ನವದೆಹಲಿ: ದೇಶದ ವಿವಿಧ ಐದು ರಾಜ್ಯಗಳಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ತಲಾ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವು ಸಾಧಿಸಿ ಸಮಬಲದ ಪ್ರದರ್ಶನ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಈ ವಿಧಾನಸಭಾ ಅವಧಿಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಖಾತೆ ತೆರೆದಿದೆ. ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಒಂದು ಕ್ಷೇತ್ರದಲ್ಲಿ ಜಯ ದಾಖಲಿಸಿವೆ.
![ಮಹಾರಾಷ್ಟ್ರದ ಕಸ್ಬಾ ಪೇಠ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಂಗೇಕರ್](https://etvbharatimages.akamaized.net/etvbharat/prod-images/17892069_thumbkasba-peth.jpg)
ಪುಣೆ ಜಿಲ್ಲೆಯ ಕಸ್ಬಾ ಪೇಠ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 28 ವರ್ಷಗಳ ನಂತರ ಸೋಲು ಕಂಡಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಂಗೇಕರ್ ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಹೇಮಂತ್ ರಾಸಾನೆ 62,244 ಮತಗಳು ಪಡೆದರೆ, ರವೀಂದ್ರ ಧಂಗೇಕರ್ 73,194 ಮತಗಳು ಪಡೆದು ಗೆಲುವಿನ ನಗೆ ಬೀರಿದ್ದಾರೆ.
![ಮಹಾರಾಷ್ಟ್ರದ ಚಿಂಚವಾಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಲಕ್ಷ್ಮಣ್ ಜಗತಾಪ್](https://etvbharatimages.akamaized.net/etvbharat/prod-images/17892069_thumbchinchwad.jpg)
ಚಿಂಚವಾಢ್ದಲ್ಲಿ ಗೆದ್ದ ಬಿಜೆಪಿ: ಮತ್ತೊಂದೆಡೆ, ಚಿಂಚವಾಡ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ಅಭ್ಯರ್ಥಿ ವಿರುದ್ಧ ಬಿಜೆಪಿಯ ಅಶ್ವಿನಿ ಲಕ್ಷ್ಮಣ್ ಜಗತಾಪ್ ಜಯಭೇರಿ ಬಾರಿಸಿದ್ದಾರೆ. ಎನ್ಸಿಪಿಯ ನಾನಾ ಕಾಟೆ ಅವರಿಗೆ ಬಂಡಾಯ ಅಭ್ಯರ್ಥಿಯ ಬಿಸಿ ತಟ್ಟಿದೆ. ಎನ್ಪಿಸಿ, ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣದ ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿಯಾಗಿ ನಾನಾ ಕಾಟೆ ಸ್ಪರ್ಧಿಸಿದ್ದರು. ಆದರೆ, ಶಿವಸೇನೆ ತನ್ನ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಕಲಾತೆ ರಾಹುಲ್ ತಾನಾಜಿ ಪಕ್ಷೇತರ ಅಭ್ಯರ್ಥಿ ಸ್ಪರ್ಧೆ ಮಾಡಿದ್ದರು. ಉಪಚುನಾವಣೆಯಲ್ಲಿ ರಾಹುಲ್ ತಾನಾಜಿ 30,093 ಮತಗಳನ್ನು ಪಡೆದಿದ್ದಾರೆ. ವಿಜೇತ ಅಭ್ಯರ್ಥಿ ಅಶ್ವಿನಿ 1,01,949 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಎನ್ಸಿಪಿಯ ನಾನಾ ಕಾಟೆ 80,902 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
![ಪಶ್ಚಿಮ ಬಂಗಾಳದ ಸಾಗರ್ದಿಘಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇರಾನ್ ಬಿಸ್ವಾಸ್](https://etvbharatimages.akamaized.net/etvbharat/prod-images/17892069_thumbwb-congress.jpg)
ಪಶ್ಚಿಮ ಬಂಗಾಳದಲ್ಲಿ ಕೈಗೆ ಮೊದಲ ಜಯ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಸಾಗರ್ದಿಘಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಮೂಲಕ 2021ರ ನಂತರದ ವಿಧಾನಸಭಾ ಚುನಾವಣೆಯ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಎಡ - ಕಾಂಗ್ರೆಸ್ ಮೈತ್ರಿ ತನ್ನ ಮೊದಲ ಸ್ಥಾನವನ್ನು ಜಯ ಸಾಧಿಸಿದೆ. ಕಾಂಗ್ರೆಸ್ನ ಅಭ್ಯರ್ಥಿ ಬೇರಾನ್ ಬಿಸ್ವಾಸ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಆಡಳಿತಾರೂಢ ತೃಣಮೂಲದ ದೇಬಾಶಿಶ್ ಬ್ಯಾನರ್ಜಿ ಅವರನ್ನು 22,980 ಮತಗಳಿಂದ ಸೋಲಿಸಿದ್ದಾರೆ.
