ETV Bharat / bharat

BJP-JDS alliance​: ಜೆಡಿಎಸ್ ಕೇರಳ​ ಘಟಕದಲ್ಲಿ ಬಿಕ್ಕಟ್ಟು ಉದ್ಭವ.. ಸಿಪಿಎಂ ಜೊತೆಗೆ ಉಳಿಯಲು ನಾಯಕರ ತೀರ್ಮಾನ

author img

By ETV Bharat Karnataka Team

Published : Sep 23, 2023, 4:58 PM IST

BJP-JDS alliance​: ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಬೆನ್ನಲ್ಲೇ ಜೆಡಿಎಸ್ ಕೇರಳ ಘಟಕದಲ್ಲಿ ಅಪಸ್ವರ ಎದ್ದಿದೆ. ಸಿಪಿಎಂ ನೇತೃತ್ವದ ಎಲ್‌ಡಿಎಫ್ ಜೊತೆ ಮುಂದುವರೆಯಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ.

BJP-JDS alliance:  Kerala JDS is in a political crisis
ಜೆಡಿಎಸ್ ಕೇರಳ​ ಘಟಕದಲ್ಲಿ ಬಿಕ್ಕಟ್ಟು ಉದ್ಭವ... ಸಿಪಿಎಂ ಜೊತೆಗೆ ಉಳಿಯಲು ನಾಯಕರು ತೀರ್ಮಾನ

ತಿರುವನಂತಪುರಂ (ಕೇರಳ): ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವನ್ನು ಜೆಡಿಎಸ್​ ಸೇರಿದ ಬೆನ್ನಲ್ಲೇ ಜೆಡಿಎಸ್ ಕೇರಳ ಘಟಕದಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಕೇರಳದ ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್​ಡಿಎಫ್​ ಜೊತೆಗೆ ಜೆಡಿಎಸ್​ ಕೈಜೋಡಿಸಿದ್ದು, ರಾಜ್ಯ ಸರ್ಕಾರದ ಭಾಗವೂ ಆಗಿದೆ. ವಿಧಾನಸಭೆಯಲ್ಲಿ ಜನತಾ ದಳದ ಇಬ್ಬರು ಸದಸ್ಯರು ಇದ್ದು, ಒಬ್ಬರು ಸಚಿವ ಸ್ಥಾನವನ್ನೂ ಹೊಂದಿದ್ದಾರೆ.

ಜೆಡಿಎಸ್ ಎನ್​ಡಿಎ ಭಾಗವಾದ ಬೆನ್ನಲ್ಲೇ ಕೇರಳದಲ್ಲಿ ಪಕ್ಷವು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಜೊತೆ ಗಟ್ಟಿಯಾಗಿ ಇರಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ, ತಿರುವಲ್ಲಾ ಶಾಸಕ ಮ್ಯಾಥ್ಯೂ ಟಿ. ಥಾಮಸ್ ಹೇಳಿದ್ದಾರೆ. ಆದರೆ, ಪಕ್ಷದ ರಾಷ್ಟ್ರೀಯ ನಾಯಕತ್ವದ ನಿರ್ಧಾರಕ್ಕೆ ವಿರುದ್ಧವಾಗಿ ರಾಜ್ಯ ಘಟಕವು ಇಂತಹ ನಿರ್ಧಾರ ತೆಗೆದುಕೊಂಡು ಮುಂದುವರಿಯಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಜೆಡಿಎಸ್ ಸೆಕ್ಯೂಲರ್ ಪದ ತೆಗೆಯುವುದು ಸೂಕ್ತ: ಸಚಿವ ಜಮೀರ್ ಅಹಮದ್

ರಾಷ್ಟ್ರಮಟ್ಟದಲ್ಲಿ ಬಿಜೆಪಿ ಜೊತೆಗೆ ಹಾಗೂ ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್​ಡಿಎಫ್ ಜೊತೆಗೆ ಜೆಡಿಎಸ್​ ಮುಂದುವರೆದರೆ, ಅದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ರಾಜಕೀಯ ಅಸ್ತ್ರವಾಗುವ ಸಾಧ್ಯತೆಯೂ ಇದೆ. ಇಲ್ಲವೇ, ರಾಷ್ಟ್ರೀಯ ನಾಯಕತ್ವವನ್ನು ತಿರಸ್ಕರಿಸಿ ಪಕ್ಷ ಒಡೆದು ಹೊಸ ಪಕ್ಷವನ್ನು ಕೇರಳ ಜೆಡಿಎಸ್ ಘಟಕದ ನಾಯಕರು ಸ್ಥಾಪಿಸಿದರೆ, ಕೇರಳದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷದ ಉದಯಕ್ಕೆ ಕಾರಣವೂ ಆಗಬಹುದು.

