ETV Bharat / bharat

ಐಆರ್‌ಸಿಟಿಸಿ ಹಗರಣ: ತೇಜಸ್ವಿ ಯಾದವ್​ಗೆ ಸಂಕಷ್ಟ.. ಜಾಮೀನು ರದ್ದು ಮಾಡುವಂತೆ ಕೋರ್ಟ್​ಗೆ ಹೋದ ಸಿಬಿಐ

author img

By

Published : Sep 17, 2022, 9:44 PM IST

ಐಆರ್‌ಸಿಟಿಸಿ ಹಗರಣ ಸಂಬಂಧ ಆರ್​ಜೆಡಿ ಮುಖಂಡ, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಸಂಕಷ್ಟ ಎದುರಾಗಿದೆ.

cbi-demands-cancellation-of-bihar-deputy-cm-tejashwi-yadavs-bail
ಐಆರ್‌ಸಿಟಿಸಿ ಹಗರಣ: ತೇಜಸ್ವಿ ಯಾದವ್​ಗೆ ಸಂಕಷ್ಟ...ಜಾಮೀನು ರದ್ದು ಮಾಡುವಂತೆ ಕೋರ್ಟ್​ಗೆ ಹೋದ ಸಿಬಿಐ

ನವದೆಹಲಿ: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಜಾಮೀನು ರದ್ದುಗೊಳಿಸುವಂತೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ಗೆ ಸಿಬಿಐ ಅರ್ಜಿ ಸಲ್ಲಿಸಿದೆ. ಇದರ ಬೆನ್ನಲೆ ತೇಜಸ್ವಿ ಯಾದವ್ ಅವರಿಗೆ ನೋಟಿಸ್​ ಸಹ ಜಾರಿ ಮಾಡಿದೆ.

ಸಿಬಿಐ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರು ತೇಜಸ್ವಿ ಯಾದವ್‌ ಅವರಿಗೆ ಸಿಬಿಐ ಮನವಿಯ ಮೇರೆಗೆ ನ್ಯಾಯಾಲಯವು ಜಾಮೀನನ್ನು ಏಕೆ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿದೆ. ಸೆಪ್ಟೆಂಬರ್​ 28ಕ್ಕೆ ಮುಂದಿನ ವಿಚಾರಣೆ ಮುಂದೂಡಿದ್ದು, ಅಷ್ಟರೊಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಐಆರ್‌ಸಿಟಿಸಿ ಹಗರಣದ ಆರೋಪಿಯಾಗಿರುವ ತೇಜಸ್ವಿ ಯಾದವ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಈಗ ಬಿಹಾರದ ಉಪ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ತೇಜಸ್ವಿ ಯಾದವ್ ಅವರು ಉಪಮುಖ್ಯಮಂತ್ರಿ ಆಗಿರುವ ಕಾರಣ ಪ್ರಕರಣದ ಸಾಕ್ಷ್ಯ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ತನ್ನ ಅರ್ಜಿಯಲ್ಲಿ ಹೇಳಿದೆ. ಆದ್ದರಿಂದ ಪ್ರಕರಣದ ತನಿಖೆಗೆ ತೊಂದರೆಯಾಗುತ್ತಿದೆ ಎಂದೂ ಸಿಬಿಐ ಆರೋಪಿಸಿದೆ.

ಏನಿದು ಐಆರ್‌ಸಿಟಿಸಿ ಹಗರಣ?: 2006ರಲ್ಲಿ ಜಾರ್ಖಂಡ್​ನ ರಾಂಚಿ ಮತ್ತು ಒಡಿಶಾದ ಪುರಿಯಲ್ಲಿ ಖಾಸಗಿ ಸಂಸ್ಥೆಗೆ ನೀಡಿದ ಐಆರ್‌ಸಿಟಿಸಿ ಹೋಟೆಲ್‌ಗಳ ನಿರ್ವಹಣೆ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಆರೋಪವಿದೆ. ಇದರ ಕುರಿತಾಗಿ ಸಿಬಿಐ 12 ಜನ ಮತ್ತು ಎರಡು ಸಂಸ್ಥೆಗಳು ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದೆ. ಅಲ್ಲದೇ, ಜಾರಿ ನಿರ್ದೇಶನಾಲಯ ಕೂಡ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಚಾರ್ಜ್​ಶೀಟ್ ದಾಖಲಿಸಿದೆ.

ಈ ಪ್ರಕರಣದಲ್ಲಿ ತೇಜಸ್ವಿ ಯಾದವ್, ತಂದೆ ಲಾಲು ಪ್ರಸಾದ್ ಯಾದವ್, ತಾಯಿ ರಾಬ್ಡಿ ದೇವಿ ಸಹ ಆರೋಪಿಗಳಾಗಿದ್ದು, ತೇಜಸ್ವಿ ಯಾದವ್ ಅವರಿಗೆ ಪಟಿಯಾಲ ಹೌಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಸ್ತುತ ಈ ಪ್ರಕರಣವು ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಬ್ಯಾಂಕ್ ಮುಂಚೂಣಿ ಸಿಬ್ಬಂದಿ ಸ್ಥಳೀಯ ಭಾಷೆ ತಿಳಿದಿರಲಿ: ನಿರ್ಮಲಾ ಸೀತಾರಾಮನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.