ಈ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ತೃಣಮೂಲ ಕಾಂಗ್ರೆಸ್ ಮತ್ತು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಕಾಂಗ್ರೆಸ್ ಮಾತ್ರ ಸೋಲಿಸಬಹುದೆಂದು ಸಾಗರ್ದಿಘಿ ಫಲಿತಾಂಶ ಇಡೀ ಬಂಗಾಳಕ್ಕೆ ತೋರಿಸಿದೆ. ಈ ಫಲಿತಾಂಶವು ಮುರ್ಷಿದಾಬಾದ್ ಯಾವಾಗಲೂ ಕಾಂಗ್ರೆಸ್ನ ಭದ್ರಕೋಟೆ ಮತ್ತು ಎಡಪಂಥೀಯರ ಪ್ರಾಬಲ್ಯಕ್ಕೂ ಸಾಕ್ಷಿಯಾಗಿದೆ ಎಂದು ಹೇಳಿದರು.
![ಜಾರ್ಖಂಡ್ನ ರಾಮಗಢ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಸುನೀತಾ ಚೌಧರಿ](https://etvbharatimages.akamaized.net/etvbharat/prod-images/17892069_thumbnda-jharkhand.jpg)
ಜಾರ್ಖಂಡ್ನಲ್ಲಿ ಕಾಂಗ್ರೆಸ್ಗೆ ಶಾಕ್: ಜಾರ್ಖಂಡ್ನ ರಾಮಗಢ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಎನ್ಡಿಎ ಬೆಂಬಲಿತಅಖಿಲ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್ಯು)ದ ಅಭ್ಯರ್ಥಿ ಸುನೀತಾ ಚೌಧರಿ, ಕಾಂಗ್ರೆಸ್ ಅಭ್ಯರ್ಥಿ ಬಜರಂಗ್ ಮಹತೋ ಅವರನ್ನು 21,970 ಮತಗಳಿಂದ ಸೋಲಿಸಿದ್ದಾರೆ.
2019ರಲ್ಲಿ ಚುನಾವಣೆಯಲ್ಲಿ ಎಜೆಎಸ್ಯುನ ಸುನೀತಾ ದೇವಿ ವಿರುದ್ಧ ಕಾಂಗ್ರೆಸ್ನ ಮಮತಾ ದೇವಿ ಗೆಲುವು ಸಾಧಿಸಿದ್ದರು. 2022ರ ಡಿಸೆಂಬರ್ 13ರಂದು ಕ್ರಿಮಿನಲ್ ಮೊಕದ್ದಮೆಯಲ್ಲಿ ಮಮತಾ ದೇವಿ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದರಿಂದ ಶಾಸಕ ಸ್ಥಾನದಿಂದ ಅನರ್ಹಗೊಂಡು ಉಪಚುನಾವಣೆ ಎದುರಾಗಿತ್ತು. ಕಾಂಗ್ರೆಸ್ ಮಾಜಿ ಶಾಸಕಿ ಮಮತಾ ದೇವಿ ಅವರ ಪತಿ ಮಹ್ತೋ ಅವರನ್ನು ಕಣಕ್ಕಿಳಿಸಿದ್ದರೆ, ಎಜೆಎಸ್ಯು ಬಿಜೆಪಿ ಬೆಂಬಲದೊಂದಿಗೆ ಸುನೀತಾ ಚೌಧರಿ ಅವರನ್ನು ಕಣಕ್ಕಿಳಿಸಿತ್ತು.
