ETV Bharat / bharat

ಉತ್ತರ ಪ್ರದೇಶದಿಂದ ಚುನಾವಣಾ ಕಣಕ್ಕೆ ಇಳಿಯುತ್ತಾರಾ ಖರ್ಗೆ?.. ಕಾಂಗ್ರೆಸ್​ ರಣತಂತ್ರವೇನು?

author img

By ETV Bharat Karnataka Team

Published : Sep 13, 2023, 5:23 PM IST

ಉತ್ತರ ಪ್ರದೇಶದಿಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕಿಳಿಸುವ ಮೂಲಕ ದಲಿತ ಮತಗಳನ್ನು ಮರಳಿ ತನ್ನತ್ತ ಸೆಳೆಯುವ ಸಂದೇಶ ರವಾನಿಸಲು ಕಾಂಗ್ರೆಸ್​ ಯೋಚಿಸುತ್ತಿದೆ. ಈ ಕುರಿತ ವರದಿ ಇಲ್ಲಿದೆ.

Congress chief Mallikarjun Kharge
ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ದಲಿತ ಮತಗಳನ್ನು ಸೆಳೆಯಲು ಕಾಂಗ್ರೆಸ್​ ರಣತಂತ್ರ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಮೀಸಲು ಸಂಸದೀಯ ಕ್ಷೇತ್ರದಿಂದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಣಕ್ಕಿಳಿಸುವ ಆಲೋಚನೆಯಲ್ಲಿದೆ. ದಲಿತ ನಾಯಕರಾದ ಖರ್ಗೆ ಅವರು ಉತ್ತರ ಪ್ರದೇಶ ಪಶ್ಚಿಮ (ಇಟಾವಾ) ಅಥವಾ ಪೂರ್ವ (ಬಾರಾಬಂಕಿ) ಭಾಗಗಳ ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು.

ಕಾಂಗ್ರೆಸ್​ ಪಕ್ಷದ ಪರಿಣಿತರ ಪ್ರಕಾರ, ಖರ್ಗೆ ಅವರು ಉತ್ತರ ಪ್ರದೇಶದಿಂದ ಸ್ಪರ್ಧಿಸುವ ಕ್ರಮವು ಅತ್ಯಂತ ಹಳೆಯ ಪಕ್ಷದಿಂದ ದೂರವಾಗಿರುವ ಹಾಗೂ ದಶಕಗಳಿಂದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರನ್ನು ಬೆಂಬಲಿಸುತ್ತಿರುವ ಎಸ್‌ಸಿ ಮತದಾರರಿಗೆ ಬಲವಾದ ಸಂದೇಶ ರವಾನಿಸಲು ನೆರವಾಗುತ್ತದೆ. ಇಷ್ಟೇ ಅಲ್ಲ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೇ ಕಣಕ್ಕಿಳಿಸುವ ಕಾಂಗ್ರೆಸ್ ನಡೆಯು ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಬೆಂಬಲಿಗರನ್ನು ಓಲೈಸುವ ಗುರಿಯನ್ನು ಹೊಂದಿದೆ.

ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟ ಸೇರಲು ಸಿದ್ಧರಿಲ್ಲದ ಮಾಯಾವತಿ ನಡೆಯನ್ನೂ ಇದು ಆಧರಿಸಿದೆ. ಕಳೆದ 2019ರ ಲೋಕಸಭಾ ಚುನಾವಣೆಯಂತೆ 2024ರ ಚುನಾವಣೆಯಲ್ಲೂ ಮಾಯಾವತಿ ಪಕ್ಷವು ಇಷ್ಟೊಂದು ಪ್ರಭಾವ ಬೀರದಿರಬಹುದು ಎಂದು ಕಾಂಗ್ರೆಸ್​ ಇಂತಹ ಯೋಜನೆಯನ್ನು ರೂಪಿಸುತ್ತಿದೆ. ಇದಲ್ಲದೇ, 'ಇಂಡಿಯಾ' ಬ್ಯಾನರ್ ಅಡಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಒಗ್ಗೂಡುವುದರೊಂದಿಗೆ ಖರ್ಗೆ ಪರವಾಗಿ ಹೆಚ್ಚುವರಿ ಮತಗಳನ್ನು ಸೆಳೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: 2024 Lok Sabha Election: ಆಯ್ದ 212 ವಿಧಾನಸಭೆ ಕ್ಷೇತ್ರಗಳು, 61 ಲೋಕಸಭೆ ಕ್ಷೇತ್ರಗಳ ಖರ್ಗೆ ಕಣ್ಣು..

