ETV Bharat / bharat

ಕೊಚ್ಚಿಯಲ್ಲಿ ಚೇತಕ್ ಹೆಲಿಕಾಪ್ಟರ್ ಪತನ: ನೌಕಾಪಡೆಯ ಅಧಿಕಾರಿ ಸಾವು

author img

By ETV Bharat Karnataka Team

Published : Nov 4, 2023, 8:20 PM IST

Chetak Helicopter Accident: ಕೇರಳದ ಕೊಚ್ಚಿಯಲ್ಲಿ ನಡೆದ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಅಪಘಾತದಲ್ಲಿ ಓರ್ವ ಅಧಿಕಾರಿ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.

Chetak helicopter crashes at naval air station in Kochi, one  killed
ಕೊಚ್ಚಿಯಲ್ಲಿ ಚೇತಕ್ ಹೆಲಿಕಾಪ್ಟರ್ ಪತನ: ನೌಕಾಪಡೆಯ ಅಧಿಕಾರಿ ಸಾವು

ಕೊಚ್ಚಿ (ಕೇರಳ): ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಅಧಿಕಾರಿಯೊಬ್ಬರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ಐಎನ್‌ಎಸ್ ಗರುಡಾ ರನ್‌ವೇಯಲ್ಲಿ ಹೆಲಿಕಾಪ್ಟರ್ ಪತನಗೊಂಡು ಈ ದುರಂತ ಸಂಭವಿಸಿದೆ.

ಏಳು ಮಂದಿ ಕೂರಬಹುದಾದ ಚೇತಕ್ ಹೆಲಿಕಾಪ್ಟರ್‌ನಲ್ಲಿ ಈ ಘಟನೆ ವೇಳೆ ಪೈಲಟ್ ಸೇರಿ ಇಬ್ಬರು ಇದ್ದರು. ಇಂದು ಮಧ್ಯಾಹ್ನ 2.30ರ ಸುಮಾರಿಗೆ ನಿರ್ವಹಣಾ ಟ್ಯಾಕ್ಸಿ ತಪಾಸಣೆಯ ಸಮಯದಲ್ಲಿ ಹೆಲಿಕಾಪ್ಟರ್ ಹಾರಾಟ ರದ್ದು ಪಡಿಸುವಾಗ ರನ್‌ವೇಯಲ್ಲಿ ಪತನಗೊಂಡಿದೆ. ಈ ಸಂದರ್ಭದಲ್ಲಿ ರನ್‌ವೇಯಲ್ಲಿ ನಿಂತಿದ್ದಾಗ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರನ್ನು ಮಧ್ಯಪ್ರದೇಶದ ಮೂಲದ ನಾವಿಕ ಯೋಗೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಪ್ರಮುಖ ಏರ್‌ಮನ್ ಆಗಿದ್ದರು. ಈ ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ವಿಷಯ ತಿಳಿದು ನೌಕಾಪಡೆಯ ಅಧಿಕಾರಿಗಳು ಮತ್ತು ಕೊಚ್ಚಿ ಬಂದರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಘಟನೆ ಕುರಿತು ತನಿಖೆ ಮಾಡಲು ನೌಕಾಪಡೆ ಆದೇಶಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನೌಕಾಪಡೆ, ಕೊಚ್ಚಿಯ ಐಎನ್‌ಎಸ್ ಗರುಡಾದಲ್ಲಿ ನಿರ್ವಹಣಾ ಟ್ಯಾಕ್ಸಿ ತಪಾಸಣೆಯ ವೇಳೆ ಇಂದು ಚೇತಕ್ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿ ಅಪಘಾತಕ್ಕೀಡಾಗಿದೆ. ಇದರ ಪರಿಣಾಮವಾಗಿ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಕೇರಳದ ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಸ್ಥಾನದ ಮೇಲೆ ಹೆಲಿಕಾಪ್ಟರ್​ ಹಾರಾಟ ನಿರ್ಬಂಧಕ್ಕೆ ಶಿಫಾರಸು

ಭೋಪಾಲ್‌ನಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಅ.1ರಂದು ವಾಯುಪಡೆ ಸುಧಾರಿತು ಲಘು ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿತ್ತು. ಈ ಘಟನೆ ನಡೆದಾಗ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸೇರಿ ಆರು ಮಂದಿ ಸೇನಾ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದರು.

ಅಂದು ಬೆಳಗ್ಗೆ 8.45ರ ಸುಮಾರಿಗೆ ಭೋಪಾಲ್‌ನಿಂದ ಝಾನ್ಸಿಗೆ ತೆರಳುತ್ತಿದ್ದಾಗ ತಾಂತ್ರಿಕ ದೋಷದಿಂದಾಗಿ ಬೆರಾಸಿಯಾದ ಡುಂಗರಿಯಾ ಅಣೆಕಟ್ಟೆ ಬಳಿಯ ಗದ್ದೆಯಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿತ್ತು. ಈ ಘಟನೆ ವಿಷಯ ತಿಳಿದ ಸೇನಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದೇ ವರ್ಷದ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಹಾರ್ಡ್ ಲ್ಯಾಂಡಿಂಗ್ ಮಾಡಿತ್ತು. ಇದರಿಂದ ಓರ್ವ ವ್ಯಕ್ತಿಯನ್ನು ಮೃತಪಟ್ಟಿದ್ದರು. ಅಲ್ಲದೇ, ಹೆಲಿಕಾಪ್ಟರ್​ನಲ್ಲಿದ್ದ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದರು. ಅದಕ್ಕೂ ಮೊದಲು ಮಾರ್ಚ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡ ನಂತರ ಪೈಲಟ್ ಮತ್ತು ಸಹ ಪೈಲಟ್ ಸಾವನ್ನಪ್ಪಿದ್ದ ಘಟನೆ ವರದಿಯಾಗಿತ್ತು.

ಇದನ್ನೂ ಓದಿ: ಭೋಪಾಲ್‌: ಜಮೀನಿನಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಸೇನಾ ಸಿಬ್ಬಂದಿ ಸುರಕ್ಷಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.