ETV Bharat / bharat

ವಿಪಕ್ಷಗಳ I.N.D.I.A ಕೂಟಕ್ಕೆ ಬಿಎಸ್​ಪಿ ಸೇರ್ಪಡೆ ಸಾಧ್ಯತೆ: 15 ರಂದು ಅಧಿಕೃತ ಘೋಷಣೆ?

author img

By ETV Bharat Karnataka Team

Published : Jan 13, 2024, 1:11 PM IST

ವಿಪಕ್ಷಗಳ ಮೈತ್ರಿಕೂಟಕ್ಕೆ ಬಿಎಸ್​ಪಿ ಸೇರುವ ಸಾಧ್ಯತೆ ಇದೆ. ಕಾಂಗ್ರೆಸ್​ ಮತ್ತು ಸಮಾಜವಾದಿ ಪಕ್ಷ ಇದರ ಕಸರತ್ತು ನಡೆಸುತ್ತಿದ್ದು, ಜನವರಿ 15 ರಂದು ಅಧಿಕೃತ ಮಾಹಿತಿ ಹೊರಬೀಳಲಿದೆ.

ಬಿಎಸ್​ಪಿ
ಬಿಎಸ್​ಪಿ

ಲಖನೌ (ಉತ್ತರಪ್ರದೇಶ): ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಾಗುವುದು ಎಂದು ಘೋಷಿಸಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ರಾಷ್ಟ್ರೀಯ ಅಧ್ಯಕ್ಷೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ವಿಪಕ್ಷಗಳ I.N.D.I.A ಕೂಟ ಸೇರುವ ಸಾಧ್ಯತೆ ಇದೆ. ಜನವರಿ 15 ರಂದು ತಮ್ಮ 68ನೇ ಹುಟ್ಟುಹಬ್ಬದಂದು ಇಂಡಿಯಾ ಕೂಟದೊಂದಿಗೆ ಮೈತ್ರಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರಪ್ರದೇಶದಲ್ಲಿ ದಲಿತ ಸಮುದಾಯದ ಮೇಲೆ ಹಿಡಿತ ಹೊಂದಿರುವ ಮಾಯಾವತಿ ಅವರನ್ನು ಮಹಾಘಟಬಂಧನಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್​, ಎಸ್​ಪಿ ಸೇರಿದಂತೆ ವಿಪಕ್ಷಗಳು ಆಸಕ್ತಿ ತೋರಿಸಿವೆ. ನಾಡಿದ್ದು ಜನ್ಮದಿನದಂದು ಕಾಂಗ್ರೆಸ್​ನ ಹಿರಿಯ ನಾಯಕರು ಬಿಎಸ್​ಪಿ ನಾಯಕಿಯನ್ನು ಭೇಟಿ ಮಾಡಿ ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗಿದ್ದರೆ, ಇತ್ತ ಎಸ್​ಪಿ ಕೂಡ ಹೇಗಾದರೂ ಮಾಡಿ ದಲಿತ ನಾಯಕಿಯನ್ನು ಮೈತ್ರಿ ಸೇರಿಸಿಕೊಳ್ಳುವ ಬಗ್ಗೆ ಇಚ್ಛೆ ಹೊಂದಿದೆ ಎಂದು ತಿಳಿದುಬಂದಿದೆ.

ಉತ್ತರಪ್ರದೇಶದಲ್ಲಿ ಘಟಬಂಧನ್​; ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ, ರಾಷ್ಟ್ರೀಯ ಲೋಕದಳ, ಅಪ್ನಾ ದಳ, ಕಮೆರವಾಡಿ, ಮಹಾನ್ ದಳ ಮತ್ತು ಆಜಾದ್ ಸಮಾಜ ಪಕ್ಷಗಳು ಒಟ್ಟಾಗಿ ಸೇರಿ ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸೆಣಸಲು ತಂತ್ರ ರೂಪಿಸಿವೆ. ಈ ಮೊದಲು ಯಾವುದೇ ಕೂಟದ ಜೊತೆಗೆ ಸೇರಲ್ಲ ಎಂದು ಘೋಷಿಸಿದ್ದ ಬಿಎಸ್​ಪಿಯನ್ನು ಇಂಡಿಯಾ ಮೈತ್ರಿಯಲ್ಲಿ ಸೇರಿಸಿಕೊಳ್ಳಲು ಎಸ್​ಪಿ ನಾಯಕ, ಮಾಜಿ ಸಿಎಂ ಅಖಿಲೇಶ್​ ಯಾದವ್​ ಅವರು ಉತ್ಸುಕತೆ ತೋರಿದ್ದಾರೆ. ಇದಕ್ಕೆ ಕಾಂಗ್ರೆಸ್​ ಕೂಡ ಕೈಜೋಡಿಸಿದೆ.

ಸೀಟು ಹಂಚಿಕೆ ಕುರಿತು ಸಮಾಜವಾದಿ ಪಕ್ಷ ಸೂತ್ರ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಎಸ್​​ಪಿ 25 ರಿಂದ 30 ಸ್ಥಾನಗಳಲ್ಲಿ ಬಿಎಸ್​ಪಿಗೆ ಬೆಂಬಲ ನೀಡಲು ಸಿದ್ಧವಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಜನವರಿ 15 ರಂದು ಬಿಎಸ್​​ಪಿ ವರಿಷ್ಠೆಯನ್ನು ಅವರ ಜನ್ಮದಿನದಂದೇ ಭೇಟಿಯಾಗಿ ಸೀಟು ಹಂಚಿಕೆ ಕುರಿತು ಚರ್ಚಿಸಬಹುದು. ಇಂಡಿಯಾ ಕೂಟದಲ್ಲಿ ಸೇರುವಂತೆ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಜನರ ಜೊತೆ ಜನ್ಮದಿನ: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ತಮ್ಮ ಹುಟ್ಟುಹಬ್ಬವನ್ನು ಜನಸಾಮಾನ್ಯರೊಂದಿಗೆ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ದಲಿತ ಸಮುದಾಯದ ಜನರನ್ನು ಸೆಳೆಯಲು ಅವರೊಂದಿಗೆ ಕೇಕ್ ಕತ್ತರಿಸಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ. ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಮಾಯಾವತಿ ಅವರು ದೇಶದ ಮೊದಲ ದಲಿತ ಸಿಎಂ ಆಗಿದ್ದಾರೆ.

ಇದನ್ನೂ ಓದಿ: ದೆಹಲಿ ಅಬಕಾರಿ ಹಗರಣ: ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ನಾಲ್ಕನೇ ಸಲ ಇಡಿ ಸಮನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.