯಾದೆ. ಆದಾಗ್ಯೂ ಅಗ್ನಿ ಜ್ವಾಲೆ ದಟ್ಟವಾಗುತ್ತಿದ್ದಂತೆ ನನ್ನ ಹೆಂಡತಿ ಮತ್ತು ಸೋದರ ಮಾವನನ್ನು ಉಳಿಸಿಕೊಳ್ಳಲು ಆಗಲಿಲ್ಲ'' ಎಂದು ಚೌಹಾಣ್ ಕಣ್ಣೀರು ಹಾಕಿದರು.

ಈ ದುರಂತದಲ್ಲಿ ಬದುಕುಳಿದ ಇನ್ನೂ ಕೆಲವರು 'ಈಟಿವಿ ಭಾರತ್​'ನೊಂದಿಗೆ ಮಾತನಾಡಿ, ''ಈ ಪ್ರವಾಸವನ್ನು ಆಯೋಜಿಸಿದ್ದ ಬೇಸಿನ್ ಟೂರ್ಸ್ ಮತ್ತು ಟ್ರಾವೆಲ್ಸ್ ಎಂಬ ಕಂಪನಿಯು ಎರಡು ಸಿಲಿಂಡರ್‌ಗಳನ್ನೂ ವ್ಯವಸ್ಥೆ ಮಾಡಿತ್ತು. ರೈಲಿಗೆ ಬೆಂಕಿ ಹೊತ್ತಿಕೊಂಡಾಗ ಕೆಲವರು ಬಾಗಿಲು ಮುಚ್ಚಿದ್ದರು. ಇದರಿಂದ ಹೊರಬರಲು ಸಾಧ್ಯವಾಗಲಿಲ್ಲ'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Madurai Train Fire Accident: ಮಧುರೈ ರೈಲಿನಲ್ಲಿ ಅಗ್ನಿ ಅವಘಡ: ಸಾವಿನ ಸಂಖ್ಯೆ 9ಕ್ಕೆ ಏರಿಕೆ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.