ETV Bharat / bharat

'ಭೂಗಳ್ಳ' ಎಂದ ಬಿಜೆಪಿ ಅಭ್ಯರ್ಥಿ ಕುತ್ತಿಗೆಗೆ ಕೈ ಹಾಕಿದ ಬಿಆರ್​ಎಸ್​ ಶಾಸಕ: ನೇರ ಪ್ರಸಾರ ಕಾರ್ಯಕ್ರಮ ಅಲ್ಲೋಲ ಕಲ್ಲೋಲ

author img

By ETV Bharat Karnataka Team

Published : Oct 26, 2023, 2:24 PM IST

ತೆಲಂಗಾಣ ಚುನಾವಣೆ ಕುರಿತ ಚರ್ಚೆಯ ಸುದ್ದಿವಾಹಿನಿಯೊಂದರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಕುತ್ತಿಗೆಗೆ ಬಿಆರ್​ಎಸ್​ ಪಕ್ಷದ ಶಾಸಕ ಕೈ ಹಾಕಿ ತಳ್ಳಿದ ಘಟನೆ ನಡೆದಿದೆ.

brs-mla-attacks-bjp-candidate-during-live-tv-debate
ಬಿಜೆಪಿ ಅಭ್ಯರ್ಥಿ ಮೇಲೆ ಬಿಆರ್​ಎಸ್​ ಶಾಸಕ ದಾಳಿ

ಹೈದರಾಬಾದ್ (ತೆಲಂಗಾಣ): ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಚುನಾವಣಾ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರ ಪರಸ್ಪರ ಆರೋಪ - ಪ್ರತ್ಯಾರೋಪಗಳು, ಟೀಕೆ - ಪ್ರತಿಟೀಕೆಗಳು, ವಾಗ್ದಾದ - ವಾಗ್ಬಾಣಗಳು ತಾರಕಕ್ಕೇರಿವೆ. ಇದರ ನಡುವೆ ಬಿಜೆಪಿ ಅಭ್ಯರ್ಥಿಯೊಬ್ಬರ ಮೇಲೆ ಆಡಳಿತಾರೂಢ ಬಿಆರ್​ಎಸ್​ ಪಕ್ಷದ ಶಾಸಕ ಹಲ್ಲೆ ಮಾಡಲು ಮುಂದಾದ ಘಟನೆ ವರದಿಯಾಗಿದೆ.

ಹೈದರಾಬಾದ್‌ನಲ್ಲಿ ಸುದ್ದಿವಾಹಿನಿಯೊಂದು ಬುಧವಾರ ಚುನಾವಣಾ ಚರ್ಚೆ ಕುರಿತು ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದರಲ್ಲಿ ಕುತ್ಬುಲ್ಲಾಪುರ ಕ್ಷೇತ್ರದ ಬಿಆರ್‌ಎಸ್ ಶಾಸಕ ಕೆ.ಪಿ.ವಿವೇಕಾನಂದ ಹಾಗೂ ಬಿಜೆಪಿ ಅಭ್ಯರ್ಥಿ ಕೆ.ಶ್ರೀಶೈಲಂ ಗೌಡ್ ಪಾಲ್ಗೊಂಡಿದ್ದರು. ಈ ವೇಳೆ, ಇಬ್ಬರ ನಾಯಕರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಮಾತಿನ ಭರದಲ್ಲಿ ಶಾಸಕ ವಿವೇಕಾನಂದ ಅವರನ್ನು ಭೂಗಳ್ಳ ಎಂದು ಬಿಜೆಪಿಯ ಶ್ರೀಶೈಲಂ ಕರೆದಿದ್ದಾರೆ. ಇದರಿಂದ ಇಡೀ ಕಾರ್ಯಕ್ರಮವು ರಣಾಂಗಣವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ: Video - ಸಿನಿಮೀಯ ಶೈಲಿಯಲ್ಲಿ ವಾಷಿಂಗ್ ಮಷಿನ್​ನಲ್ಲಿ ಇರಿಸಿ ಬಂಡಲ್​ಗಟ್ಟಲೆ ನೋಟುಗಳ ಸಾಗಣೆ.. ಶೋರೂಮ್ ಎಂಡಿ, ಪೊಲೀಸರು ಹೇಳಿದ್ದೇನು?