'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ಹಿರಿಯ ಎಸ್‌ಪಿ ನಾಯಕ ರಾಜಾರಾಂ ಪಾಲ್, ಕಾಂಗ್ರೆಸ್ ಖರ್ಗೆಜಿ ಅವರನ್ನು ಕಣಕ್ಕಿಳಿಸಿದರೆ, ಅದು ಖಂಡಿತವಾಗಿಯೂ ರಾಜ್ಯದಲ್ಲಿ ಮಾತ್ರವಲ್ಲದೇ ಹೊರಗಿನ ಬಿಎಸ್‌ಪಿ ಬೆಂಬಲಿಗರಿಗೆ ಬಲವಾದ ಸಂದೇಶವನ್ನು ರವಾನೆಯಾಗುತ್ತದೆ. ಖರ್ಗೆ ದೇಶದಾದ್ಯಂತ ಗೌರವಿಸಲ್ಪಡುತ್ತಾರೆ. ರಾಜಕೀಯದಲ್ಲಿ ಸಂದೇಶ ರವಾಸುವುದೇ ಬಹಳ ಮುಖ್ಯ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ದಶಕಗಳ ಕಾಲವಿದ್ದು, 2022ರಲ್ಲಿ ಎಸ್‌ಪಿಗೆ ಸೇರಿರುವ ಪಾಲ್, 2024ರ ರಾಷ್ಟ್ರೀಯ ಚುನಾವಣೆಯು ಪ್ರಧಾನಿ ಆಯ್ಕೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಸಂವಿಧಾನ ಉಳಿವಿಗಾಗಿ. ನಾನು ಹಳ್ಳಿಗಳಲ್ಲಿ ಜನರನ್ನು ಭೇಟಿಯಾಗುತ್ತಲೇ ಇರುತ್ತೇನೆ. ಪ್ರಧಾನಿಯನ್ನು ಆಯ್ಕೆ ಮಾಡುವುದಕ್ಕಿಂತ ಈ ಬಾರಿ ಸಂವಿಧಾನವನ್ನು ಕಾಪಾಡುವ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಇದೆ ಎಂಬುವುದನ್ನು ನಾನು ಕಂಡುಕೊಂಡಿದ್ದೇನೆ ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಸೀಟು ಹಂಚಿಕೆ ಫೈನಲ್​ ಮಾಡಲು ಇಲ್ಲ ಯಾವುದೇ ಅಡ್ಡಿ: ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವಲ್ಲಿ ಮಿತ್ರಪಕ್ಷಗಳಿಗೆ ಯಾವುದೇ ತೊಂದರೆ ಇಲ್ಲ. ಈ ಬಾರಿ ಕಾಂಗ್ರೆಸ್, ಎಸ್‌ಪಿ ಮತ್ತು ಆರ್‌ಎಲ್‌ಡಿ ಒಟ್ಟಾಗಿ ರಾಜ್ಯದ 80 ಲೋಕಸಭಾ ಸ್ಥಾನಗಳಲ್ಲಿ ಹಚ್ಚಿನ ಸ್ಥಾನಗಳನ್ನು ಗೆಲ್ಲುತ್ತವೆ. ಪ್ರಮುಖ ಪ್ರತಿಪಕ್ಷವಾಗಿರುವ ಎಸ್‌ಪಿ ಬಿಜೆಪಿಯನ್ನು ಸೋಲಿಸಲು ತನ್ನೆಲ್ಲ ಪ್ರಯತ್ನ ಮಾಡುತ್ತದೆ. ಗೆಲ್ಲುವ ವಿಶ್ವಾಸವಿರುವಷ್ಟು ಸೀಟುಗಳನ್ನು ಕಾಂಗ್ರೆಸ್‌ಗೆ ನೀಡುತ್ತೇವೆ. ಯಾವುದೇ ಕ್ಷೇತ್ರದಲ್ಲಾದರೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುತ್ತೇವೆ ಎಂದು ಪಾಲ್ ವಿವರಿಸಿದ್ದಾರೆ.

