ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟ: ಐವರು ಸಿಆರ್​ಪಿಎಫ್​ ಯೋಧರಿಗೆ ಗಾಯ

author img

By

Published : Jan 11, 2023, 5:05 PM IST

Updated : Jan 11, 2023, 5:52 PM IST

crpf-jawans-injured-in-ied-blast-in-jharkhand

ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಐಇಡಿ ಸ್ಫೋಟಿಸಿ ಐವರು ಸಿಆರ್​ಪಿಎಫ್​ ಯೋಧರು ಗಾಯಗೊಂಡ ಘಟನೆ ಬುಧವಾರ ಜಾರ್ಖಂಡ್‌ನ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಡೆದಿದೆ.

ರಾಂಚಿ (ಜಾರ್ಖಂಡ್‌): ಜಾರ್ಖಂಡ್‌ನಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಸಿಂಗ್‌ಭೂಮ್ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ)ದ ದಾಳಿಯಲ್ಲಿ ಐವರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್)​ ಯೋಧರು ಗಾಯಗೊಂಡಿದ್ದು, ಗಾಯಗೊಂಡ ಯೋಧರನ್ನು ತಕ್ಷಣ ಚಿಕಿತ್ಸೆಗಾಗಿ ರಾಜಧಾನಿ ರಾಂಚಿಗೆ ಏರ್​ಲಿಫ್ಟ್​ ಮಾಡಲಾಗಿದೆ.

ಚೈಬಾಸಾ ಪಟ್ಟಣದ ಸುತ್ತ - ಮುತ್ತಲು ಬುಧವಾರ ನಕ್ಸಲರ ವಿರುದ್ಧ ಸಿಆರ್​ಪಿಎಫ್​ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ, ಟೊಂಟೊ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಜನ್ ಬುರು ಎಂಬಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದಾರೆ. ಪರಿಣಾಮ ಕಾರ್ಯಾಚರಣೆಯಲ್ಲಿ ತೊಡಗಿದ್ದ ಐವರು ಯೋಧರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ವಿಮಾನದ ಮೂಲಕ ರಾಂಚಿಗೆ ರವಾನಿಸಲಾಯಿತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಯೂಟ್ಯೂಬ್​ ನೋಡಿ ಸ್ಫೋಟಕ ತಯಾರಿಸಿ, ಪ್ರಯೋಗಿಸಿದ ಬಾಲಕರು: ಶಾಲಾ ವಾಹನಕ್ಕೆ ಹಾನಿ

ಮೂರು ದಿನಗಳ ಹಿಂದೆಯಷ್ಟೇ ಜಾರ್ಖಂಡ್‌ನ ಧನ್‌ಬಾದ್‌ ಜಿಲ್ಲೆಯಲ್ಲೂ ಬಾಂಬ್ ಸ್ಫೋಟಗೊಂಡಿತ್ತು. ಜನವರಿ 8ರಂದು ತರಕಾರಿ ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಸ್ಫೋಟ ಸಂಭವಿಸಿ ಐವರು ಗಾಯಗೊಂಡಿದ್ದರು. ಇದರಲ್ಲಿ ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ಸೇರಿದ್ದರು. ಇದಾದ ಮೂರೇ ದಿನಗಳಲ್ಲಿ ನಕ್ಸಲರ ಈ ದಾಳಿ ನಡೆದಿದೆ.

ಇದನ್ನೂ ಓದಿ: ಜಾರ್ಖಂಡ್‌: ಮಾರುಕಟ್ಟೆ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕ್​ನಲ್ಲಿ ಬಾಂಬ್ ಸ್ಫೋಟ

ಛತ್ತೀಸ್‌ಗಢದಲ್ಲಿ ಓರ್ವ ಯೋಧ ಹುತಾತ್ಮ: ಮತ್ತೊಂಡೆದೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಯಾದ ಸಿಪಿಐ (ಮಾವೋವಾದಿ)ಯ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಿಆರ್​ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಇದೇ ವೇಳೆ, ಐವರು ಮಾವೋವಾದಿಗಳನ್ನು ಬಂಧಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಇಲ್ಲಿನ ಧರ್ಮರಾಮ್ ಅರಣ್ಯದ ಪಾಮರ್ ಪ್ರದೇಶದಲ್ಲಿ ಪೊಲೀಸರು ಮತ್ತು ಸಿಆರ್​ಪಿಎಫ್ ಸಿಬ್ಬಂದಿಯು ಸಿಪಿಐ ಮಾವೋವಾದಿಗಳ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಭದ್ರತಾ ಪಡೆಗಳು ತಮ್ಮ ಬಳಿಗೆ ಬರುತ್ತಿರುವುದನ್ನು ಕಂಡ ಬಂಡುಕೋರರು ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆ ವೇಳೆ, ಓರ್ವ ಸಿಆರ್‌ಪಿಎಫ್ ಯೋಧ ಕೂಡ ಹುತಾತ್ಮರಾಗಿದ್ದಾರೆ.

ಇತ್ತ, ಬಂಧಿತ ಬಂಡುಕೋರರನ್ನು ತೇಲಂ ನಾಗೇಶ್, ಗುಂಡಿ ರಾಮರಾವ್, ಗುಂಡಿ ಲಿಂಗಯ್ಯ, ಶಾಮು ಕರಮ್ ಮತ್ತು ಕರಮ್ ಕಾಮ ಎಂದು ಗುರುತಿಸಲಾಗಿದೆ. ಲೂಟಿ, ಅಪಹರಣ, ಕೊಲೆ ಮತ್ತು ಸ್ಫೋಟಗಳನ್ನು ಪ್ರಚೋದಿಸುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಈ ದಂಗೆಕೋರರು ಬೇಕಾಗಿದ್ದರು. ಈಗಾಗಲೇ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್ 151 ಮತ್ತು ಸಿಆರ್‌ಪಿಎಫ್ 196 ತಂಡಗಳು ಸಹ ಭಾಗವಹಿಸಿದ್ದವು.

ಇದನ್ನೂ ಓದಿ: ಗಸ್ತು ತಿರುಗುತ್ತಿದ್ದಾಗ ಹಿಮಕಂದಕಕ್ಕೆ ವಾಹನ ಬಿದ್ದು ಮೂವರು ಯೋಧರು ಹುತಾತ್ಮ

Last Updated :Jan 11, 2023, 5:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.