ETV Bharat / bharat

ಅದ್ಭುತ ವಿದೇಶಾಂಗ ನೀತಿಗೆ 'ರಾಮಾಯಣ'ದ ನಿದರ್ಶನ ಕೊಟ್ಟ ಡಾ.ಎಸ್.ಜೈಶಂಕರ್​

author img

By PTI

Published : Jan 7, 2024, 9:23 AM IST

'ರಾಮಾಯಣ' ಮಹಾಕಾವ್ಯದ ಘಟನಾವಳಿಗಳು ಈಗಲೂ ಪ್ರಸ್ತುತ ಎಂಬುದನ್ನು ವಿದೇಶಾಂಗ ಸಚಿವ ಡಾ.ಜೈಶಂಕರ್​ ಕಾರ್ಯಕ್ರಮವೊಂದರಲ್ಲಿ ನಿದರ್ಶನ ಸಮೇತ ವಿವರಿಸಿದರು.

ವಿದೇಶಾಂಗ ಸಚಿವ
ವಿದೇಶಾಂಗ ಸಚಿವ

ತಿರುವನಂತಪುರಂ(ಕೇರಳ): ರಾಮಾಯಣ ಬರೀ ಮಹಾಕಾವ್ಯವಲ್ಲ, ಅದೊಂದು ಜೀವನಸಾರ. ಅದರ ಘಟನಾವಳಿಗಳು ಕಾಲಾತೀತವಾಗಿ ಪ್ರಸ್ತುತ. ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ರಾಜತಾಂತ್ರಿಕ ವ್ಯವಹಾರಗಳಿಗೆ ರಾಮಾಯಣದ ಕೆಲವು ಮಹೋನ್ನತ ನಿದರ್ಶನಗಳನ್ನು ನೀಡಿದ್ದಾರೆ.

ಜಗತ್ತನ್ನೇ ಸುತ್ತು ಹಾಕಿ ದಿಗ್ವಿಜಯ ಸಾಧಿಸಿದ್ದ ಪರಶುರಾಮರು ಭಗವಾನ್​ ಶ್ರೀರಾಮನನ್ನೇ ಪರೀಕ್ಷಿಸಿದ್ದರು. ಅದರಂತೆ ನೆರೆಹೊರೆಯ ರಾಷ್ಟ್ರಗಳೂ ನಮ್ಮನ್ನು ಪರೀಕ್ಷೆಗೆ ಒಡ್ಡುತ್ತವೆ. ಅದರಲ್ಲಿ ನಾವು ಸಾಫಲ್ಯ ಸಾಧಿಸಬೇಕು ಎಂದು ಚೀನಾ ಮತ್ತು ಪಾಕಿಸ್ತಾನದ ಕುತಂತ್ರವನ್ನು ಅವರು ಪರೋಕ್ಷವಾಗಿ ಟೀಕಿಸಿದರು.

ಸಂಘಪರಿವಾರದ ಪ್ರಮುಖದ ಸಂಘಟನೆಯಾದ ಭಾರತೀಯ ವಿಚಾರ ಕೇಂದ್ರ (ಬಿವಿಕೆ) ಇಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಭಗವಾನ್ ರಾಮ ಬಿಲ್ಲು ಮುರಿಯುವ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಇಂದಿನ ಜಗತ್ತಿನಲ್ಲಿ ಇತರ ರಾಷ್ಟ್ರಗಳೂ ಸಹ ಇದೇ ರೀತಿಯ ಪರೀಕ್ಷೆಗಳಿಗೆ ನಮ್ಮನ್ನು ಗುರಿ ಮಾಡುತ್ತಿವೆ ಎಂದರು.

ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಸಹಜವಾಗಿ ಭಿನ್ನಾಭಿಪ್ರಾಯಗಳು ಇರುತ್ತವೆ. ಭಾರತ ಇಂದು ಬಲವಾದ ಆರ್ಥಿಕತೆಯನ್ನು ಹೊಂದುವ ಮೂಲಕ, ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣವಾಗಿದೆ. ಪರಮಾಣು ಪರೀಕ್ಷೆ ಮತ್ತು ಪರಮಾಣು ಶಸ್ತ್ರಾಗಾರವನ್ನು ಅಭಿವೃದ್ಧಿಪಡಿಸುವ ಮೂಲಕವೂ ನಾವು ಪರೀಕ್ಷೆಗಳನ್ನು ಮೆಟ್ಟಿ ನಿಂತಿದ್ದೇವೆ. ಅಂದು ರಾಮ ಬಿಲ್ಲು ಮುರಿದಂತೆ, ನಾವು ಪರಮಾಣು ತಂತ್ರಜ್ಞಾನದ ಪರೀಕ್ಷೆ ಮಾಡಿದ್ದೇವೆ ಎಂದು ವಿವರಿಸಿದರು.