ಬಿಜೆಪಿ ಅಭ್ಯರ್ಥಿಯ ಈ ರೀತಿಯಾಗಿ ಟೀಕೆ ಮಾಡುತ್ತಿದಂತೆ ಶಾಸಕ ವಿವೇಕಾನಂದ ಅವರತ್ತ ಧಾವಿಸಿದ್ದಾರೆ. ಶ್ರೀಶೈಲಂ ಅವರ ಗಂಟಲಿಗೆ ಕೈ ಹಾಕಿ ತಳ್ಳಿದರು. ಈ ಇಬ್ಬರು ನಾಯಕರನ್ನು ಸಮಾಧಾನ ಪಡಿಸಲು ಕಾರ್ಯಕ್ರಮದ ನಿರೂಪಕರು ಮತ್ತು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಅಲ್ಲದೇ, ಕಾರ್ಯಕ್ರಮ ವೀಕ್ಷಿಸುತ್ತಿದ್ದ ಉಭಯ ನಾಯಕರ ಬೆಂಬಲಿಗರು ವೇದಿಕೆಯತ್ತ ದೌಡಾಯಿಸಿದರು. ಅಷ್ಟೇ ಅಲ್ಲ, ಬ್ಯಾರಿಕೇಡ್‌ಗಳನ್ನು ಮುರಿದು ಕುರ್ಚಿಗಳನ್ನು ಎಸೆದು ಅಲ್ಲೋಲ ಕಲ್ಲೋಲ ಉಂಟು ಮಾಡಿದರು. ಮುಂದುವರಿದು, ಎರಡೂ ಗುಂಪುಗಳು ಪರಸ್ಪರ ಹಲ್ಲೆಗೆ ಯತ್ನಿಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು ಎಂದು ವರದಿಯಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಮತ್ತೊಂದೆಡೆ, ತಮ್ಮ ಪಕ್ಷದ ಅಭ್ಯರ್ಥಿಯ ಮೇಲೆ ಶಾಸಕ ದಾಳಿಗೆ ಮುಂದಾಗಿದ್ದನ್ನು ಬಿಜೆಪಿ ಖಂಡಿಸಿದೆ. ರಾಜ್ಯದಲ್ಲಿ ಬಿಆರ್‌ಎಸ್‌ ಸೋಲುತ್ತಿರುವ ಹತಾಶೆಯನ್ನು ಈ ಘಟನೆ ತೋರಿಸುತ್ತದೆ ಎಂದು ಬಿಜೆಪಿ ಹೇಳಿದೆ. ಹೈದರಾಬಾದ್ ಹಾಗೂ ಸುತ್ತಮುತ್ತಲು ಜಮೀನುಗಳನ್ನು ಕಬಳಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಬಿಆರ್‌ಎಸ್ ಶಾಸಕರು ಬೀದಿ ರೌಡಿಗಳಂತೆ ವರ್ತಿಸಿದ್ದಾರೆ ಎಂದು ಕೇಂದ್ರ ಸಚಿವರಾದ ಬಿಜೆಪಿ ರಾಜ್ಯಾಧ್ಯಕ್ಷ ಜಿ.ಕಿಶನ್ ರೆಡ್ಡಿ ಆರೋಪಿಸಿದ್ದಾರೆ.

ತೆಲಂಗಾಣದ 119 ಸದಸ್ಯರ ಬಲದ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಿಗದಿಯಾಗಿದೆ. ಲೋಕಸಭೆ ಚುನಾವಣೆಗೆ ಈ ಚುನಾವಣೆ ಮಹತ್ವದ್ದಾಗಿರುವುದರಿಂದ ಆಡಳಿತಾರೂಢ ಬಿಆರ್​ಎಸ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. (ಐಎ​ಎನ್​ಎಸ್​)

ಇದನ್ನೂ ಓದಿ: ತೆಲಂಗಾಣ ಚುನಾವಣೆ: ಬಿಜೆಪಿ ತೊರೆದು ಮರಳಿ ಕಾಂಗ್ರೆಸ್​ನತ್ತ ಮಾಜಿ ಶಾಸಕ ರಾಜಗೋಪಾಲ್​ ರೆಡ್ಡಿ ಚಿತ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.