ETV Bharat / bharat

ರೆಸ್ಟೋರೆಂಟ್​ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: IAS, IPS ಅಧಿಕಾರಿ ಸೇರಿ ಐವರು ಸಸ್ಪೆಂಡ್!

author img

By

Published : Jun 14, 2023, 6:22 PM IST

ರಾಜಸ್ಥಾನದ ಅಜ್ಮೀರ್​ನ ರೆಸ್ಟೋರೆಂಟ್​ ಗಲಾಟೆ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ಅಜ್ಮೀರ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ, ವಿಶೇಷ ಪೊಲೀಸ್‌ ಅಧಿಕಾರಿ ಸೇರಿ ಐವರನ್ನು ಅಮಾನತು ಮಾಡಲಾಗಿದೆ.

crime: ias-ips-officers-suspended-over-brawl-at-rajasthan-eatery-cctv-video-goes-viral
ರೆಸ್ಟೋರೆಂಟ್​ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: IAS, IPS ಅಧಿಕಾರಿ ಸೇರಿ ಐವರು ಸೆಸ್ಪೆಂಡ್!

ಜೈಪುರ (ರಾಜಸ್ಥಾನ): ರೆಸ್ಟೋರೆಂಟ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ರಾಜಸ್ಥಾನದ ಓರ್ವ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ಸೇರಿದಂತೆ ಐವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ ತಮ್ಮ ಸಿಬ್ಬಂದಿ ಸೇರಿಕೊಂಡು ರೆಸ್ಟೋರೆಂಟ್​ ಸಿಬ್ಬಂದಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಕ್ರಮ ತೆಗೆದುಕೊಳ್ಳಲಾಗಿದೆ.

ಅಜ್ಮೀರ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಿರಿಧರ್ ಮತ್ತು ಗಂಗಾಪುರ ನಗರ ಪೊಲೀಸ್‌ ಇಲಾಖೆಯಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಶೀಲ್ ಕುಮಾರ್ ಬಿಷ್ಣೋಯ್ ಅಮಾನತುಗೊಂಡ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು. ಇವರ ಜೊತೆಗೆ ಗ್ರಾಮ ಲೆಕ್ಕಾಧಿಕಾರಿ ನರೇಂದ್ರ ಸಿಂಗ್ ದಹಿಯಾ, ಪೊಲೀಸ್​ ಕಾನ್​ಸ್ಟೇಬಲ್ ಮುಖೇಶ್ ಕುಮಾರ್ ಮತ್ತು ಕಿರಿಯ ಕ್ಲರ್ಕ್ ಹನುಮಾನ್ ಪ್ರಸಾದ್ ಚೌಧರಿ ಎಂಬವರನ್ನೂ ಅಮಾನತುಗೊಳಿಸಲಾಗಿದೆ.

ಘಟನೆಯ ವಿವರ: ಅಜ್ಮೀರ್​ನಲ್ಲಿ ಜೂನ್ 11ರಂದು ಅಧಿಕಾರಿಗಳು ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದರು. ಪಾರ್ಟಿಯಿಂದ ಹಿಂತಿರುಗುತ್ತಿದ್ದಾಗ ವಿಶ್ರಾಂತಿ ಪಡೆಯಲೆಂದು ರೆಸ್ಟೋರೆಂಟ್‌ವೊಂದಕ್ಕೆ ತೆರಳಿದ್ದರು. ಆಗ ರೆಸ್ಟೋರೆಂಟ್‌ ತೆರೆಯುವಂತೆ ಸಿಬ್ಬಂದಿಗೆ ಅಧಿಕಾರಿಗಳ ತಂಡ ಸೂಚಿಸಿತ್ತು. ಇದರಿಂದ ವಾಗ್ವಾದ ಉಂಟಾಗಿದೆ. ಐಪಿಎಸ್ ಅಧಿಕಾರಿ ಸಿಬ್ಬಂದಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದರಿಂದ ಗಲಾಟೆ ವಿಕೋಪಕ್ಕೆ ತಿರುಗಿತ್ತು ಎಂದು ಹೇಳಲಾಗಿದೆ.

