ETV Bharat / bharat

ಕೋವಿಡ್​​​​ಯೇತರ ಆರೋಗ್ಯ ಸಮಸ್ಯೆಗಳಿಗೆ ಸಿಗದ ವೈದ್ಯಕೀಯ ಚಿಕಿತ್ಸೆ

author img

By

Published : Oct 2, 2020, 8:03 PM IST

ಲಕ್ಷಾಂತರ ಜನರು ಇತರ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವರಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿವೆ. ಇದರ ಪರಿಣಾಮ ದೀರ್ಘಕಾಲಿನ ಚಿಕಿತ್ಸೆ ಪಡೆಯಬೇಕು. ರೋಗಿಗಳ ಆರೋಗ್ಯ ಸ್ಥಿತಿ ಕ್ಷೀಣಿಸಲಾರಂಭಿಸಿದೆ. ಈ ಹಿನ್ನೆಲೆ ಸರ್ಕಾರ ತುರ್ತಾಗಿ ಆರೋಗ್ಯ ವ್ಯವಸ್ಥೆ ಬಲಪಡಿಸುವತ್ತ ಹೆಜ್ಜೆ ಇಡಬೇಕಿದೆ..

no-medical-treatment-for-non-covid-patients
ಕೋವಿಡ್​​​​ಯೇತರ ಅರೋಗ್ಯ ಸಮಸ್ಯೆಗಳಿಗೆ ಸಿಗದ ವೈದ್ಯಕೀಯ ಚಿಕಿತ್ಸೆ

ನವದೆಹಲಿ : ಕಳೆದ 10 ತಿಂಗಳಿನಿಂದ ಇಡೀ ಜಗತ್ತು ಕೋವಿಡ್-19 ವಿರುದ್ಧ ಸಮಷ್ಟಿಯುತವಾಗಿ ಹೋರಾಡುತ್ತಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧದ ಸಮರದಲ್ಲಿ ವಿಶ್ವ ಒಂದಾಗಿದೆ. ಆದರೂ, ಇದೀಗ ವಿಶ್ವದಾದ್ಯಂತ ಕೋವಿಡ್​​​ ಸಾವಿನ ಸಂಖ್ಯೆ 10,00,000 (ಒಂದು ಮಿಲಿಯನ್) ದಾಟಿದೆ.

ಅತೀ ಶ್ರೇಷ್ಠ ದರ್ಜೆಯ ವೈದ್ಯಕೀಯ ವ್ಯವಸ್ಥೆ, ಸೌಲಭ್ಯ ಹೊಂದಿರುವ ದೇಶಗಳಿಂದ ಹಿಡಿದು, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದವರೆಗೆ, ಎಲ್ಲಾ ದೇಶಗಳ ಆರೋಗ್ಯ ವ್ಯವಸ್ಥೆಯ ಹುಳುಕುಗಳನ್ನು ಈ ಸಾಂಕ್ರಾಮಿಕ ರೋಗ ಬಟಾಬಯಲುಗೊಳಿಸಿದೆ. ಈ ಎಲ್ಲದರ ನಡುವೆ, ಎಲ್ಲ ದೇಶಗಳಲ್ಲಿಯೂ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.

ಪರಿಣಾಮ ಅಭಿವೃದ್ಧಿಶೀಲ ದೇಶಗಳು ಕೋವಿಡ್​​ಯೇತರ ರೋಗಗಳ ವಿರುದ್ಧದ ಹೋರಾಟದಲ್ಲಿಯೂ ದಯನೀಯ ವೈಫಲ್ಯ ಎದುರಿಸಲಾರಂಭಿಸಿವೆ. ಇತರ ರೋಗ ಬಾಧೆಗಳಿಗೆ ಚಿಕಿತ್ಸೆ ನೀಡಲು ಹೆಣಗಾಡಬೇಕಾದ ಸ್ಥಿತಿ ಎದುರಿಸುತ್ತಿವೆ. ವಿಶ್ವದ ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆ ಲ್ಯಾನ್ಸೆಟ್ ಸಮೀಕ್ಷೆಯು ಕೊರೊನಾಕ್ಕಿಂತ ಹೆಚ್ಚು ಮಾರಕವಾದ 15 ರೋಗಗಳನ್ನು ಗುರುತಿಸಿದೆ. ಅವುಗಳಲ್ಲಿ ಪ್ರತಿ ರೋಗವು ವಾರ್ಷಿಕವಾಗಿ 10,00,000 ಸಾವುಗಳಿಗೆ ವಿಶ್ವಾದ್ಯಂತ ಕಾರಣವಾಗುತ್ತವೆ.

