ETV Bharat / bharat

ವಾಯು ಮಾಲಿನ್ಯ: ಉಸಿರಾಟದ ತೊಂದರೆ ಮಾತ್ರವಲ್ಲ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣ - ತಜ್ಞರು

author img

By ETV Bharat Karnataka Team

Published : Nov 18, 2023, 4:05 PM IST

Delhi air pollution: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕೆಟ್ಟ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ವಿಷಕಾರಿ ಗಾಳಿಯು ಆಸ್ತಮಾ ಅಥವಾ ಉಸಿರಾಟ ಸಂಬಂಧಿತ ಸಮಸ್ಯೆಗಳ ಪೀಡಿತ ರೋಗಿಗಳಿಗೆ ಮಾತ್ರ ಹಾನಿಕಾರಕವಲ್ಲ, ಅದು ಮಾನಸಿಕ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ದೆಹಲಿ ವಾಯು ಮಾಲಿನ್ಯ
Delhi air pollution

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಹದಗೆಟ್ಟಿದ್ದು, ಅತ್ಯಂತ ಕಳಪೆ ಹಾಗೂ ತೀವ್ರ ಹಂತಗಳ ನಡುವೆ ನೇತಾಡುತ್ತಿದೆ. ಹೀಗಾಗಿ ಸರ್ಕಾರವು ವಿಶೇಷ ಕಾರ್ಯಪಡೆ ರಚನೆ ಹಾಗೂ ಬೃಹತ್​ ಡೀಸೆಲ್​ ವಾಹನಗಳ ಸಂಚಾರದ ಮೇಲೆ ನಿರ್ಬಂಧ ಸೇರಿ ಹಲವು ಕ್ರಮಗಳನ್ನು ಶುರು ಮಾಡಿದೆ. ಮತ್ತೊಂದೆಡೆ, ದೆಹಲಿ - ಎನ್​ಸಿಆರ್​ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (Air Quality Index - AQI) ಸುಧಾರಣೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ದೆಹಲಿ ಅಧಿಕಾರಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿದೆ.

ಹಲವು ದಿನಗಳಿಂದ ಗಾಳಿಯ ಗುಣಮಟ್ಟ ಕೆಟ್ಟ ಹಂತಕ್ಕೆ ತಲುಪಿದೆ. ಕೆಲ ದಿನಗಳ ಹಿಂದೆ ಮಳೆ ಸುರಿದ ಪರಿಣಾಮ ಸುಧಾರಣೆ ಕಂಡಿತ್ತು. ದೀಪಾವಳಿ ನಂತರ ಮತ್ತೆ ವಾಯು ಮಾಲಿನ್ಯ ಹೆಚ್ಚಳವಾಗಿತ್ತು. ಆದರೆ, ಇದರ ಬಳಿಕ ಇದೀಗ ಗಾಳಿಯ ದಿಕ್ಕಿನಲ್ಲಿ ಬದಲಾವಣೆ ಮತ್ತು ಅದರ ವೇಗ ಹೆಚ್ಚಳದಿಂದಾಗಿ ಗಾಳಿಯ ಗುಣಮಟ್ಟ ಇಂದು ಸುಧಾರಿಸಿದೆ. ಆದಾಗ್ಯೂ, ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಹಂತದಲ್ಲಿ ಮುಂದುವರಿದೆ ಎಂಬುವುದು ಕಳವಳಕ್ಕೆ ಕಾರಣವಾಗಿದೆ. ಗುರುವಾರ ಸಂಜೆ 4 ಗಂಟೆಗೆ ದಾಖಲಾದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 419ಕ್ಕೆ ತಲುಪಿತ್ತು.

ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೇಳಿಕೆಗಳು, ಭರವಸೆಗಳ ಹೊರತಾಗಿಯೂ, ಈ ಋತುವಿನಲ್ಲಿ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು 'ವಿಷಕಾರಿ' ಪರಿಸ್ಥಿತಿಗೆ ಮುಟ್ಟಿದೆ. ಇದಕ್ಕೆ ಪ್ರಾಥಮಿಕ ಕಾರಣ ಹುಲ್ಲು ಸುಡುವಿಕೆಯಾಗಿದೆ. ಹಲವಾರು ಆರೋಗ್ಯ ತಜ್ಞರು, ಈ ವಿಷಕಾರಿ ಗಾಳಿಯು ಆಸ್ತಮಾ ಅಥವಾ ಉಸಿರಾಟ ಸಂಬಂಧಿತ ಸಮಸ್ಯೆಗಳ ಪೀಡಿತ ರೋಗಿಗಳಿಗೆ ಮಾತ್ರ ಹಾನಿಕಾರಕವಲ್ಲ, ಅದು ಮಾನಸಿಕ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ದೆಹಲಿಯ ಏಮ್ಸ್‌ನ ಸಮುದಾಯ ಮೆಡಿಸಿನ್ ಕೇಂದ್ರದ ಹೆಚ್ಚುವರಿ ಪ್ರಾಧ್ಯಾಪಕ ಡಾ.ಹರ್ಷಲ್ ಸಾಳ್ವೆ ಅವರು 'ಈಟಿವಿ ಭಾರತ್‌'ದೊಂದಿಗೆ ಮಾತನಾಡಿ, ವಾಯು ಮಾಲಿನ್ಯದ ದೊಡ್ಡ ಪರಿಣಾಮವು ಹೃದಯರಕ್ತನಾಳದ ಕಾಯಿಲೆಗಳಾದ ಅಸ್ತಮಾ, ಪಾರ್ಶ್ವವಾಯು, ಹೃದ್ರೋಗದ ಮೇಲೆ ಬೀರಿದೆ. ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಹೃದಯ ರಕ್ತನಾಳದ ಕಾಯಿಲೆಗಳಿಗೆ ಸಂಬಂಧಿಸಿದೆ ಎಂದು ಪ್ರಪಂಚದಾದ್ಯಂತ ಮತ್ತು ಭಾರತದಲ್ಲಿನ ಇತ್ತೀಚಿನ ಅಧ್ಯಯನಗಳು ಸಹ ಎತ್ತಿ ತೋರಿಸಿವೆ ಎಂದರು.