ರೆಸ್ಟೋರೆಂಟ್​ ಸಿಬ್ಬಂದಿಗೆ ಅಮಾನುಷವಾಗಿ ಥಳಿಸಿರುವ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದರ ನಂತರ ಇಡೀ ಘಟನೆ ಬೆಳಕಿಗೆ ಬಂದಿದೆ. ಇದರ ನಡುವೆ ಸೋಮವಾರ ತಡರಾತ್ರಿ ಮೂರ್ನಾಲ್ಕು ಪೊಲೀಸರೊಂದಿಗೆ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರೆಸ್ಟೋರೆಂಟ್​ ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಗೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಎಡಿಜಿ ವಿಜಿಲೆನ್ಸ್‌ಗೆ ಹಸ್ತಾಂತರಿಸಲಾಗಿದೆ. ಅಲ್ಲದೇ, ಹಿರಿಯ ಪೊಲೀಸ್ ಅಧಿಕಾರಿಗೆ ತನಿಖೆಯ ಹೊಣೆ ವಹಿಸಲಾಗಿದೆ. ತನಿಖೆಯ ಭಾಗವಾಗಿ ಇಬ್ಬರು ಇಬ್ಬರು ಹಿರಿಯ ಅಧಿಕಾರಿಗಳು ಸೇರಿ ಐವರನ್ನು ಅಮಾನತು ಮಾಡಲಾಗಿದೆ. ಇಷ್ಟೇ ಅಲ್ಲ, ಎಎಸ್ಐ ರೂಪರಾಮ್, ಕಾನ್‌ಸ್ಟೇಬಲ್​ಗಳಾದ ಗೌತಮ್ ಮತ್ತು ಮುಖೇಶ್ ಎಂಬುವವರನ್ನು ವರ್ಗಾವಣೆಗೊಳಿಸಲಾಗಿದೆ.

ಮತ್ತೊಂದೆಡೆ, ಪೊಲೀಸರು ಈ ಘಟನೆಯಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಜ್ಮೀರ್ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಚುನಾರಾಮ್​ ಜತ್ ತಿಳಿಸಿದ್ದಾರೆ. ಏತನ್ಮಧ್ಯೆ, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ಐಪಿಎಸ್​ ಅಧಿಕಾರಿ ಸುಶೀಲ್ ಕುಮಾರ್ ಬಿಷ್ಣೋಯ್​ ನಿರಾಕರಿಸಿದ್ದಾರೆ. ರೆಸ್ಟೋರೆಂಟ್‌ ಸಿಬ್ಬಂದಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಗಲಾಟೆಯ ಮಾಹಿತಿ ಪಡೆದು ಇದನ್ನು ಪರಿಹರಿಸಲು ಪೊಲೀಸ್ ತಂಡವು ಮಧ್ಯಪ್ರವೇಶ ಮಾಡಿತ್ತು ಅಷ್ಟೇ ಎಂದು ಹೇಳಿದ್ದಾರೆ.

ಈ ಘಟನೆಯ ಬಗ್ಗೆ ರಜಪೂತ ಸಮುದಾಯ ಕಳವಳ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಆರ್‌ಟಿಡಿಸಿ)ದ ಅಧ್ಯಕ್ಷ ಧರ್ಮೇಂದ್ರ ರಾಥೋಡ್ ಅವರಿಗೆ ಸಮುದಾಯದ ಪ್ರಮುಖರು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಹೆಂಡತಿಯನ್ನು ತಬ್ಬಿಕೊಂಡು ಆಕೆಯ ಬೆನ್ನಿಗೆ ಗುಂಡು ಹಾರಿಸಿದ ಪತಿ! ಒಂದೇ ಬುಲೆಟ್​​ಗೆ ಹಾರಿಹೋಯ್ತು ಇಬ್ಬರ ಪ್ರಾಣಪಕ್ಷಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.