ಕಾಂಗ್ರೆಸ್ ಅಭ್ಯರ್ಥಿಗೆ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮತ್ತು ಎಡಪಕ್ಷಗಳು ಬೆಂಬಲ ಸೂಚಿಸಿದ್ದರು. ಆದರೂ, ತನ್ನ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸಾಧ್ಯವಾಗಿಲ್ಲ. 2019ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಒಟ್ಟು ಐದು ಉಪಚುನಾವಣೆಗಳು ನಡೆದಿದೆ. ಹಿಂದಿನ ಎಲ್ಲ ಉಪ ಚುನಾವಣೆಗಳನ್ನು ರಾಜ್ಯದ ಆಡಳಿತ ಜೆಎಂಎಂ, ಕಾಂಗ್ರೆಸ್, ಆರ್ಜೆಡಿ ಒಳಗೊಂಡ ಸಮ್ಮಿಶ್ರ ಸರ್ಕಾರ ಗೆದ್ದಿದೆ. ಮೊದಲ ಬಾರಿಗೆ ಎನ್ಡಿಎ ಗೆಲುವು ಸಾಧಿಸಿದ್ದು, ಆಡಳಿತಾರೂಢ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ.
![ತಮಿಳುನಾಡಿನ ಈರೋಡ್ ಪೂರ್ವ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಳಂಗೋವನ್](https://etvbharatimages.akamaized.net/etvbharat/prod-images/17892069_thumberode.jpg)
ತಮಿಳುನಾಡಿನಲ್ಲಿ ಕಾಂಗ್ರೆಸ್ ಗೆಲುವು: ತಮಿಳುನಾಡಿನ ಈರೋಡ್ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಇವಿಕೆಎಸ್ ಇಳಂಗೋವನ್ 66,575 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಆಡಳಿತಾರೂಢ ಡಿಎಂಕೆ ನೇತೃತ್ವದ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ನ ಇಳಂಗೋವನ್ 1,10,556 ಮತಗಳನ್ನು ಗಳಿಸಿದರೆ, ಸಮೀಪದ ಪ್ರತಿಸ್ಪರ್ಧಿ ಎಐಎಡಿಎಂಕೆಯ ಕೆ.ಎಸ್ ತೇನರಸು 43,981 ಮತಗಳನ್ನು ಮಾತ್ರ ಪಡೆದಿದ್ದಾರೆ. ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ಉಪ ಚುನಾವಣೆಯ ಪ್ರಚಾರದ ನೇತೃತ್ವ ವಹಿಸಿದ್ದರು. ಫಲಿತಾಂಶದ ನಂತರ ಮಾತನಾಡಿದ ಇಳಂಗೋವನ್, ರಾಜ್ಯದಲ್ಲಿ ಡಿಎಂಕೆ ಸರ್ಕಾರ, ಮುಖ್ಯಮಂತ್ರಿ ಸ್ಟಾಲಿನ್ ಕೈಗೊಂಡ ಜನ ಕಲ್ಯಾಣ ಕಾರ್ಯಕ್ರಮಗಳೇ ನನಗೆ ವಿಜಯ ತಂದುಕೊಟ್ಟಿವೆ ಎಂದು ಹೇಳಿದರು.
ಅರುಣಾಚಲದಲ್ಲಿ ಬಿಜೆಪಿಗೆ ಜಯ: ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಲುಮ್ಲಾ ಕ್ಷೇತ್ರದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ತ್ಸೆರಿಂಗ್ ಲಾಮು ಗೆಲುವು ಸಾಧಿಸಿದ್ದಾರೆ. ಹಾಲಿ ಬಿಜೆಪಿ ಶಾಸಕರಾಗಿದ್ದ ಜಂಬೆ ತಾಶಿ ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು. ಜಾಂಬೆ ತಾಶಿ ಅವರ ಪತ್ನಿ ತ್ಸೆರಿಂಗ್ ಲಾಮು ಅವರನ್ನು ಬಿಜೆಪಿ ಚುನಾವಣಾ ಕಣಕ್ಕೆ ಇಳಿಸಿತ್ತು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಭಾರಿ ಮುಖಭಂಗ: ಭದ್ರಕೋಟೆ 'ಕಸ್ಬಾ ಪೇಠ್' ಭೇದಿಸಿದ ಕಾಂಗ್ರೆಸ್