ETV Bharat / bharat

ನೇತಾಜಿ ಎಡಪಂಥೀಯ, ಆರ್​ಎಸ್​ಎಸ್​ ಸಿದ್ಧಾಂತದ ವಿರೋಧಿ: ಪುತ್ರಿ ಅನಿತಾ ಬೋಸ್​

author img

By

Published : Jan 22, 2023, 12:49 PM IST

ನೇತಾಜಿ ಸುಭಾಷ್​​ಚಂದ್ರ ಬೋಸ್ ಅವ​ರನ್ನು ಬಲಪಂಥೀಯ ಎಂದು ಬಿಂಬಿಸುತ್ತಿರುವ ಆರ್​ಎಸ್​ಎಸ್​, ಬಿಜೆಪಿ ನಿಲುವಿಗೆ ನೇತಾಜಿ ಅವರ ಪುತ್ರಿ ಅನಿತಾ ಬೋಸ್​ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೋಸರ ಸಿದ್ಧಾಂತಗಳು ಸಂಘದ ವಿರುದ್ಧವಾಗಿದ್ದವು ಎಂದು ಹೇಳಿದ್ದಾರೆ.

daughter-anita-bose
ಪುತ್ರಿ ಅನಿತಾ ಬೋಸ್​

ಕೋಲ್ಕತ್ತಾ: ಗಣತಂತ್ರಕ್ಕೂ ಮುನ್ನ ನೇತಾಜಿ ಸುಭಾಶ್​ ಚಂದ್ರ ಬೋಸ್​ ಅವರ ಜನ್ಮದಿನೋತ್ಸವಕ್ಕೆ ಬಿಜೆಪಿ ಮತ್ತು ಆರ್​ಎಸ್​​ಎಸ್​ ಭರ್ಜರಿ ಸಿದ್ಧತೆ ನಡೆಸುತ್ತಿರುವ ಮಧ್ಯೆಯೇ, ನೇತಾಜಿ ಕುಟುಂಬದಿಂದಲೇ ಇದಕ್ಕೆ ಅಪಸ್ವರ ಕೇಳಿಬಂದಿದೆ. "ನೇತಾಜಿ ಅವರು ಎಡಪಂಥೀಯರಾಗಿದ್ದು, ಆರ್​ಎಸ್​ಎಸ್​ ಸಿದ್ಧಾಂತಗಳಿಗೆ ಅವರನ್ನು ಬಳಸಿಕೊಳ್ಳಬೇಡಿ" ಎಂದು ಪುತ್ರಿ ಅನಿತಾ ಬೋಸ್ ಹೇಳಿದ್ದಾರೆ.

"ಜನವರಿ 23ರಂದು ನಗರದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಸಜ್ಜಾಗಿದೆ. ನೇತಾಜಿ ಮತ್ತು ಆರ್​ಎಸ್​ಎಸ್​​ ಸಿದ್ಧಾಂತ ಪ್ರತ್ಯೇಕ ಧ್ರುವಗಳಾಗಿವೆ. ಅವರ ಪರಂಪರೆಯನ್ನು ಬಳಸಿಕೊಳ್ಳಲು ಸಂಘ ಮುಂದಾಗಿದೆ. ಬೋಸರ ವಿಚಾರಧಾರೆಗಳು ಮತ್ತು ಸಂಘದ ಸಿದ್ಧಾಂತಗಳು ಒಂದೇ ಆಗಿರಲಿಲ್ಲ" ಎನ್ನುವುದು ಅನಿತಾ ಬೋಸ್ ಅಭಿಮತ.

"ರಾಷ್ಟ್ರೀಯವಾದಿ ನಾಯಕರಾಗಿದ್ದ ಬೋಸ್​ ಅವರು ಜಾತ್ಯತೀತತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ವಿಚಾರಗಳನ್ನು ಹೊಂದಿದ್ದರು. ಇದು ಆರ್​ಎಸ್​ಎಸ್​ನ ಸಿದ್ಧಾಂತಕ್ಕೆ ಹೊಂದಿಕೆಯಾಗದು. ದೇಶದಲ್ಲಿರುವ ಇತರೆ ಪಕ್ಷಗಳಿಗಿಂತಲೂ ಕಾಂಗ್ರೆಸ್ ನೇತಾಜಿ ಅವರೊಂದಿಗೆ ಹೆಚ್ಚು ಸಾಮ್ಯತೆ ಹೊಂದಿದೆ" ಎಂದಿದ್ದಾರೆ.

