ETV Bharat / bharat

ಆಂಧ್ರ ಸಂಸದರ ಪತ್ನಿ-ಪುತ್ರ, ಹಣ ನೀಡಲು ಹೋದ ಆಪ್ತನೂ ಕಿಡ್ನಾಪ್: ಕೆಲವೇ ಗಂಟೆಗಳಲ್ಲಿ ಮೂವರ ರಕ್ಷಣೆ

author img

By

Published : Jun 15, 2023, 6:04 PM IST

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ಎಂ.ವಿ.ವಿ.ಸತ್ಯನಾರಾಯಣ ಅವರ ಪತ್ನಿ ಮತ್ತು ಪುತ್ರನನ್ನು ದುಷ್ಕರ್ಮಿಗಳು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಹಣ ನೀಡಲು ಹೋದ ಸಂಸದರ ಆಪ್ತನನ್ನೂ ಅಪಹರಣ ಮಾಡಿದ್ದಾರೆ ಎನ್ನಲಾದ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

MP M.V.V. Satyanarayana
ಸಂಸದ ಎಂವಿವಿ ಸತ್ಯನಾರಾಯಣ

ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವಿಶಾಖಪಟ್ಟಣಂ ಸಂಸದ ಎಂ.ವಿ.ವಿ. ಸತ್ಯನಾರಾಯಣ ಅವರ ಪತ್ನಿ ಮತ್ತು ಪುತ್ರ ಹಾಗೂ ಅವರ ಲೆಕ್ಕ ಪರಿಶೋಧಕರನ್ನು ಅಪಹರಿಸಿರುವ ಘಟನೆ ವರದಿಯಾಗಿದೆ. ಆದರೆ, ಪ್ರಕರಣದಲ್ಲಿ ಕ್ಷಿಪ್ರವಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣ ಸುಲಿಗೆಗಾಗಿ ಆರೋಪಿಗಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ವಿಶಾಖಪಟ್ಟಣಂನಿಂದಲೇ ಸತ್ಯನಾರಾಯಣ ಅವರ ಪತ್ನಿ ಜ್ಯೋತಿ ಹಾಗೂ ಪುತ್ರ ಶರತ್ ಚಂದ್ರ ಅವರನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಹೀಗಾಗಿ 1 ಕೋಟಿ ರೂ. ಹಣವನ್ನು ಸಂಸದರ ಆಪ್ತರಾದ ಲೆಕ್ಕ ಪರಿಶೋಧಕ ಜಿ. ವೆಂಕಟೇಶ್ವರ್ ರಾವ್ ಹಸ್ತಾಂತರಿಸಲು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಅವರನ್ನೂ ಅಪಹರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಮಾಹಿತಿ ಪಡೆದ ಕೆಲವೇ ಗಂಟೆಗಳಲ್ಲಿ ಪತ್ನಿ, ಮಗ ಸೇರಿ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ತ್ರಿವಿಕ್ರಮ್ ವರ್ಮಾ ತಿಳಿಸಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಮಾಹಿತಿ ನೀಡಿದರು.

ಮುಂದುವರೆದು, ಸಂಸದರ ಕುಟುಂಬ ಸದಸ್ಯರನ್ನು ಯಾವಾಗ ಕಿಡ್ನಾಪ್ ಮಾಡಲಾಗಿದೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಆದರೆ, ಲೆಕ್ಕಪರಿಶೋಧಕರ ಅಪಹರಣದ ಬಗ್ಗೆ ಗುರುವಾರ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ವೆಂಕಟೇಶ್ವರ್ ರಾವ್ ಅಪಹರಣದ ಬಗ್ಗೆ ಬೆಳಗ್ಗೆ 8 ಗಂಟೆ ಸುಮಾರಿಗೆ ಮಾಹಿತಿ ಬಂದಿತ್ತು. ಮಧ್ಯಾಹ್ನ ಗಂಟೆ 12.30ರ ವೇಳೆಗೆ ಪೊಲೀಸರು ಮೂವರನ್ನೂ ರಕ್ಷಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

ಸಾಕಷ್ಟು ಸಂಚಲನ ಮೂಡಿಸಿದ್ದ ಈ ಅಪಹರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಹೇಮಂತ್ ಕುಮಾರ್ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಮೊಬೈಲ್ ಫೋನ್ ಸಿಗ್ನಲ್‌ಗಳ ನೆರವಿನಿಂದ ಅಪಹರಣಕಾರರನ್ನು ಪತ್ತೆ ಹಚ್ಚಲಾಗಿದೆ. ಏಲೂರು - ಅಮಲಾಪುರಂ ರಸ್ತೆಯಲ್ಲಿ ಸಂಸದರ ಕುಟುಂಬ ಸದಸ್ಯರು ಮತ್ತು ಆಪ್ತರನ್ನು ರಕ್ಷಣೆ ಮಾಡಲಾಗಿದೆ. ಅಪಹರಣಕಾರರು ಓಡಿ ಹೋಗಲು ಯತ್ನಿಸಿದ್ದು ಬೆನ್ನಟ್ಟಿ ಬಂಧಿಸಲಾಯಿತು. ಕಾರ್ಯಾಚರಣೆಯಲ್ಲಿ ಪೊಲೀಸ್ ವಾಹನಕ್ಕೂ ಹಾನಿಯಾಗಿದೆ ಎಂದು ಅಧಿಕಾರಿ ಮಾಹಿತಿ ಒದಗಿಸಿದರು.

7 ಜನರ ಮೇಲೆ ಶಂಕೆ: ಅಪಹರಣಕ್ಕೆ ಸ್ಥಿರಾಸ್ತಿ ವಿಚಾರ ಕಾರಣವಲ್ಲ. ಒಟ್ಟು ಏಳು ಮಂದಿ ಮೇಲೆ ಅನುಮಾನ ವ್ಯಕ್ತವಾಗಿದೆ. ಆದರೆ, ಮೂವರು ಸೇರಿಕೊಂಡು ಅಪಹರಣ ಮಾಡಿರುವ ಮಾಹಿತಿ ಇದೆ. ಸಂಸದರ ಮನೆಯಲ್ಲಿ ಸಿಸಿಟಿವಿ ಕ್ಯಾಮರಾಗಳು ಇಲ್ಲ. ಸದ್ಯ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ತ್ರಿವಿಕ್ರಮ್ ವರ್ಮಾ ಹೇಳಿದರು. ಪತ್ನಿ, ಮಗನ ಅಪಹರಣದ ವೇಳೆ ಸಂಸದ ಸತ್ಯನಾರಾಯಣ ನಗರದಲ್ಲಿ ಇರಲಿಲ್ಲ. ಹೈದರಾಬಾದ್​ನಲ್ಲಿದ್ದ ಅವರು ವಿಷಯ ತಿಳಿದು ವಿಶಾಖಪಟ್ಟಣಕ್ಕೆ ಧಾವಿಸಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಆಂಧ್ರದ ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಕೇಸ್: ಸಂಸದ ಅವಿನಾಶ್ ರೆಡ್ಡಿಗೆ ಜಾಮೀನು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.