ನವದೆಹಲಿ: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಪಾಲಂ ಏರ್ಬೇಸ್ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಮೋದಿ ಎಂದು ಜೈಕಾರ ಹಾಕಿದರು.
ಈ ವೇಳೆ, ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಮೋ, ಸಹಸ್ರ ಸಂಖ್ಯೆಯಲ್ಲಿ ನನ್ನನ್ನು ಭರಮಾಡಿಕೊಳ್ಳಲು ಆಗಮಿಸಿದ್ದಕ್ಕಾಗಿ ನಿಮಗೆ ಧನ್ಯವಾದ. 2014ರಲ್ಲೂ ನಾನು ಅಮೆರಿಕಾಗೆ ತೆರಳಿದ್ದೆ. ಈಗಲೂ ನಾನು ಯುಎನ್ಗೆ ಹೋಗಿ ಬಂದಿರುವೆ. ಆದರೆ, ಈ ಐದು ವರ್ಷದಲ್ಲಿ ವಿಶ್ವ ಭಾರತವನ್ನ ನೋಡುವ ದೃಷ್ಠಿಕೋನ ಬಹಳಷ್ಟು ಬದಲಾಗಿದ್ದು, ಭಾರತಕ್ಕೆ ನೀಡುವ ಗೌರವ ಹೆಚ್ಚಾಗಿದೆ. ಹೀಗಾಗಿ ನಾನು ದೇಶದ 130 ಕೋಟಿ ಭಾರತೀಯರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
2016ರ ಸೆಪ್ಟೆಂಬರ್ 28ರ ರಾತ್ರಿ, ಅಂದರೆ ಇವತ್ತು ನಮ್ಮ ದೇಶದ ವೀರ ಸೈನಿಕರು ಸರ್ಜಿಕಲ್ ಸ್ಟ್ರೈಕ್ ನಡೆಸಿ, ಇಡೀ ವಿಶ್ವವೇ ನಮ್ಮ ಕಡೆ ತಿರುಗಿ ನೋಡುವಂತೆ ಮಾಡಿದೆ. ಯೋಧರ ಧೈರ್ಯಕ್ಕೆ ನಾನು ನಿಜಕ್ಕೂ ಸೆಲ್ಯೂಟ್ ಮಾಡುವೆ ಎಂದರು. ನಮ್ಮ ಯೋಧರು ಹಾಕಿಕೊಂಡಿದ್ದ ಪ್ಲಾನ್ ಸಕ್ಸಸ್ ಆಗಿ, ಅವರು ತಮ್ಮ ಕೆಲಸವನ್ನು ಮುಗಿಸಿ ನನಗೆ ಫೋನ್ ಮಾಡುವ ತನಕ ಆ ರಾತ್ರಿ ನಾನು ನಿದ್ದೆ ಮಾಡಿರಲಿಲ್ಲ ಎಂದು ಮೋದಿ ಇದೇ ವೇಳೆ ಹೇಳಿದರು.
ಇದೇ ವೇಳೆ, ನವರಾತ್ರಿಗೆ ದೇಶದ ಜನರಿಗೆ ಶುಭಾಶಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದಲ್ಲಿ ನನ್ನನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಅನಿವಾಸಿ ಭಾರತೀಯರಿಗೆ ಧನ್ಯವಾದ ಸಲ್ಲಿಸುವೆ ಎಂದರು.