ಈ ಅಧ್ಯಯನವು ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗೆ ಕರೆ ನೀಡಿದೆ. ಆ ಮೂಲಕ, ಎಲ್ಲಾ ರೋಗಗಳ ವಿರುದ್ಧದ ಹೋರಾಟ ರೂಪಿಸಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದೆ. ಈ ಅಧ್ಯಯನದ ಪ್ರಕಾರ, ಹೃದಯ ಸಂಬಂಧಿ ಕಾಯಿಲೆಗಳು (1.78 ಕೋಟಿ), ಕ್ಯಾನ್ಸರ್​​ ರೋಗ (96 ಲಕ್ಷ), ಮೂತ್ರಪಿಂಡದ ಕಾಯಿಲೆಗಳು (12 ಲಕ್ಷ), ಹಾಗೂ ಕ್ಷಯ (11 ಲಕ್ಷ) ಹೀಗೆ ಇತರ ಮಾರಕ ಕಾಯಿಲೆಗಳು ಪ್ರತಿವರ್ಷ ವಿಶ್ವದಾದ್ಯಂತ 4.43 ಕೋಟಿ ಜನರ ಮರಣಕ್ಕೆ ಕಾರಣವಾಗಿವೆ. ಈ ಕಾಯಿಲೆಗಳಿಗೆ ನಿರ್ಣಾಯಕ ವೈದ್ಯಕೀಯ ಸೌಲಭ್ಯಗಳು ಹೆಚ್ಚಿನ ಸ್ಥಳಗಳಲ್ಲಿ ಗುಣಮಟ್ಟದ್ದಾಗಿಲ್ಲ.

ಕೋವಿಡ್ ರೋಗ ವ್ಯಾಪಕವಾಗಿ ಉಲ್ಬಣಿಸಲಾರಂಭಿಸಿದ ಮೊದಲ ಮೂರು ತಿಂಗಳಲ್ಲಿ, ಭಾರತದಲ್ಲಿ 5.8 ಲಕ್ಷ ಸೇರಿದಂತೆ, ವಿಶ್ವದಾದ್ಯಂತ 2.84 ಕೋಟಿ ಶಸ್ತ್ರಚಿಕಿತ್ಸೆಗಳನ್ನು ತಜ್ಞ ವೈದ್ಯರು ಅನಿರ್ದಿಷ್ಟವಾಗಿ ಮುಂದೂಡಿದ್ದಾರೆ. ಇವೆಲ್ಲದರ ನಡುವೆ, ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಈ ವರ್ಷ 16.6 ಲಕ್ಷ ಜನರು ಕ್ಷಯರೋಗಕ್ಕೆ ಬಲಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಆದರೆ, ಕೊರೊನಾ ಕಡಿಮೆಯಾದ ಬಳಿಕ ಈ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಬಹುದೇನೋ? ಅದು ಯಾರಿಗೂ ತಿಳಿದಿಲ್ಲ.

ರಾಷ್ಟ್ರೀಯ ಆರೋಗ್ಯ ಮಿಷನ್ ಸಮೀಕ್ಷೆ ಪ್ರಕಾರ, ಮಾರ್ಚ್ 2020ರ ಒಂದು ತಿಂಗಳ ಅವಧಿಯಲ್ಲೇ, ದೇಶದಾದ್ಯಂತ ಲಕ್ಷಾಂತರ ಮಕ್ಕಳು ರೋಗನಿರೋಧಕ ಲಸಿಕೆಗಳ ವೇಳಾಪಟ್ಟಿ ತಪ್ಪಿಸಿಕೊಂಡಿದ್ದಾರೆ. ಕೊರೊನಾ ಹರಡುವಿಕೆ ಭೀತಿಯಿಂದ ಯಾರು ಕೂಡ ಲಸಿಕೆ ಹಾಕಿಕೊಳ್ಳಲು ಮುಂದಾಗಿಲ್ಲ. ಈ ನಡುವೆ ಕೋವಿಡ್-19 ಅಲ್ಲದ ಕಾಯಿಲೆಗಳನ್ನು ಪತ್ತೆಹಚ್ಚಲು ವೈದ್ಯರು ಲಭ್ಯವಿಲ್ಲ. ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್, ಕೀಮೋಥೆರಪಿ, ರಕ್ತ ವರ್ಗಾವಣೆ ಮತ್ತು ಲಾಕ್​​​ಡೌನ್ ಸಮಯದಲ್ಲಿ ಹೆರಿಗೆಯಂತಹ ತುರ್ತು ಸೇವೆಗಳನ್ನು ರದ್ದುಗೊಳಿಸಲಾಗಿತ್ತು.

