ನ್ಯಾಯದ ನಿರಾಕರಣೆ ಅರಾಜಕತೆಗೆ ಕಾರಣವಾಗಲಿದೆ: ಸಿಜೆ ರಮಣ ಆತಂಕ

author img

By

Published : May 14, 2022, 8:07 PM IST

Chief justice of India Justice  Nuthalapati Venkata Raman

ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಹೈಕೋರ್ಟ್‌ನ ಹೊಸ ಸಂಕೀರ್ಣವನ್ನು 900 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಸಂಕೀರ್ಣಕ್ಕೆ ಶಿಲಾನ್ಯಾಸ ನ್ಯಾ. ಎನ್​.ವಿ.ರಮಣ ನೆರವೇರಿಸಿದರು.

ಶ್ರೀನಗರ (ಜಮ್ಮು-ಕಾಶ್ಮೀರ): ನ್ಯಾಯದ ನಿರಾಕರಣೆ ಅಂತಿಮವಾಗಿ ಅರಾಜಕತೆಗೆ ಕಾರಣವಾಗಲಿದೆ. ಅಲ್ಲದೇ, ನ್ಯಾಯಕ್ಕಾಗಿ ಜನತೆ ನ್ಯಾಯಲಯದ ಹೊರಗಿನ ಕಾರ್ಯ ವಿಧಾನಗಳಿಗೆ ಹೊರಳುವ ಮೂಲಕ ಶೀಘ್ರದಲ್ಲೇ ನ್ಯಾಯಾಂಗದ ವ್ಯವಸ್ಥೆ ಅಸ್ಥಿರಗೊಳ್ಳಬಹುದು ಎಂದು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಆತಂಕ ವ್ಯಕ್ತಪಡಿಸಿದ್ಧಾರೆ.

ಶ್ರೀನಗರದ ಬೆಮಿನಾದಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಹೈಕೋರ್ಟ್‌ನ ಹೊಸ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ನಾನು ಮೂಲಸೌಕರ್ಯಗಳ ಅಭಿವೃದ್ಧಿಯ ಅಗತ್ಯವನ್ನು ನಿರಂತರವಾಗಿ ಒತ್ತಿಹೇಳಿದ್ದೇನೆ. ದುಃಖಕರವೆಂದರೆ, ಸ್ವಾತಂತ್ರ್ಯದ ನಂತರವೂ ನ್ಯಾಯಾಂಗದಲ್ಲಿನ ಮೂಲ ಸೌಕರ್ಯವನ್ನು ಮರು ಪರಿಶೀಲಿಸಲಾಗಿಲ್ಲ. ಆಧುನಿಕ ಭಾರತದಲ್ಲಿ ನಮ್ಮ ನ್ಯಾಯಾಲಯಗಳನ್ನು ಒಳಗೊಳ್ಳುವಿಕೆಯಲ್ಲಿ ನಾವು ತುಂಬಾ ಹಿಂದುಳಿದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಶೇ.22ರಷ್ಟು ಹುದ್ದೆಗಳು ಖಾಲಿ: ಕಾನೂನಿನ ವ್ಯವಸ್ಥೆ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಒಂದು ಪ್ರಮುಖ ಸವಾಲು ಎಂದರೆ ಎಲ್ಲರಿಗೂ ತ್ವರಿತ ಮತ್ತು ಕೈಗೆಟುಕುವ ನ್ಯಾಯವನ್ನು ನೀಡಲು ಈಗ ನ್ಯಾಯ ವ್ಯವಸ್ಥೆಯಲ್ಲಿ ಕೆಲ ಕೊರತೆಗಳು ಇವೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಸುಮಾರು ಶೇ.22ರಷ್ಟು ಹುದ್ದೆಗಳು ಇನ್ನೂ ಖಾಲಿ ಇವೆ. ಈ ಕೊರತೆ ತುಂಬಲು ತಕ್ಷಣ ಕ್ರಮಗಳನ್ನು ಪ್ರಾರಂಭಿಸಬೇಕು. ಜತೆಗೆ ಎಲ್ಲ ನ್ಯಾಯಾಧೀಶರಿಗೆ ಭದ್ರತೆ ಮತ್ತು ವಸತಿ ಸೌಕರ್ಯ ಒದಗಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.

ಜಿಲ್ಲಾ ನ್ಯಾಯಾಲಯಗಳೊಂದಿಗೆ ಜನರೊಂದಿಗೆ ನೇರ ಸಂಪರ್ಕ ಹೊಂದಿರಬೇಕು. ಈ ನಿಟ್ಟಿನಲ್ಲಿ ಕಾನೂನು ಅರಿವು ಮತ್ತು ಕಾನೂನು ಶಿಕ್ಷಣದ ಮಹತ್ವ ತಿಳಿಯುವುದು ಅಗತ್ಯವಾಗಿದೆ. ಸಾಮಾನ್ಯ ಜನರು ಇಂದಿಗೂ ನ್ಯಾಯಾಂಗವನ್ನು ತಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಅಂತಿಮ ರಕ್ಷಕ ಎಂದು ಪರಿಗಣಿಸುತ್ತಾರೆ. ಕಾನೂನಿನ ತಿಳಿವಳಿಕೆ ಇಲ್ಲದವರು ಮತ್ತು ಬಡವರಿಗೆ ನ್ಯಾಯಾಂಗದ ಮೇಲೆ ಭರವಸೆ ಹೆಚ್ಚಿಸುವ ಮೂಲಕ ಅವರಿಗೆ ನಿರಾಳರನ್ನಾಗಿ ಮಾಡಲು ಪ್ರಯತ್ನಿಸಬೇಕೆಂದು ಹೇಳಿದರು.

ಇದನ್ನೂ ಓದಿ: ತ್ರಿಪುರಾ ನೂತನ ಸಿಎಂ ಆಗಿ ಮಾಣಿಕ್ ಸಹಾ... ದಂತವೈದ್ಯನಿಗೆ ಬಿಜೆಪಿ ಹೈಕಮಾಂಡ್ ಮಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.