ಇದೇ ವೇಳೆ, ಕೇರಳದಲ್ಲಿ ಎಲ್​ಡಿಎಫ್ ಜೊತೆಯಲ್ಲಿ ಉಳಿದುಕೊಂಡರೆ, ಅದು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರುತ್ತದೋ, ಇಲ್ಲವೋ ಎಂಬ ಆತಂಕವೂ ಕೇರಳ ಜೆಡಿಎಸ್ ನಾಯಕರನ್ನು ಕಾಡುತ್ತಿದೆ. ಮತ್ತೊಂದೆಡೆ, ಬಿಜೆಪಿ ಸೇರಿರುವ ರಾಷ್ಟ್ರೀಯ ನಾಯಕತ್ವವನ್ನು ಬದಿಗಿಟ್ಟು ಸ್ವತಂತ್ರವಾಗಬೇಕೆಂದು ಜೆಡಿಎಸ್​ನ ಕೇರಳ ಘಟಕಕ್ಕೆ ಸಿಪಿಎಂ ಮತ್ತು ಎಡರಂಗವು ಸಲಹೆ ನೀಡುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಗೆಲುವಿನ ನಂತರ ಕಾಂಗ್ರೆಸ್​ ದುರಹಂಕಾರದಿಂದ ನಡೆದುಕೊಳ್ಳುತ್ತಿದೆ. ಬಿಜೆಪಿ ಜೊತೆ ಜೆಡಿಎಸ್​ ಹೋಗಲು ಕಾಂಗ್ರೆಸ್​ನ ವರ್ತನೆ ಕಾರಣ ಎಂದು ಕೇರಳ ಜೆಡಿಎಸ್ ಮುಖಂಡರು ಆರೋಪಿಸುತ್ತಿದ್ದಾರೆ.

ವಿಲೀನಕ್ಕೆ ಯತ್ನ: ಸದ್ಯದ ಪರಿಸ್ಥಿತಿಯಲ್ಲಿ ಕೇರಳದ ಜೆಡಿಎಸ್ ಮುಖಂಡರು ಸಿಪಿಎಂ ಮತ್ತು ಎಲ್​ಡಿಎಫ್​ ಜೊತೆಗೆ ನಿಲ್ಲಲು ಆಸಕ್ತಿ ತೋರಿದ್ದಾರೆ. ಇದನ್ನು ಪಕ್ಷದ ರಾಜ್ಯಾಧ್ಯಕ್ಷ ಮ್ಯಾಥ್ಯೂ ಟಿ. ಥಾಮಸ್, ಸಚಿವ ಕೆ. ಕೃಷ್ಣನ್‌ಕುಟ್ಟಿ ಹಾಗೂ ಮಾಜಿ ಸಚಿವ ಜೋಸ್ ತೆಟ್ಟಾಯಿಲ್​ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಕೇರಳದ ನಾಯಕರು ಸಮಾಜವಾದಿ ಪಕ್ಷ (ಎಸ್​ಪಿ) ಮತ್ತು ರಾಷ್ಟ್ರೀಯ ಜನತಾ ದಳ (ಆರ್​ಜೆಡಿ)ದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅಕ್ಟೋಬರ್​​ ಮೊದಲ ವಾರದಲ್ಲಿ ಸಭೆ ನಡೆಯಲಿದೆ.

ಇದನ್ನೂ ಓದಿ: BJP-JDS alliance: ಎನ್​ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್​ - ಹೊಸ ರಾಜಕೀಯ ಶಕೆ ಆರಂಭ ಎಂದ ಕುಮಾರಸ್ವಾಮಿ

ನವದೆಹಲಿಯಲ್ಲಿ ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಎನ್​ಡಿಎ ಮೈತ್ರಿಕೂಟ ಸೇರುವುದನ್ನು ಅಧಿಕೃತಪಟ್ಟಿಸಿದ್ದರು. ಕರ್ನಾಟಕದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಎರಡೂ ಪಕ್ಷಗಳು ಒಟ್ಟಿಗೆ ಸ್ಪರ್ಧಿಸಲಿದ್ದು, ಸೀಟು ಹಂಚಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.