ETV Bharat / bharat

ರಾಮ ಮಂದಿರ ಉದ್ಘಾಟನೆಗೆ ಭಕ್ತರನ್ನು ಕರೆದೊಯ್ಯಲು ಕಾಂಗ್ರೆಸ್​ ಪ್ಲಾನ್

author img

By ETV Bharat Karnataka Team

Published : Dec 13, 2023, 7:49 PM IST

Ayodhya temple inauguration day Jan 22: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ದಿನದಂದು ಭಕ್ತರನ್ನು ಕರೆದೊಯ್ಯಲು ಕಾಂಗ್ರೆಸ್​ ಯೋಜಿಸಿದೆ.

congress-to-counter-bjp-over-ayodhya-temple-issue-to-take-people-to-holy-town-on-inauguration-day-jan-22
ರಾಮ ಮಂದಿರ ಉದ್ಘಾಟನೆಗೆ ಭಕ್ತರನ್ನು ಕರೆದೊಯ್ಯಲು ಕಾಂಗ್ರೆಸ್​ ಪ್ಲಾನ್

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಸಿದ್ಧತೆಗಳು ನಡೆದಿವೆ. ಅಯೋಧ್ಯೆ ದೇಗುಲ ವಿಚಾರವಾಗಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಹೊಸ ಪ್ಲಾನ್​ ಮಾಡಿದೆ. ರಾಮ ಮಂದಿರ ಉದ್ಘಾಟನೆ ದಿನದಂದು ಅಯೋಧ್ಯೆಗೆ ರೈಲು ಅಥವಾ ಬಸ್‌ನಲ್ಲಿ ಜನರನ್ನು ಕರೆದೊಯ್ಯಲು ಯೋಜಿಸಿದೆ.

2024ರ ಜನವರಿ 22ರಂದು ಅಯೋಧ್ಯೆ ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದರ ನಿಮಿತ್ತ ದೇವಾಲಯದ ಟ್ರಸ್ಟ್‌ ವತಿಯಿಂದ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಇದರಲ್ಲಿ ಅನೇಕ ಹಿರಿಯ ಬಿಜೆಪಿ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ, ಕಾಂಗ್ರೆಸ್​ ಪಕ್ಷದ ಪಂಜಾಬ್ ಘಟಕವು ರಾಮ ಮಂದಿರ ಉದ್ಘಾಟನೆ ದಿನ ಭಕ್ತರನ್ನು ಅಯೋಧ್ಯೆಗೆ ಕರೆದೊಯ್ಯಲು ತೀರ್ಮಾನಿಸಿದೆ.

ಇದನ್ನು ಖಚಿತ ಪಡಿಸಿರುವ ಪಂಜಾಬ್ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಚೇತನ್ ಚವ್ಹಾಣ್, ''ಹೌದು, ನಾವು 2024ರ ಜನವರಿ 22ರಂದು ಜನರನ್ನು ಅಯೋಧ್ಯೆಗೆ ಕರೆದೊಯ್ಯಲು ಯೋಜಿಸುತ್ತಿದ್ದೇವೆ. ಭಾರತವು ಸಮಗ್ರವಾಗಿದೆ ಎಂಬುದನ್ನು ದೇಶಕ್ಕೆ ತೋರಿಸಲು ನಾವು ಈ ಪ್ರಮುಖ ಕಾರ್ಯಕ್ರಮದ ಭಾಗವಾಗಲು ಬಯಸುತ್ತೇವೆ. ಬಿಜೆಪಿಯು ನಮ್ಮನ್ನು ಆಹ್ವಾನಿಸುತ್ತಿಲ್ಲ. ಆದ್ದರಿಂದ ನಾವು ನಮ್ಮದೇ ಆದ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ'' ಎಂದು 'ಈಟಿವಿ ಭಾರತ್'ಗೆ ತಿಳಿಸಿದರು.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಪ್ರತಿಕ್ರಿಯಿಸಿ, ''ರಾಮ ಎಲ್ಲರಿಗೂ ಸೇರಿದವನು. ಗುರು ಗ್ರಂಥ ಸಾಹಿಬ್‌ನಲ್ಲಿ ಭಗವಂತನ ಹೆಸರನ್ನು ಹಲವಾರು ಬಾರಿ ಉಲ್ಲೇಖಿಸಲಾಗಿದೆ. ಒಬ್ಬ ವ್ಯಕ್ತಿಯು ಸಿಖ್ ಆಗಿರಲಿ ಅಥವಾ ಇಲ್ಲದಿರಲಿ, ಆತ ಭಗವಾನ್ ರಾಮನನ್ನು ನಂಬುತ್ತಾನೆ. ಭಗವಂತ ಒಂದು ಪಕ್ಷ ಅಥವಾ ವ್ಯಕ್ತಿಗೆ ಮಾತ್ರ ಸೇರಿದವನಲ್ಲ. ದೇವಸ್ಥಾನವನ್ನು ಯಾರು ಉದ್ಘಾಟಿಸುತ್ತಾರೆ ಎಂಬುದು ಮುಖ್ಯವಲ್ಲ. ದೇವಾಲಯ ಉದ್ಘಾಟನೆಯ ದಿನದಂದು ಅಯೋಧ್ಯೆಯಲ್ಲಿ ಇರಬೇಕೆಂಬುವುದು ಅನೇಕರ ಇಚ್ಛೆಯಾಗಿದೆ. ಈ ಕಾರ್ಯಕ್ರಮಕ್ಕೆ ಬಿಜೆಪಿಯವರಿಗೆ ಮಾತ್ರ ಹೋಗಲು ಅವಕಾಶವಿದೆಯೇ ಹೊರತು ಕಾಂಗ್ರೆಸ್ಸಿಗಲ್ಲ ಎಂದು ಬಿಜೆಪಿ ಹೇಳಬಹುದು. ಪ್ರಧಾನಿಯವರು ಅಯೋಧ್ಯೆಗೆ ಜನರನ್ನು ಕರೆದೊಯ್ಯಲು ರೈಲುಗಳು ಒದಗಿಸಿದರೆ ಪರವಾಗಿಲ್ಲ. ಇಲ್ಲದಿದ್ದರೆ, ನಾವು ಪವಿತ್ರ ಕ್ಷೇತ್ರಕ್ಕೆ ತೆರಳು ಬಸ್ ವ್ಯವಸ್ಥೆ ಮಾಡುತ್ತೇವೆ'' ಎಂದು ಹೇಳಿದರು.

