ETV Bharat / bharat

ತಮಿಳುನಾಡು ಬಿಜೆಪಿ ಐಟಿ ಸೆಲ್ ಕಾರ್ಯದರ್ಶಿ ಎಐಎಡಿಎಂಕೆ ಸೇರ್ಪಡೆ

author img

By

Published : Mar 7, 2023, 7:30 PM IST

ತಮಿಳು ನಾಡು ಬಿಜೆಪಿ ಐಟಿ ಸೆಲ್​ನ ರಾಜ್ಯ ಕಾರ್ಯದರ್ಶಿ ಎಐಎಡಿಎಂಕೆ ಸೇರಿದ್ದಾರೆ. ಹಂಗಾಮಿ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ಸಮ್ಮುಖದಲ್ಲಿ ಅವರು ಎಐಎಡಿಎಂಕೆ ಸೇರಿದರು.

BJP IT wing functionary who quit party  joins AIADMK
BJP IT wing functionary who quit party joins AIADMK

ಚೆನ್ನೈ : ಬಿಜೆಪಿ ಐಟಿ ವಿಭಾಗದ ಮಾಜಿ ರಾಜ್ಯ ಕಾರ್ಯದರ್ಶಿ ದಿಲೀಪ್ ಕಣ್ಣನ್ ಪಕ್ಷ ತೊರೆದು ಎಐಎಡಿಎಂಕೆ ಸೇರ್ಪಡೆಯಾಗಿದ್ದಾರೆ. ಮಂಗಳವಾರ ಬಿಜೆಪಿ ತೊರೆದು ಎಐಎಡಿಎಂಕೆ ಸೇರಿದ ಕಾರ್ಯಕರ್ತರಲ್ಲಿ ಇವರೂ ಸೇರಿದ್ದಾರೆ. ಕಣ್ಣನ್ ಮತ್ತು ಓರ್ವ ಮಹಿಳಾ ಪದಾಧಿಕಾರಿ ಸೇರಿದಂತೆ ಬಿಜೆಪಿಯ ಮೂವರು ಎಐಎಡಿಎಂಕೆ ಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಬಿಜೆಪಿ ಪಕ್ಷದ ತಮಿಳುನಾಡು ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಯ ಆಗಿನ ರಾಜ್ಯ ಐಟಿ ವಿಭಾಗದ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಪಕ್ಷ ತೊರೆದು ಎಐಎಡಿಎಂಕೆಗೆ ಸೇರಿದ್ದರು. ಅದಾಗಿ ಕೆಲ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಸಿಟಿಆರ್ ನಿರ್ಮಲ್ ಕುಮಾರ್ ಎಐಎಡಿಎಂಕೆ ಸೇರ್ಪಡೆ: ಬಿಜೆಪಿಯ ತಮಿಳುನಾಡು ಐಟಿ ವಿಭಾಗದ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ ಭಾನುವಾರ ಪಕ್ಷದ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿ ಪಕ್ಷವನ್ನು ತೊರೆದಿದ್ದಾರೆ. ತಮ್ಮ ರಾಜೀನಾಮೆ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅವರು ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ ಕೆ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಎಐಎಡಿಎಂಕೆ ಸೇರ್ಪಡೆಗೊಂಡರು. ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಕ್ಷದ ರಾಜ್ಯ ನಾಯಕತ್ವವು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ ಮತ್ತು ಅಣ್ಣಾಮಲೈ ಅವರು ಹಲವರ ವಿರುದ್ಧ ಕಣ್ಗಾವಲಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಆರೋಪವನ್ನು ಅಣ್ಣಾಮಲೈ ನಿಕಟವರ್ತಿ ನಿರಾಕರಿಸಿದ್ದಾರೆ. ನಿರ್ಮಲ್ ಕುಮಾರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಅವರ ನಿಕಟವರ್ತಿ ಅಮರ್ ಪ್ರಸಾದ್ ರೆಡ್ಡಿ "ಕಣ್ಗಾವಲು" ಆರೋಪವನ್ನು "ಆಧಾರರಹಿತ" ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದರು.

ಕಾರ್ಯಕರ್ತರು ಉನ್ನತ ಸ್ಥಾನಮಾನ ಪಡೆಯಬಹುದು ಎಂದ ಪಳನಿಸ್ವಾಮಿ: ಪಕ್ಷದ ನಾಯಕತ್ವಕ್ಕೆ ನಿಷ್ಠರಾಗಿ ಕೆಲಸ ಮಾಡುವ ಯಾವುದೇ ಕಾರ್ಯಕರ್ತರು ಪಕ್ಷದ ಉನ್ನತ ಸ್ಥಾನಕ್ಕೆ ಏರಬಹುದು ಎಂದು ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಭಾನುವಾರ ಹೇಳಿದ್ದಾರೆ. ದಿವಂಗತ ಎಐಎಡಿಎಂಕೆ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜನ್ಮದಿನದ ಅಂಗವಾಗಿ ಡಾ. ರಾಧಾಕೃಷ್ಣನ್ ನಗರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಯಲಲಿತಾ ಅವರ ನಿಧನದ ನಂತರ ಪಕ್ಷವು ಕೊನೆಗೊಳ್ಳುತ್ತದೆ ಎಂದು ಹಲವರು ಕನಸು ಕಂಡಿದ್ದರು. ಆದರೆ, ಪಕ್ಷವು ಫೀನಿಕ್ಸ್ ತರಹ ಮರಳಿ ಬರುವಂತೆ ಕೆಲಸ ಮಾಡಿತು ಎಂದರು. ಸಾಮಾನ್ಯ ಕಾರ್ಯಕರ್ತನಾಗಿದ್ದ ತಾವು ಪಕ್ಷದಲ್ಲಿ ಹೇಗೆ ಉನ್ನತ ಮಟ್ಟಕ್ಕೇರಿದರು ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಎಐಎಡಿಎಂಕೆಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಕಷ್ಟಪಟ್ಟು ಕೆಲಸ ಮಾಡಿದರೆ ಮತ್ತು ನಾಯಕತ್ವಕ್ಕೆ ನಿಷ್ಠನಾಗಿ ಉಳಿದಿದ್ದರೆ ಅವನು ನನ್ನಂತೆ ಮೇಲಕ್ಕೆ ಬರಬಹುದು. ಆದರೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಲು ಯಾವುದೇ ಕಷ್ಟ ಪಡಲಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ : ಜಾತಿ ಆಧಾರಿತ ಜನಗಣತಿಗೆ ತಮಿಳುನಾಡು ಸರ್ಕಾರ ಅಸ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.