ಈ ಎಲ್ಲ ದೂರಿನ ಹಿನ್ನೆಲೆ ಕೇಂದ್ರವು ರೋಗಿಗಳಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಲಭಿಸುವಂತಾಗಲು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತು ಮತ್ತು ಅದರ ಸಂಪೂರ್ಣ ಪಾಲನೆಗೆ ಆಸ್ಪತ್ರೆಗಳಿಗೆ ಆದೇಶಿಸಿತು. ಈ ನಡುವೆ ಇದೀಗ ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್ ಕಂಟೇನ್ಮೆಂಟ್ ಪ್ರದೇಶಗಲ್ಲಿ ಕಣ್ಣಿನ ಆಸ್ಪತ್ರೆಗಳನ್ನು ಮುಚ್ಚಲು ಆದೇಶಿಸಿತು. ಇಂತಹ ಅಧಿಕೃತ ಮತ್ತು ಅನಧಿಕೃತ ನಿಷೇಧಗಳು ಆರೋಗ್ಯ ಸೇವೆ ಹಲವರಿಗೆ ದೊರೆಯದಂತೆ ಮಾಡಿದೆ.

ಈ ಎಲ್ಲದರ ನಡುವೆ ಮುಂಗಾರು ಮಳೆ ಮತ್ತು ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳು ಎಲ್ಲೆಡೆ ಹರಡುತ್ತಿವೆ. ಈ ಹಿನ್ನೆಲೆ ನಮ್ಮ ಆರೋಗ್ಯ ವ್ಯವಸ್ಥೆ ಬಲಪಡಿಸಲು ಪ್ರಧಾನಿ ಕಚೇರಿಯಿಂದ ಸ್ಪಷ್ಟ ಆದೇಶ ಹೊರಡಿಸಲಾಗಿದೆ. ಆದರೂ ವಾಸ್ತವದಲ್ಲಿ ಆರೋಗ್ಯ ವ್ಯವಸ್ಥೆ ಇನ್ನಷ್ಟು ಬಿಗಡಾಯಿಸುತ್ತಿದೆ. ಅಂದಾಜು 9 ಕೋಟಿ ಭಾರತೀಯರು ಪ್ರಸ್ತುತ ಥಲಸ್ಸೆಮಿಯಾ ಮತ್ತು ಸ್ನಾಯುವಿನ ಡಿಸ್ಟ್ರೋಫಿಯಂತಹ ಅಪರೂಪದ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಲಕ್ಷಾಂತರ ಜನರು ಇತರ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇವರಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿವೆ. ಇದರ ಪರಿಣಾಮ ದೀರ್ಘಕಾಲಿನ ಚಿಕಿತ್ಸೆ ಪಡೆಯಬೇಕು. ರೋಗಿಗಳ ಆರೋಗ್ಯ ಸ್ಥಿತಿ ಕ್ಷೀಣಿಸಲಾರಂಭಿಸಿದೆ. ಈ ಹಿನ್ನೆಲೆ ಸರ್ಕಾರ ತುರ್ತಾಗಿ ಆರೋಗ್ಯ ವ್ಯವಸ್ಥೆ ಬಲಪಡಿಸುವತ್ತ ಹೆಜ್ಜೆ ಇಡಬೇಕಿದೆ. ಕೋವಿಡ್ ಹಾಗೂ ಕೋವಿಡ್​​​​​ಯೇತರ ರೋಗಿಗಳಿಗೆ ಸಮಾನ ಸೂಕ್ತ ಚಿಕಿತ್ಸೆ ಸೂಕ್ತ ಸಮಯದಲ್ಲಿ ಲಭ್ಯವಾಗುವಂತೆ ಮಾಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.