ETV Bharat / bharat

ಸಾಮಾಜಿಕ ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಉಚಿತ ಕೊಡುಗೆ ಎನ್ನಲಾಗದು: ಡಿಎಂಕೆ ಪ್ರತಿಪಾದನೆ

author img

By

Published : Aug 23, 2022, 6:02 PM IST

ಉಚಿತ ಕೊಡುಗೆಗಳನ್ನು ನೀಡುವುದರ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟಿರುವ ತಮಿಳುನಾಡಿನ ಆಡಳಿತ ಪಕ್ಷ, 'ಉಚಿತ ಕೊಡುಗೆ' ಎಂಬ ಪದ ಬಳಕೆ ತಪ್ಪು. ಅದು ಅನುಚಿತ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ಸಾಮಾಜಿಕ ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ಉಚಿತ ಕೊಡುಗೆ ಎನ್ನಲಾಗದು: ಡಿಎಂಕೆ
DMK says socio economic development initiatives cannot be termed freebies

ಚೆನ್ನೈ: ಹಿಂದುಳಿದ, ಅತ್ಯಂತ ಹಿಂದುಳಿದ ಮತ್ತು ಸಮಾಜದ ಕಡೆಗಣಿಸಲ್ಪಟ್ಟ ವರ್ಗಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಜಾರಿಗೊಳಿಸಲಾಗುವ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಉಪಕ್ರಮಗಳನ್ನು ಉಚಿತ ಕೊಡುಗೆಗಳೆಂದು ಹೇಳುವುದು ಸ್ವೀಕಾರಾರ್ಹವಲ್ಲ ಎಂದು ಡಿಎಂಕೆ ಭಾನುವಾರ ಪ್ರತಿಪಾದಿಸಿದೆ.

ಉಚಿತ ಕೊಡುಗೆಗಳನ್ನು ನೀಡುವುದರ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟಿರುವ ತಮಿಳುನಾಡಿನ ಆಡಳಿತ ಪಕ್ಷ, 'ಉಚಿತ ಕೊಡುಗೆ' ಎಂಬ ಪದ ಬಳಕೆ ತಪ್ಪು. ಅದು ಅನುಚಿತ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ಅರ್ಜಿದಾರರಾಗಿರುವ ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ, ಸಮಾಜದ ಹಿಂದುಳಿದ, ಅತ್ಯಂತ ಹಿಂದುಳಿದ ಮತ್ತು ಇತರ ಎಲ್ಲ ತುಳಿತಕ್ಕೊಳಗಾದ ವರ್ಗಗಳ ಸಾಮಾಜಿಕ ಆರ್ಥಿಕ ಉನ್ನತಿಯು ದ್ರಾವಿಡ ಚಳವಳಿಯ ಸಿದ್ಧಾಂತದ ತಿರುಳಾಗಿದೆ. ಜಸ್ಟಿಸ್ ಪಾರ್ಟಿ ಸಮಯದಲ್ಲಿ ಶತಮಾನದ ಹಿಂದೆ ಆರಂಭವಾದ ದ್ರಾವಿಡ ಚಳವಳಿಯ ಮೂಲ ಹಾಗೂ ಅದರ ಉಚ್ಛ್ರಾಯವನ್ನು ಪ್ರಸ್ತಾಪಿಸಿದ ಭಾರತಿ, ತುಳಿತಕ್ಕೊಳಗಾದವರು ಮತ್ತು ಹಿಂದುಳಿದವರಿಗೆ ಶಿಕ್ಷಣ ನೀಡುವಲ್ಲಿ ಜಸ್ಟಿಸ್ ಪಾರ್ಟಿ ಮುಖಂಡ ತ್ಯಾಗರಾಯಾರ್ (1852-1925) ಅವರ ಕೊಡುಗೆ ಅಪಾರ. ಅವರು ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ, ಪುಸ್ತಕ ಮತ್ತು ಮಧ್ಯಾಹ್ನದ ಊಟವು ಉಚಿತವಾಗಿ ಲಭ್ಯವಾಗುವಂತೆ ಮಾಡಿದರು ಎಂದು ಮಾಧ್ಯಮಗಳ ಮುಂದೆ ವಿವರಿಸಿದರು.

ಇದು ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ಹೋಗಲು ಉತ್ತೇಜನ ನೀಡಿತು. ಇಂತಹ ಉಪಕ್ರಮಗಳನ್ನು ನೀವು ಹೇಗೆ ಉಚಿತ ಕೊಡುಗೆ ಎಂದು ಹೇಳುತ್ತೀರಿ? ಇಂಥ ಉಪಕ್ರಮಗಳು ಕಾಲಾನಂತರದಲ್ಲಿ ವಿಕಸನಗೊಂಡಿವೆ. ಮಧ್ಯಾಹ್ನದ ಊಟದ ಯೋಜನೆಯು ಈಗ ಪೌಷ್ಟಿಕಾಂಶ ಊಟದ ಕಾರ್ಯಕ್ರಮವಾಗಿ ಮುಂದುವರೆದಿದೆ. ಈಗ ನಮ್ಮ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಉಪಹಾರ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂದು ಭಾರತಿ ತಿಳಿಸಿದರು.

ಹೀಗಾಗಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಉಪಕ್ರಮಗಳನ್ನು ಉಚಿತ ಕೊಡುಗೆಗಳೆಂದು ಹೇಳುವುದು ತಪ್ಪು ಎಂದು ಅವರು ಪ್ರತಿಪಾದಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.