ನವದೆಹಲಿ: ವಿವಿಧ ಕಾರಣಕ್ಕಾಗಿ ತೆರವಾಗಿರುವ ಬಿಹಾರದ 2 ಕ್ಷೇತ್ರ ಸೇರಿದಂತೆ 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಉಪಸಮರಕ್ಕೆ ನಾಳೆ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೂ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಎಲ್ಲೆಲ್ಲಿ ಚುನಾವಣೆ: ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಬಿಹಾರದ ಮೊಕಾಮಾ, ಗೋಪಾಲ್ಗಂಜ್ ಎರಡು ಕ್ಷೇತ್ರಗಳಿದ್ದರೆ, ಮಹಾರಾಷ್ಟ್ರದ ಅಂಧೇರಿ ಪೂರ್ವ ಕ್ಷೇತ್ರ, ಹರಿಯಾಣದ ಆದಂಪುರ, ತೆಲಂಗಾಣದ ಮುನುಗೋಡು, ಉತ್ತರ ಪ್ರದೇಶದ ಗೋಲ ಗೋಕ್ರನಾಥ ಮತ್ತು ಒಡಿಶಾದ ಧಮ್ನಗರ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ಚುನಾವಣಾ ಆಯೋಗ ಈ ಮೊದಲು ಉಪಚುನಾವಣೆಗಾಗಿ ಅಕ್ಟೋಬರ್ 7 ರಂದು ಅಧಿಸೂಚನೆ ಹೊರಡಿಸಿತ್ತು. ಅಕ್ಟೋಬರ್ 14 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ. ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 17 ಕೊನೆ ದಿನವಾಗಿತ್ತು. ನವೆಂಬರ್ 6ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
7 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 2 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಡಿ, ಶಿವಸೇನೆ ಮತ್ತು ಆರ್ಜೆಡಿ ತಲಾ ಒಂದು ಸ್ಥಾನದಲ್ಲಿ ಸೆಣಸಲಿವೆ. ಉಪಚುನಾವಣೆಯ ಗೆಲುವು ವಿಧಾನಸಭೆಗಳಲ್ಲಿ ಮಹತ್ತರ ಪರಿಣಾಮ ಬೀರದಿದ್ದರೂ, ಬಿಜೆಪಿಯ ಸವಾಲು ಎದುರಿಸಲು ಆಯಾ ಪಕ್ಷಗಳು ಸಿದ್ಧತೆ ನಡೆಸಿವೆ. ಇದರ ಹಣೆಬರಹ ನವೆಂಬರ್ 6 ರಂದು ನಡೆಯುವ ಮತ ಎಣಿಕೆ ಗೊತ್ತಾಗಲಿದೆ.
ಅಂಧೇರಿ ಪೂರ್ವ- ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಾದ ರಾಜಕೀಯ ಪಲ್ಲಟದ ನಂತರದ ಮೊದಲ ಚುನಾವಣೆ ಇದಾಗಿದೆ. ಶಿವಸೇನೆ 2 ಬಣಗಳಾಗಿದ್ದು, ಉದ್ಧವ್ ಠಾಕ್ರೆ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಶಾಸಕ ರಮೇಶ್ ಲಟ್ಕೆ ನಿಧನರಾದ ಬಳಿಕ ತೆರವಾದ ಸ್ಥಾನಕ್ಕೆ ಅವರ ಪತ್ನಿಗೆ ಟಿಕೆಟ್ ನೀಡಲಾಗಿದೆ. ಸರ್ಕಾರದ ಭಾಗವಾಗಿರುವ ಬಿಜೆಪಿ ಪಕ್ಷ ಈ ಚುನಾವಣೆಯಿಂದ ಹಿಂದೆ ಸರಿದಿದೆ. ಇದರಿಂದ ಇಲ್ಲಿ ಶಿವಸೇನೆ ಅಭ್ಯರ್ಥಿ ಗೆಲ್ಲಲಿದ್ದಾರೆ.
ಮುನುಗೋಡು - ತೆಲಂಗಾಣ: ಕಾಂಗ್ರೆಸ್ನ ಶಾಸಕರಾಗಿದ್ದ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಸ್ಥಾನ ತೆರವಾಗಿತ್ತು. ಅಧಿಕಾರದಲ್ಲಿರುವ ಟಿಆರ್ಎಸ್, ಬಿಆರ್ಎಸ್ ಆಗಿ ಬದಲಾದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದು. ಬಿಆರ್ಎಸ್ ಈ ಕ್ಷೇತ್ರದಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಲು ಮುಂದಾದರೆ, ಬಿಜೆಪಿಯಿಂದ ರೆಡ್ಡಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಕೂಡ ಇಲ್ಲಿ ಸ್ಪರ್ಧಿಸಿದ್ದು ತ್ರಿಕೋನ ಸ್ಪರ್ಧೆ ನಡೆಯಲಿದೆ.
