ಪಟ್ನಾ: ದಕ್ಷಿಣ ಭಾರತೀಯರ ನೆಚ್ಚಿನ ತಿನಿಸಾಗಿರುವ ದೋಸೆ ಇದೀಗ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಸಾಮಾನ್ಯ ದೋಸೆಯಿಂದ ಹಿಡಿದು ವಿಧ, ವಿಧವಾದ ದೋಸೆಗಳೀಗ ಮಾರುಕಟ್ಟೆಯಲ್ಲಿ ಲಭ್ಯ. ಇಂತಹ ಅಪಾರ ಜನಮನ್ನಣೆ ಗಳಿಸಿರುವ ದೋಸೆಯಿಂದಾಗಿ ಬಿಹಾರದ ಬಕ್ಸಾರ್ನ ರೆಸ್ಟೋರೆಂಟ್ವೊಂದು ಇದೀಗ ಸುದ್ದಿಯಾಗಿದೆ. ಇದಕ್ಕೆ ಕಾರಣ ಇವರು ಮಾಡುವ ರುಚಿಕರ ದೋಸೆಯಲ್ಲ. ಬದಲಾಗಿ, ದೋಸೆ ಸವಿಯಲು ಸಾಂಬಾರ್ ನೀಡದೇ ಇರುವುದು.
ಅಚ್ಚರಿಯಾದರೂ ಹೌದು. ಗ್ರಾಹಕನಿಗೆ ಪ್ಲೇಟ್ನಲ್ಲಿ ದೋಸೆ ನೀಡಿದ ರೆಸ್ಟೋರೆಂಟ್ ಸಾಂಬಾರ್ ನೀಡಿಲ್ಲ. ಇದರಿಂದ ರೊಚ್ಚಿಗೆದ್ದ ಗ್ರಾಹಕ, ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. 11 ತಿಂಗಳ ಕಾನೂನು ಹೋರಾಟದ ಬಳಿಕ ಇದೀಗ ಅವರಿಗೆ ಗೆಲುವು ಸಿಕ್ಕಿದೆ. ಆಯೋಗವು ರೆಸ್ಟೋರೆಂಟ್ಗೆ 3,500 ರೂಪಾಯಿ ದಂಡದ ಬರೆ ಎಳೆದಿದೆ.
ಘಟನೆಯ ಸಂಪೂರ್ಣ ವಿವರ : ಮನೀಶ್ ಪಟ್ನಾಕ್ ಎಂಬ ವಕೀಲರಾಗಿರುವ ಗ್ರಾಹಕರು ಈ ವ್ಯಾಜ್ಯ ಗೆದ್ದಿದ್ದಾರೆ. ಆಗಸ್ಟ್ 15, 2022ರಂದು ತನ್ನ ಹುಟ್ಟುಹಬ್ಬದ ದಿನ ತಾಯಿಯೊಡನೆ ಹೊರಗೆ ರಾತ್ರಿ ಊಟಕ್ಕೆ ತೆರಳಿದ್ದರು. ಗೋಲ್ ಮಾರ್ಕೆಟ್ನಲ್ಲಿರುವ ರೆಸ್ಟೋರೆಂಟ್ಗೆ ಹೋಗಿ ಸ್ಪೆಷಲ್ ಮಸಾಲ ದೋಸೆ ಆರ್ಡರ್ ಮಾಡಿದ್ದಾರೆ. 140 ರೂ ನೀಡಿ ದೋಸೆ ಪಾರ್ಸೆಲ್ ತೆಗೆದುಕೊಂಡು ಮನೆಗೆ ಹೋಗಿದ್ದರು. ಮನೆಗೆ ಹೋಗಿ ನೋಡಿದಾಗ ಸಂಬಾರ್ ಬದಲಾಗಿ ಹೋಟೆಲ್ನವರು ಸಾಸ್ ನೀಡಿದ್ದರು. ದೋಸೆ ತಿನ್ನಲು ಸಾಂಬರ್ ಬೇಕೇ ಬೇಕು. ಅಂದು ರಾತ್ರಿಯಾದ ಕಾರಣ ಮರುದಿನ ಹೋಗಿ ಈ ಕುರಿತು ರೆಸ್ಟೋರೆಂಟ್ ಮಾಲೀಕರಿಗೆ ಪ್ರಶ್ನಿಸಿ, ದೂರು ನೀಡಿದ್ದರು.