ಲಕ್ಷ್ಮಣನಂತಹ ಮಿತ್ರರಾಷ್ಟ್ರಗಳು ಬೇಕು: ಮಿತ್ರರಾಷ್ಟ್ರಗಳ ಸಂಬಂಧಗಳು ಹೇಗಿರಬೇಕು ಎಂಬುದನ್ನು ಅವರು ರಾಮ-ಲಕ್ಷ್ಮಣರ ಸಹೋದರತೆಯನ್ನು ಇಲ್ಲಿ ಉದಾಹರಿಸಿದರು. ರಾಮನಿಗೆ ಸಹೋದರ ಲಕ್ಷ್ಮಣನಿದ್ದರೆ ಸಾಕಿತ್ತು. ಸಂಕಲ್ಪ ಸಿದ್ಧಿಗೆ, ಪರಿಸ್ಥಿತಿ ನಿಭಾಯಿಸಲು ಸಹೋದರನ ಅಗತ್ಯವಿತ್ತು. ಸೀತೆಯನ್ನು ಅಪಹರಿಸಿದಾಗ, ರಾಮನು ಮಾಡಿದ ಸಂಕಲ್ಪಕ್ಕೆ ಬಲವಾಗಿ ನಿಂತವನೇ ಸಹೋದರ ಲಕ್ಷ್ಮಣ. ಆತನಿಂದಾಗಿಯೇ ರಾವಣ ವಧೆಯಾಯಿತು. ಅದರಂತೆ ಎಲ್ಲ ರಾಷ್ಟ್ರಗಳಿಗೆ ಲಕ್ಷ್ಮಣನಂತಹ ಸಹೋದರನಂತಹ ಮಿತ್ರರಿರಬೇಕು. ಆಗ ಎರಡೂ ರಾಷ್ಟ್ರಗಳು ಅಭ್ಯುದಯ ಸಾಧಿಸಲು ಸಾಧ್ಯ ಎಂದರು.

ಹನುಮ ಶ್ರೇಷ್ಠ ರಾಜತಾಂತ್ರಿಕ: ಮಹಾಕಾವ್ಯದ ಪ್ರಮುಖ ಪಾತ್ರಧಾರಿ ಹನುಮಂತನನ್ನು "ಶ್ರೇಷ್ಠ ರಾಜತಾಂತ್ರಿಕ" ಎಂದು ವಿದೇಶಾಂಗ ಸಚಿವರು ಬಣ್ಣಿಸಿದರು. ಹನುಮನ ಶಕ್ತಿ ಮತ್ತು ಯುಕ್ತಿ ಅಗಾಧ. ಅಂತಹ ರಾಜತಾಂತ್ರಿಕತೆಯನ್ನು ನಾವು ಬೆಳೆಸಿಕೊಳ್ಳಬೇಕು. ಆತನ ನಡೆ, ಗುರಿ ಎಂದೂ ತಪ್ಪಿಲ್ಲ ಎಂದು ಹೇಳಿದರು.

ಅಹಂಕಾರಿಗಳು ಮತ್ತು ತಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೀಗುವ ರಾಷ್ಟ್ರಗಳು ರಾವಣನಿಗೆ ಹೋಲಿಸಿದ ಜೈಶಂಕರ್​, ರಾವಣನ ದರ್ಪವೇ ಆತನಿಗಿದ್ದ ವರ. ಈಗಿನ ಕೆಲ ರಾಷ್ಟ್ರಗಳು ತಮ್ಮಲ್ಲಿರುವ ಶಕ್ತಿಯಿಂದಾಗಿ ಇತರ ದೇಶಗಳ ಮೇಲೆ ಪ್ರಭುತ್ವ ಸಾಧಿಸಲು ಮುಂದಾಗುತ್ತವೆ. ಆದರೆ, ಅಸಲಿ ಸತ್ಯವೇ ಬೇರೆ ಇರುತ್ತದೆ ಎಂದು ಡ್ರ್ಯಾಗನ್​ ರಾಷ್ಟ್ರ ಚೀನಾಕ್ಕೆ ಪರೋಕ್ಷವಾಗಿ ತಿವಿದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.