ಬಿಹಾರ ವಿಧಾನಸಭೆ ಆವರಣದಲ್ಲಿ ಮದ್ಯದ ಬಾಟಲಿಗಳು ಪತ್ತೆ: ನಿತೀಶ್‌ ಸರ್ಕಾರಕ್ಕೆ ಮುಜುಗರ

author img

By

Published : Dec 1, 2021, 7:06 AM IST

Empty liquor bottles found in Bihar legislature premises, uproar ensues
ಬಿಹಾರ ವಿಧಾನಸಭೆ ಆವರಣದಲ್ಲಿ ಮದ್ಯದ ಖಾಲಿ ಬಾಟಲಿಗಳು ಪತ್ತೆ ()

ಕಳೆದ ತಿಂಗಳಷ್ಟೇ ಬಿಹಾರದ ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಮುಜಾಫರ್‌ಪುರ ಮತ್ತು ಸಮಸ್ತಿಪುರ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದರು. ಈ ವಿಷಯವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ನಿತೀಶ್ ಕುಮಾರ್‌ ಸರ್ಕಾರವನ್ನು ಭಾರಿ ಟೀಕೆಗೆ ಒಳಪಡಿಸಿದ್ದವು.

ಪಾಟ್ನಾ(ಬಿಹಾರ): ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಸರ್ಕಾರಕ್ಕೆ ಮುಜುಗರ ಉಂಟಾಗುವಂತಹ ಘಟನೆ ನಡೆದಿದೆ. ವಿಧಾನಸಭೆಯ ಆವರಣದಲ್ಲಿ ಮದ್ಯದ ಖಾಲಿ ಬಾಟಲಿ​ಗಳು ಪತ್ತೆಯಾಗಿವೆ.

ಕಳ್ಳಭಟ್ಟಿ ಪ್ರಕರಣಗಳಲ್ಲಿ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದ್ದು ನಿತೀಶ್ ನೇತೃತ್ವದ ಸರ್ಕಾರಕ್ಕೆ ಕಪ್ಪು ಚುಕ್ಕೆಯೆಂದು ಟೀಕಿಸಲಾಗಿದೆ. ವಿಧಾನಸಭೆಯ ಆವರಣದಲ್ಲಿನ ದ್ವಿಚಕ್ರ ವಾಹನಗಳ ಪಾರ್ಕಿಂಗ್​ಗೆ ಮೀಸಲಿಟ್ಟ ಜಾಗದ ಮರದ ಕೆಳಗೆ ಮದ್ಯದ ಖಾಲಿ ಬಾಟಲಿಗಳು ಪತ್ತೆಯಾಗಿವೆ. ಸಿಎಂ ಅವರ ಕೊಠಡಿಗೆ ಸುಮಾರು ಅಂದಾಜು ನೂರು ಮೀಟರ್ ದೂರದಲ್ಲಿ ಇವು ದೊರೆತಿದ್ದು, ಅತಿರೇಕದ ಸಂಗತಿ ಎಂದು ವಿಪಕ್ಷ ನಾಯಕ, ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್ ಆಕ್ರೋಶ ವ್ಯಕ್ತಪಡಿಸಿದರು.

ಮದ್ಯವರ್ಜನೆ ಪ್ರಮಾಣದ ಬೆನ್ನಲ್ಲೇ ಘಟನೆ:

ಸೋಮವಾರವಷ್ಟೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮದ್ಯಸೇವನೆ ಮಾಡುವುದಿಲ್ಲ ಎಂದು ಸೆಂಟ್ರಲ್ ಹಾಲ್​ನಲ್ಲಿ ಎನ್​ಡಿಎ ನಾಯಕರು ಪ್ರಮಾಣ ಮಾಡಿದ್ದರು. ಈ ಕಾರ್ಯಕ್ರಮ ನಡೆದ 24 ಗಂಟೆಯೊಳಗೆ ಅದೇ ಜಾಗದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ತೇಜಸ್ವಿ ಯಾದವ್ ಟೀಕಿಸಿದ್ದಾರೆ.

ಆರ್‌ಜೆಡಿ ನಾಯಕರು ಅಕ್ರಮ ಮದ್ಯ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಎನ್​ಡಿಎ ನಾಯಕರು ಆರೋಪಿಸುತ್ತಿದ್ದಾರೆ. ಆರ್​ಜೆಡಿ ನಾಯಕರೇ ವಿಧಾನಸಭೆಯ ಆವರಣದಲ್ಲಿ ಬಾಟಲಿಗಳನ್ನು ಹಾಕಿದ್ದಾರೆ ಎಂದು ಅವರು ಆರೋಪಿಸಿದರೂ ಅಚ್ಚರಿಯಿಲ್ಲ ಎಂದು ತೇಜಸ್ವಿ ಯಾದವ್ ವ್ಯಂಗ್ಯವಾಡಿದರು.

'ದೊಡ್ಡ ಮೀನುಗಳಿಗೆ ಶಿಕ್ಷೆಯಾಗಲಿ':

ಬಿಹಾರದಲ್ಲಿ ಅಧಿವೇಶನ ನಡೆಯುತ್ತಿದ್ದು, ಮಧ್ಯಾಹ್ನ ಕಲಾಪ ಆರಂಭಗೊಂಡಾಗ ಸಿಎಂ ಹಾಗೂ ಗೃಹಸಚಿವರೂ ಆದ ನಿತೀಶ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿತೀಶ್ ಕುಮಾರ್, ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಅಪರಾಧಿಗಳು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಸದನಕ್ಕೆ ತಿಳಿಸಿದರು. ಈ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸಿಎಂ ಸೂಚನೆ ನೀಡಿದರು.

ನಿತೀಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ಯಾದವ್ ದಯವಿಟ್ಟು ಕೆಳಹಂತದ ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಬೇಡಿ ಮತ್ತು ದೊಡ್ಡ ಮೀನುಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧ

ಬಿಹಾರದಲ್ಲಿ 2016ರ ಏಪ್ರಿಲ್‌ನಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 2015ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಬಗ್ಗೆ ನಿತೀಶ್​​​ ಕುಮಾರ್ ರಾಜ್ಯದ ಮಹಿಳೆಯರಿಗೆ ಭರವಸೆ ನೀಡಿದ್ದರು. ಕಳೆದ ತಿಂಗಳಷ್ಟೇ ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್, ಮುಜಾಫರ್‌ಪುರ ಮತ್ತು ಸಮಸ್ತಿಪುರ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: Poorest States of India: ಬಿಹಾರ, ಜಾರ್ಖಂಡ್, ಯುಪಿ ದೇಶದ ಅತ್ಯಂತ ಬಡ ರಾಜ್ಯಗಳು- ನೀತಿ ಆಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.