ಬಿಜೆಪಿ, ಆರ್​ಎಸ್​ಎಸ್​ ಸಿದ್ಧಾಂತಕ್ಕೆ ಟೀಕೆ: "ಸುಭಾಷ್​​ಚಂದ್ರ ಬೋಸ್​ ಅವರು ಧರ್ಮನಿಷ್ಠ ಹಿಂದುವಾಗಿದ್ದರು. ಆದರೆ, ಇತರ ಮತಗಳ ನಂಬಿಕೆಗಳನ್ನೂ ಗೌರವಿಸುತ್ತಿದ್ದರು. ಅವರು ಅನ್ಯಧರ್ಮ ಸಹಿಷ್ಣುವಾಗಿದ್ದರು. ನೇತಾಜಿ ಹೇಳಿದ ಎಲ್ಲಾ ಧರ್ಮಗಳನ್ನು ಗೌರವಿಸುವ ಕಲ್ಪನೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಹೊಂದಿಲ್ಲ. ನೀವು ಅವರನ್ನು ಬಲಪಂಥೀಯ ಎಂದು ಬಿಂಬಿಸಲು ಹೊರಟಿದ್ದೀರಿ. ಆದರೆ, ಅವರು ಎಡಪಂಥೀಯರಾಗಿದ್ದರು" ಎಂದು ನೇತಾಜಿ ಅವರ ಪುತ್ರಿ ಪ್ರತಿಪಾದಿಸಿದ್ದಾರೆ.

"ನಾನು ಕೇಳಿದಂತೆ ಆರ್‌ಎಸ್‌ಎಸ್ ಸಿದ್ಧಾಂತ ಮತ್ತು ನೇತಾಜಿ ಅವರ ಸಿದ್ಧಾಂತಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ. ಎರಡೂ ಎಂದಿಗೂ ಹೊಂದಿಕೆಯಾಗುವುದಿಲ್ಲ. ನೇತಾಜಿ ಅವರ ಆದರ್ಶಗಳು ಮತ್ತು ಆಲೋಚನೆಗಳನ್ನು ಸ್ವೀಕರಿಸಲು ಆರ್‌ಎಸ್‌ಎಸ್ ಬಯಸಿದ್ದರೆ ಅದು ಖಂಡಿತವಾಗಿಯೂ ಒಳ್ಳೆಯದು. ಬೋಸರ ಜನ್ಮದಿನವನ್ನು ಆಚರಿಸಲು ಬಯಸುತ್ತಿರುವವರು ಅವರ ಆದರ್ಶಗಳನ್ನೂ ಪಾಲಿಸಬೇಕು" ಎಂದು ಸಲಹೆ ನೀಡಿದ್ದಾರೆ.

ನೇತಾಜಿ ಆರ್‌ಎಸ್‌ಎಸ್‌ನ ಟೀಕಾಕಾರರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅನಿತಾ, "ಆರ್​ಎಸ್​ಎಸ್​ ಬಗ್ಗೆ ಬೋಸರು ಹೊಂದಿದ್ದ ನಿಲುವಿನ ಬಗ್ಗೆ ನನಗೆ ತಿಳಿದಿದೆ. ಅವರು ಸಂಘದ ಸಿದ್ಧಾಂತಗಳನ್ನು ಟೀಕಿಸಿರಬಹುದು. ಅವರ ಯಾವುದೇ ಉಲ್ಲೇಖದ ಬಗ್ಗೆ ಸದ್ಯ ಮಾಹಿತಿ ಇಲ್ಲ. ಇಬ್ಬರ ನಡುವಿನ ಸಾಮ್ಯತೆ ಮಾತ್ರ ಖಂಡಿತಾ ಹೊಂದಿಕೆಯಾಗುವುದಿಲ್ಲ. ಆರ್‌ಎಸ್‌ಎಸ್ ಮತ್ತು ನೇತಾಜಿ ಅವರ ಜಾತ್ಯತೀತತೆಯ ಸಿದ್ಧಾಂತಗಳು ಬೇರೆ ಬೇರೆ" ಎಂದು ಹೇಳಿದರು.