ವಿದೇಶದ ವರದಿಗಳು ಪ್ರಕಾರ, ವಾಯು ಮಾಲಿನ್ಯ ಮತ್ತು ಖಿನ್ನತೆ, ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಮಧುಮೇಹದಂತಹ ಚಯಾಪಚಯ ಅಸ್ವಸ್ಥತೆಗಳಿಗೆ ಸಂಬಂಧ ಇದೆ. ಭಾರತದಲ್ಲಿನ ವಿಶ್ಲೇಷಣೆ ಪ್ರಕಾರ, ವಾಯು ಮಾಲಿನ್ಯಯು ಖಿನ್ನತೆಯೊಂದಿಗೆ ಸೂಕ್ಷ್ಮ ಕಣ ಮಾಲಿನ್ಯವು 2.5 (Particulate Matter 2.5) ಎಂದು ಬಹಿರಂಗಪಡಿಸಿದೆ. ಇದು ಹೊಸ ಆರೋಗ್ಯ ಕಳವಳಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.

ಶಿಶುಗಳ ಮೇಲೆ ಈ ವಿಷಕಾರಿ ಗಾಳಿಯ ಪ್ರಭಾವದ ಕುರಿತು ಪ್ರಕ್ರಿಯಿಸಿದ ಅವರು, ಕಡಿಮೆ ಜನನ ಪ್ರಮಾಣ ತೋರಿಸುವ ಸಂಶೋಧನಾ ಅಧ್ಯಯನಗಳಿವೆ. ಭಾರತದಲ್ಲಿ ಸೂಕ್ಷ್ಮ ಕಣ ಮಾಲಿನ್ಯಕ್ಕೆ ಒಡ್ಡಿಕೊಂಡ ತಾಯಂದಿರು ಅವಧಿಪೂರ್ವ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಭಾರತದ ಹೊರಗೆ ವಾಯು ಮಾಲಿನ್ಯಕ್ಕೆ ಒಳಗಾಗುವ ತಾಯಂದಿರು ನರ ಅಭಿವೃದ್ಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ನಮ್ಮಲ್ಲಿ ಮಕ್ಕಳಿಗೆ ಮಾನಸಿಕ ಬೆಳವಣಿಗೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿವೆಯೇ ಎಂಬ ಮಾಹಿತಿ ಕೊರತೆ ಇದೆ ಎಂದು ಹೇಳಿದರು.

ವಿಶೇಷ ಕಾರ್ಯಪಡೆಯ ಕೆಲಸವೇನು?: ಹೆಚ್ಚುತ್ತಿರುವ ವಾಯು ಮಾಲಿನ್ಯದ ಮಧ್ಯೆ, ದೆಹಲಿ ಸರ್ಕಾರವು ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಲು ಮತ್ತು ಮಾಲಿನ್ಯದ ಮೇಲ್ವಿಚಾರಣೆಯಲ್ಲಿ ಸಹಾಯ ಮಾಡಲು ಶುಕ್ರವಾರ ವಿಶೇಷ ಕಾರ್ಯಪಡೆ ರಚಿಸಿದೆ. ಆರು ಸದಸ್ಯರ ಈ ವಿಶೇಷ ಕಾರ್ಯಪಡೆಯು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಮತ್ತು ಕಳಪೆ ವಾಯು ಗುಣಮಟ್ಟವನ್ನು ನಿಭಾಯಿಸಲು ವರದಿಗಳ ಸಿದ್ಧತೆ ಸೇರಿ ಮುಂತಾದ ಕಾರ್ಯಗಳನ್ನು ಮಾಡಲಾಗಿದೆ. ಇದರ ನಡುವೆ ಕಾನ್ಪುರದ ಐಐಟಿ ವಿಜ್ಞಾನಿಗಳು, ಹೊಗೆ ಕಡಿಮೆ ಮಾಡಲು ಕೃತಕ ಮಳೆಯ ಯೋಜನೆಗಳನ್ನು ರೂಪಿಸಿದ್ದಾರೆ.

ಇದನ್ನೂ ಓದಿ: ವಾಯುಮಾಲಿನ್ಯ: ಮಹಿಳೆಯರ ಸಂತಾನೋತ್ಪತ್ತಿ ಮೇಲಾಗುವ ಪರಿಣಾಮವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.