ಸಾಂಪ್ರದಾಯಿಕ ದಲಿತ ಮತಗಳ ಮೇಲೆ INDIA ಚಿತ್ತ: ಕಳೆದ ವರ್ಷ ಅಧ್ಯಕ್ಷರನ್ನಾಗಿ ಖರ್ಗೆ ಅವರನ್ನು ಆಯ್ಕೆ ಮೂಲಕ ಉನ್ನತ ಹುದ್ದೆಗೆ ದಲಿತರನ್ನು ನೇಮಿಸಲಾಗಿದೆ ಎಂದು ಕಾಂಗ್ರೆಸ್ ಸ್ವತಃ ಹೆಮ್ಮೆಪಡುತ್ತಿದೆ. ಅಲ್ಲದೇ, ಅಂದಿನಿಂದ ತನ್ನ ಸಾಂಪ್ರದಾಯಿಕ ದಲಿತ ಮತದಾರರನ್ನು ಮರಳಿ ಪಡೆಯುವತ್ತ ಗಮನಹರಿಸುತ್ತಿದೆ. ಈಗಾಗಲೇ ದೇಶಾದ್ಯಂತ ಮೀಸಲು ಸಂಸದೀಯ ಕ್ಷೇತ್ರದಲ್ಲಿ ವಿಶೇಷ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮ ಪ್ರಾರಂಭಿಸಿದೆ.

ದಲಿತ ಮತದಾರರು ಖಂಡಿತವಾಗಿಯೂ ಹೊಸ ತಮ್ಮ ನಿರೂಪಕರನ್ನು ಹುಡುಕುತ್ತಿದ್ದಾರೆ. ಕಾಂಗ್ರೆಸ್ ಆ ಪಾತ್ರವನ್ನು ಸಂಪೂರ್ಣವಾಗಿ ವಹಿಸುತ್ತದೆ. ಖರ್ಗೆಜಿ ಅವರು ಲೋಕಸಭೆಯ ಅಭ್ಯರ್ಥಿಯಾಗಿ ಖಂಡಿತವಾಗಿಯೂ ಸಮುದಾಯದಲ್ಲಿ ಬಲವಾದ ಸಂದೇಶವನ್ನು ರವಾನಿಸುತ್ತಾರೆ ಎಂದು ಉತ್ತರ ಪ್ರದೇಶದ ಮಾಜಿ ಸಂಸದ ಬ್ರಿಜ್ಲಾಲ್ ಖಬ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ 80 ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ 10 ಸ್ಥಾನಗಳು, ಎಸ್‌ಪಿ 5 ಸ್ಥಾನಗಳು ಹಾಗೂ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು. 2022ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಕೇವಲ ಒಂದು ಸ್ಥಾನ ಮತ್ತು ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆದ್ದರೆ, ಎಸ್‌ಪಿ 111 ಸ್ಥಾನಗಳಲ್ಲಿ ಜಯ ಸಾಧಿಸಿತ್ತು.

ಇದನ್ನೂ ಓದಿ: 13 ಸದಸ್ಯರ 'ಇಂಡಿಯಾ' ಸಮನ್ವಯ ಸಮಿತಿ ರಚನೆ: ಲೋಕಸಭೆಗೆ ಜಂಟಿಯಾಗಿ ಸ್ಪರ್ಧಿಸುವ ನಿರ್ಣಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.