ETV Bharat / bharat

ಕಾಂಗ್ರೆಸ್​ 'ನಕ್ಸಲರ ಗುಂಪಿನಿಂದ ನಡೆಯುತ್ತಿರುವ ಕಂಪನಿ'.. ಪ್ರಧಾನಿ ನರೇಂದ್ರ ಮೋದಿ ಆರೋಪ

author img

By ETV Bharat Karnataka Team

Published : Sep 25, 2023, 3:30 PM IST

ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಆರೋಪ
ಪ್ರಧಾನಿ ನರೇಂದ್ರ ಮೋದಿ ಆರೋಪ

ಭೋಪಾಲ್ (ಮಧ್ಯಪ್ರದೇಶ) : ಕಾಂಗ್ರೆಸ್​ ಎಂಬುದು 'ನಗರ ನಕ್ಸಲರು' ಸೇರಿಕೊಂಡು ನಡೆಸುತ್ತಿರುವ 'ಕಂಪನಿ'. ಅವರಿಗೆ ಸಾಮಾನ್ಯ ಬಡವನ ಕಷ್ಟ ಏನೂ ಅರ್ಥವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದರು. ಪಕ್ಷ ನಗರ ನಕ್ಸಲರ ಗುಂಪಿನಿಂದ (ಅರ್ಬನ್​ ನಕ್ಸಲ್ಸ್​​) ನಡೆಯುತ್ತಿದೆ. ಹೀಗಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸ್ವತಃ ಮನವರಿಕೆಯಾಗುತ್ತಿದೆ. ಹಲವಾರು ಹಳೆಯ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಮೋದಿ ಆರೋಪಿಸಿದರು.

ಮಧ್ಯಪ್ರದೇಶದ ಭೋಪಾಲ್‌ನ ಜಾಂಬೋರಿ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ‘ಕಾರ್ಯಕರ್ತರ ಮಹಾಕುಂಭ’ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಸುದೀರ್ಘ ಭಾಷಣದ ಸಮಯದಲ್ಲಿ ಕಾಂಗ್ರೆಸ್​ ಮೇಲೆ ಕಟು ಮಾತುಗಳಿಂದಲೇ ದಾಳಿ ನಡೆಸಿದರು.

ಬಡವರ ನೋವು ಅರ್ಥವಾಗಲ್ಲ: ಕಾಂಗ್ರೆಸ್ ತನ್ನ ಸುದೀರ್ಘ ಆಡಳಿತದಲ್ಲಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಲು ಏಕೆ ಸಾಧ್ಯವಾಗಲಿಲ್ಲ?. ಆ ಪಕ್ಷದ ನಾಯಕರು ಬೆಳ್ಳಿ ಚಮಚದ ಜೊತೆಗೆ ಹುಟ್ಟಿ ಬಂದವರು. ಅವರು ಬಡವರ ನೋವನ್ನು ಹೇಗೆತಾನೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮಹಿಳೆಯರಿಗಾಗಿ ಕಾಂಗ್ರೆಸ್ ಕೆಲಸ ಮಾಡಿದ್ದರೆ, ಜನರು ಬಯಸುವ ಶೌಚಾಲಯ, ಗ್ಯಾಸ್ ಸಿಲಿಂಡರ್ ಹಾಗೂ ಕುಡಿಯುವ ನೀರಿನ ಸೌಕರ್ಯಗಳನ್ನು ಒದಗಿಸಿತ್ತಾ ಎಂದು ಪ್ರಶ್ನಿಸಿದರು.

ದೇಶದಲ್ಲಿ ಸುಮಾರು 70 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿದರೂ ಜನರಿಗೆ ಅದು ಮಾಡಿದ್ದು ಬರೀ ದ್ರೋಹ. ದೇಶದ ಜನರಿಗೆ ಜೀವನ ನಡೆಸಲು ಬೇಕಾದ ಮೂಲಭೂತ ಅವಶ್ಯಕತೆಗಳಾದ ಊಟ, ಬಟ್ಟೆ ಮತ್ತು ಸೂರು ನೀಡುವಲ್ಲಿ ವಿಫಲವಾಗಿದೆ. ಇದು ಕಳೆದ 70 ವರ್ಷಗಳ ತಲೆಮಾರುಗಳನ್ನು ಹಾಳುಮಾಡಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಮಹಿಳಾ ಮೀಸಲಾತಿ ವಿರುದ್ಧ ಸಂಚು: ದೇಶವನ್ನು ಸಶಕ್ತಗೊಳಿಸಲು ಬಿಜೆಪಿ ಸರ್ಕಾರ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.

ಪ್ರತಿಪಕ್ಷಗಳ ಒಕ್ಕೂಟವು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅರೆಮನಸ್ಸಿನಿಂದ ಬೆಂಬಲಿಸಿವೆ. ಆದರೆ, ಕಾಯ್ದೆಯಲ್ಲಿನ ಇಂಗಿತವು ಆ ಪಕ್ಷಗಳ ನಿದ್ದೆಗೆಡಿಸಿದೆ. ಹೀಗಾಗಿ ಇಂಡಿಯಾ ಕೂಟ ಮಸೂದೆಯ ವಿರುದ್ಧ ಮಹಿಳೆಯರನ್ನು ಎತ್ತಿಕಟ್ಟುವ ದೊಡ್ಡ ಸಂಚು ರೂಪಿಸುತ್ತಿದೆ ಎಂದು ಮೋದಿ ದೂಷಿಸಿದರು.

ಕಳೆದ ಒಂಬತ್ತು ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ದೇಶವು ಅದ್ಭುತ ಬೆಳವಣಿಗೆಯನ್ನು ಕಂಡಿದೆ. ಪ್ರತಿಯೊಂದು ದೇಶವೂ ಭಾರತದೊಂದಿಗೆ ಕೈಜೋಡಿಸಲು ಬಯಸುತ್ತವೆ. ಬಂಡವಾಳದಾರರು ಇಲ್ಲಿ ಹೂಡಿಕೆ ಮಾಡಲು ಬರುತ್ತಿದ್ದಾರೆ. ದೇಶ ಅಭಿವೃದ್ಧಿ ಶಕೆಯನ್ನು ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡರು.

ಇದನ್ನೂ ಓದಿ: ಸಂಸತ್ತಿನೊಳಗೆ ಮುಸಲ್ಮಾನರ ಮೇಲೆ ಗುಂಪು ಹಲ್ಲೆ ನಡೆಯುವ ದಿನ ದೂರವಿಲ್ಲ: ಬಿಧುರಿ ವಿರುದ್ಧ ಓವೈಸಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.