ಇದೇ ವೇಳೆ, ಚೇತನ್ ಚವ್ಹಾಣ್ ಮತ್ತು ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಜನರನ್ನು ಅಯೋಧ್ಯೆಗೆ ಕರೆದೊಯ್ಯುವ ಕಾಂಗ್ರೆಸ್​ ಆಲೋಚನೆಯಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದರು. ''ಇಲ್ಲಿ ಯಾವುದೇ ರಾಜಕೀಯ ಇಲ್ಲ. ಭಗವಂತ ರಾಮನು ಎಲ್ಲರಿಗೂ ಸೇರಿದವನು. ದೇವಾಲಯದ ಉದ್ಘಾಟನೆಯ ದಿನದಂದು ಅಲ್ಲಿರಲು ಎಲ್ಲರಿಗೂ ಹಕ್ಕಿದೆ. ಬಿಜೆಪಿಯವರು ಮಂದಿರ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ, ಅವರು ಆ ಕೆಲಸದಲ್ಲಿ ತೊಡಗಿರುವುದು ವಿಷಾದನೀಯ. ದೇವಸ್ಥಾನವನ್ನು ಟ್ರಸ್ಟ್ ನಿರ್ಮಿಸುತ್ತಿದೆಯಾದರೂ, ಅತಿಥಿಗಳ ಪಟ್ಟಿಗೆ ಪ್ರಧಾನಿ ಕಾರ್ಯಾಲಯ ಅನುಮೋದನೆ ನೀಡುತ್ತಿದೆ. ಬಿಜೆಪಿ ಈಗಾಗಲೇ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. 2024ರ ರಾಷ್ಟ್ರೀಯ ಚುನಾವಣೆಯ ಹೊಸ್ತಿಲಲ್ಲಿ ಇದನ್ನು ಮತ್ತಷ್ಟು ಹಚ್ಚಿಸುವ ಅನುಮಾನವೂ ಇದೆ'' ಎಂದು ಚವ್ಹಾಣ್ ಹೇಳಿದರು.

ಮುಂದುವರೆದು, ''ಕಾಂಗ್ರೆಸ್​ನ ಈ ನಡೆಯು ಜನರಲ್ಲಿ ಸಕಾರಾತ್ಮಕ ಸಂದೇಶ ರವಾನಿಸಲಿದೆ. ಆದರೆ, ಇದು ಜಾತಿ ಗಣತಿಗೆ ಸಂಬಂಧಿಸಿದಂತೆ ಬಿಜೆಪಿಯ ಹಿಂದುತ್ವದ ರಾಜಕೀಯವನ್ನು ಎದುರಿಸಲು ಅಲ್ಲ. ನಮ್ಮ ನಾಯಕ ರಾಹುಲ್ ಗಾಂಧಿ ಅವರು ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರೀಯ ಆಸ್ತಿಯನ್ನು ಸಮಾನವಾಗಿ ಹಂಚಿಕೆಗಾಗಿ ಜಾತಿ ಗಣತಿ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಇದು ಹಿಂದುತ್ವ ರಾಜಕಾರಣವನ್ನು ಎದುರಿಸಲು ಅಲ್ಲ. ಆದರೆ, ಬಿಜೆಪಿಯವರು ಮಂದಿರ ವಿಚಾರದಲ್ಲಿ ಮೈಲೇಜ್ ಪಡೆಯಲು ಯತ್ನಿಸುತ್ತಿದ್ದಾರೆ. ಅದರ ವಿರುದ್ಧ ನಾವು ಈಗಾಗಲೇ 'ಇಂಡಿಯಾ' ಮೈತ್ರಿಕೂಟ ರಚಿಸಿದ್ದೇವೆ. ಅದು ಬಿಜೆಪಿಯನ್ನು ಎದುರಿಸಲು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಸೂಚಿಯನ್ನು ಹೈಲೈಟ್ ಮಾಡುತ್ತದೆ. ಬಿಜೆಪಿಗೆ ಯಾವುದೇ ಅಭಿವೃದ್ಧಿ ಅಜೆಂಡಾ ಇಲ್ಲ. ಬಿಜೆಪಿಯವರು ಬ್ರಿಟಿಷರಂತೆ ಜನರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ'' ಎಂದು ಪಂಜಾಬ್ ಕಾಂಗ್ರೆಸ್​ ಉಸ್ತುವಾರಿ ದೂರಿದರು.

ಇದನ್ನೂ ಓದಿ: ಶಬರಿಮಲೆಯಲ್ಲಿ ಭಾರೀ ಜನದಟ್ಟಣೆ: ಅವ್ಯವಸ್ಥೆ ವಿರುದ್ಧ ಸಿಡಿದ ಭಕ್ತರಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.