ಈ ಸಂದರ್ಭದಲ್ಲಿ ಮಾಲೀಕ 140 ರೂ.ಗೆ ಇಡೀ ರೆಸ್ಟೋರೆಂಟ್ ಕೊಳ್ಳಲು ಸಾಧ್ಯವಿಲ್ಲ ಎಂದು ಉಡಾಫೆ ಮಾತನಾಡಿ ದೂರಿಗೆ ಸರಿಯಾದ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಗ್ರಾಹಕರ ನಂಬಿಕೆ ಮೋಸಗೊಳಿಸಿದ ಆರೋಪದ ಮೇಲೆ ಗ್ರಾಹಕ ಆಯೋಗಕ್ಕೆ ಅವರು ದೂರು ನೀಡಿದ್ದರು. ಪ್ರಕರಣ ಆಲಿಸಿದ ವೇದ್ ಪ್ರಕಾಶ್ ಸಿಂಗ್ ಮತ್ತು ವರುಣ್ ಕುಮಾರ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಗ್ರಾಹಕರ ವಾದ ಸರಿಯಾಗಿದೆ. ರೆಸ್ಟೋರೆಂಟ್ ಗ್ರಾಹಕರಿಗೆ ಸರಿಯಾದ ಸೇವೆ ನೀಡಿಲ್ಲ. ಈ ಉದ್ದೇಶದಿಂದ ಗ್ರಾಹಕರಿಗೆ ಮಾನಸಿಕ ಮತ್ತು ದೈಹಿಕ ಒತ್ತಡ ನೀಡಿದ ಕಾರಣಕ್ಕೆ ರೆಸ್ಟೋರೆಂಟ್ಗೆ 2,000 ರೂಪಾಯಿ ಹಾಗೂ ಕಚೇರಿ ಅಲೆದಾಟಕ್ಕೆ 1,500 ರೂ ನಂತೆ ದಂಡ ವಿಧಿಸಿದೆ.
ಪ್ರಕರಣ ಗೆದ್ದಿರುವ ಕುರಿತು ಪ್ರತಿಕ್ರಿಯಿಸಿರುವ ಗ್ರಾಹಕ, "ನ್ಯಾಯಾಲಯ ನನ್ನ ಪರವಾಗಿ ತೀರ್ಪು ನೀಡಿದ್ದು ಖುಷಿ ನೀಡಿದೆ" ಎಂದರು.
1 ರೂ ಚಿಲ್ಲರೆ ನೀಡದ ಕಾರಣಕ್ಕೆ ₹3 ಸಾವಿರ ದಂಡ: ಬೆಂಗಳೂರಿನಲ್ಲಿ ಕೂಡ ಬಿಎಂಟಿಸಿ ಪ್ರಯಾಣಿಕರೊಬ್ಬರು ಗ್ರಾಹಕ ನ್ಯಾಯಮಂಡಳಿಯ ಮೊರೆ ಹೋಗಿ ಪ್ರಕರಣ ಇತ್ತೀಚೆಗೆ ಸುದ್ದಿಯಾಗಿತ್ತು. ತುಮಕೂರು ನಿವಾಸಿ ರಮೇಶ್ ನಾಯ್ಕ್ ಎಲ್ ಎಂಬವರು ದಾವೆ ಹೂಡಿದ್ದರು. ಬಿಎಂಟಿಸಿ ವೋಲ್ವೋ ಬಸ್ನಲ್ಲಿ ಶಾಂತಿನಗರದಿಂದ ಮೆಜೆಸ್ಟಿಕ್ಗೆ ಪ್ರಯಾಣಿಸುತ್ತಿದ್ದ ಇವರಿಗೆ ಕಂಡಕ್ಟರ್ 1 ರೂಪಾಯಿ ಚಿಲ್ಲರೆ ನೀಡಿರಲಿಲ್ಲ. ಈ ಬಗ್ಗೆ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ ಅವರು ಮೂರು ವರ್ಷದ ಕಾನೂನು ಹೋರಾಟ ಜಯಿಸಿದ್ದರು. ಕೋರ್ಟ್ ಬಿಎಂಟಿಸಿಗೆ 3 ಸಾವಿರ ರೂಪಾಯಿ ದಂಡ ಹಾಕಿತ್ತು.
ಇದನ್ನೂ ಓದಿ: ಗ್ರಾಹಕರಿಗೆ ರಿಲೀಫ್... ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಟೊಮೆಟೊ ಖರೀದಿಸಲು ನಾಫೆಡ್, ಎನ್ಸಿಸಿಎಫ್ಗೆ ಕೇಂದ್ರದ ಸೂಚನೆ..