ಕೇಂದ್ರದ ಕ್ರಮಗಳ ಬಗ್ಗೆ ಮೆಚ್ಚುಗೆ: ನೇತಾಜಿಯವರ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುವ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನಿತಾ ಬೋಸ್​, "ಸರ್ಕಾರ ನೇತಾಜಿ ಅವರನ್ನು ಹಲವು ರೀತಿಯಲ್ಲಿ ಗೌರವಿಸಿದೆ. ಅದು ಶ್ಲಾಘನೀಯ ವಿಚಾರ. ಸ್ವಾತಂತ್ರ್ಯ ವೇಳೆಯ ಕಾಂಗ್ರೆಸ್​ ನಾಯಕರು ಬೋಸ್​ರ ಬಗ್ಗೆ ಸ್ಪಷ್ಟ ನಿಲುವು ಹೊಂದಿರಲಿಲ್ಲ. ಕಾಂಗ್ರೆಸ್​ ಚಳವಳಿಯನ್ನು ಮಾತ್ರ ಅವರು ಉಳಿಸಿಕೊಳ್ಳಲು ಬಯಸಿದ್ದರು. ಅದಕ್ಕೆ ಪರ್ಯಾಯವಾಗಿ ನೇತಾಜಿ ಅವರ ಭಾರತೀಯ ರಾಷ್ಟ್ರೀಯ ಸೇನೆ(ಎನ್​ಐಎ) ಕೂಡ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಗುರುತಿಸಬೇಕು" ಎಂದು ತಿಳಿಸಿದರು.

"ಇಂದಿನ ಬಿಜೆಪಿ ನೇತಾಜಿ ಅವರನ್ನು ಗೌರವಿಸಲು ಸಾಕಷ್ಟು ಕೆಲಸ ಮಾಡಿದೆ. ಆದರೆ, ಅದೇ ನೇತಾಜಿ ಅವರು ಇಂದು ಬದುಕಿದ್ದರೆ, ಅವರ ನಿಲುವುಗಳು ಸರ್ಕಾರಕ್ಕಿಂತ ಭಿನ್ನವಾಗಿರುತ್ತಿದ್ದವು. ಆಗ ಬಿಜೆಪಿ ಅವರನ್ನು ವಿರೋಧಿಸುತ್ತಿತ್ತು. ಹಾಗಾಗಿ ಬಿಜೆಪಿ ಮತ್ತು ಆರ್​ಎಸ್​ಎಸ್​ ಅವರ ಹಿತಾಸಕ್ತಿಯನ್ನು ಗೌರವಿಸುತ್ತಿದೆಯೇ ಹೊರತಾಗಿ ಅವರ ಸಿದ್ಧಾಂತವನ್ನಲ್ಲ" ಎಂದರು.

ನೇತಾಜಿ ಸಾವಿನ ರಹಸ್ಯ: ಸ್ವಾತಂತ್ರ್ಯಾ ನಂತರ ನೇತಾಜಿ ನಾಪತ್ತೆಯ ರಹಸ್ಯವನ್ನು ಬಯಲು ಮಾಡಲು ಕೇಂದ್ರ ಸರ್ಕಾರಗಳು ಮೂರು ಶೋಧ ಸಮಿತಿಗಳನ್ನು ರಚಿಸಿದ್ದವು. ಶಾ ನವಾಜ್ ಆಯೋಗ ಮತ್ತು ಖೋಸ್ಲಾ ಆಯೋಗವನ್ನು ಕಾಂಗ್ರೆಸ್ ಸರ್ಕಾರ ರಚಿಸಿತ್ತು. ಇವುಗಳ ಪ್ರಕಾರ ತೈವಾನ್‌ನ ತೈಹೋಕು ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೂಡಲೇ ಬೋಸ್ ಅವರು ಆಗಸ್ಟ್ 18, 1945 ರಂದು ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ತೀರ್ಮಾನಕ್ಕೆ ಬರಲಾಗಿದೆ. ಇದನ್ನು ಒಪ್ಪದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಖರ್ಜಿ ಆಯೋಗವನ್ನು ರಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.