ಮೊಕಾಮಾ, ಗೋಪಾಲ್ಗಂಜ್- ಬಿಹಾರ: ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿ ಜೊತೆಗೆ ಮೈತ್ರಿ ಕಡಿದುಕೊಂಡು ಆರ್ಜೆಡಿ ಜೊತೆ ಸರ್ಕಾರ ರಚಿಸಿದೆ. ಮೈತ್ರಿ ಸರ್ಕಾರದ ಮೊದಲ ಉಪಸಮರ ಇದಾಗಿದೆ. ಜೆಡಿಯು ಶಾಸಕರಾಗಿದ್ದ ಅನಂತ್ಸಿಂಗ್ ಸ್ಫೋಟಕ ಹೊಂದಿದ್ದ ಪ್ರಕರಣದಲ್ಲಿ ಅನರ್ಹರಾಗಿದ್ದರು. ಇದರಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪತ್ನಿಯನ್ನು ಅಭ್ಯರ್ಥಿಯನ್ನಾಗಿ ಜೆಡಿಯು ಇಳಿಸಿದೆ. ಬಿಜೆಪಿ ಕೂಡ ಇಲ್ಲಿ ಸ್ಪರ್ಧಿಸಿದೆ. ಆರ್ಜೆಡಿ ಮೈತ್ರಿ ಪಕ್ಷಕ್ಕೆ ಬೆಂಬಲ ನೀಡಿದೆ.
ಇನ್ನೊಂದು ವಿಧಾನಸಭಾ ಕ್ಷೇತ್ರವಾದ ಗೋಪಾಲ್ಗಂಜ್ನಲ್ಲಿ ಬಿಜೆಪಿ ಶಾಸಕರಾಗಿದ್ದ ಸುಭಾಷ್ ಸಿಂಗ್ ಮೃತಪಟ್ಟಿದ್ದರಿಂದ ಇಲ್ಲಿ ಉಪಚುನಾವಣೆ ಎದುರಾಗಿದೆ. ಬಿಜೆಪಿಯಿಂದ ಮೃತ ಶಾಸಕ ಪತ್ನಿಯನ್ನು ಕಣಕ್ಕಿಳಿಸಿದೆ. ಆರ್ಜೆಡಿ ಇಲ್ಲಿ ತನ್ನ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಿದ್ದರೆ, ಲಾಲು ಪ್ರಸಾದ್ ಯಾದವ್ ಅವರ ಸೋದರ ಮಾವ ಸಾಧು ಯಾದವ್ ಅವರ ಪತ್ನಿ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇದು ಚುನಾವಣೆಯ ರಂಗೇರಿಸಿದೆ.
ಗೋಲ ಗೋಕ್ರನಾಥ- ಉತ್ತರ ಪ್ರದೇಶ: ಇಲ್ಲಿ ಬಿಜೆಪಿ ಶಾಸಕ ಅರವಿಂದ್ ಗಿರಿ ನಿಧನದಿಂದಾಗಿ ಉಪಸಮರ ನಡೆಯಲಿದೆ. ಬಿಎಸ್ಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಆದಂಪುರ- ಹರಿಯಾಣ: ಈ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಚುನಾವಣೆ ನಡೆಯುತ್ತಿದೆ. ಸಿಎಂ ಮನೋಹರ್ ಲಾಲ್ ಖಟ್ಟರ್ ಮುತುವರ್ಜಿ ವಹಿಸಿ ಚುನಾವಣೆ ಸಿದ್ಧತೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಮೊಮ್ಮಗ ಸೇರಿದಂತೆ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಲೋಕದಳ ಮತ್ತು ಆಮ್ ಆದ್ಮಿ ಪಕ್ಷಗಳು ಪ್ರಮುಖ ಸ್ಪರ್ಧಿಗಳಾಗಿವೆ.
ಧಮ್ನಗರ- ಒಡಿಶಾ: ಬಿಜೆಪಿ ಶಾಸಕರ ನಿಧನದಿಂದ ಇಲ್ಲಿ ಉಪಚುನಾವಣೆಯ ನಡೆಯುತ್ತಿದೆ. ಒಡಿಶಾ ಸಿಎಂ ನವೀನ್ ಪಟ್ನಾಯಕ್ ಭರ್ಜರಿ ಪ್ರಚಾರ ನಡೆಸಿದ್ದು ಸ್ಥಾನ ಮರಳಿ ಪಡೆಯಲು ಹೆಣಗಾಡುತ್ತಿದ್ದಾರೆ.
ಓದಿ: ಸಿಎಂ ಗೆಹ್ಲೋಟ್ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದ ಸಚಿನ್ ಪೈಲಟ್