ನವದೆಹಲಿ: ರಾಷ್ಟ್ರ ರಾಜಧಾನಿಯ ರೈಲ್ವೆ ಹಳಿಗಳ ಬದಿಗಳಲ್ಲಿ ಇರುವ ಸ್ಲಂ ಏರಿಯಾಗಳನ್ನು ತೆರವುಗೊಳಿಸುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಸಂಬಂಧ ರೈಲ್ವೆ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಸುಮಾರು 70 ಕಿಲೋಮೀಟರ್ ರೈಲ್ವೆ ಹಳಿಗಳ ಉದ್ದಕ್ಕೂ ಸ್ಲಂ ಏರಿಯಾಗಳು ಇವೆ. ರೈಲ್ವೆ, ನಗರಾಭಿವೃದ್ಧಿ ಸಚಿವಾಲಯ ಮತ್ತು ದೆಹಲಿ ಸರ್ಕಾರ ಒಟ್ಟಾಗಿ ಕುಳಿತು ನಾಲ್ಕು ವಾರಗಳಲ್ಲಿ ಈ ಸಂಬಂಧ ಪರಿಹಾರ ಕಂಡುಕೊಳ್ಳಲಿವೆ. ಅಲ್ಲಿಯವರೆಗೆ ಕೊಳಗೇರಿಗಳನ್ನು ತೆರವುಗೊಳಿಸುವುದಿಲ್ಲ ಎಂದು ಕೇಂದ್ರವನ್ನು ಪ್ರತಿನಿಧಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠದ ಮುಂದೆ ಹೇಳಿದ್ದಾರೆ.
ನ್ಯಾಯಾಲಯವು ಯಥಾಸ್ಥಿತಿಗೆ ಆದೇಶಿಸಬೇಕು ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ನ್ಯಾಯಪೀಠದ ಮುಂದೆ ಮನವಿ ಸಲ್ಲಿಸಿದರು. ನಿರ್ಧಾರ ತೆಗೆದುಕೊಳ್ಳುವವರೆಗೂ ಯಥಾಸ್ಥಿತಿ ಇರುತ್ತದೆ ಎಂದು ಕೇಂದ್ರವು ಈಗಾಗಲೇ ಹೇಳಿರುವ ಕಾರಣ ಅದು ಆಗುವುದಿಲ್ಲ ಎಂದು ನ್ಯಾಯಪೀಠ ಹೇಳಿತು.
ದೆಹಲಿಯ ರೈಲ್ವೆ ಹಳಿಗಳ ಉದ್ದಕ್ಕೂ ಇರುವ ಸುಮಾರು 48,000 ಸ್ಲಂ ನಿವಾಸಿಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹಿರಿಯ ಕಾಂಗ್ರೆಸ್ ಮುಖಂಡ ಅಜಯ್ ಮಾಕೆನ್ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು. ಆಗಸ್ಟ್ 31 ರಂದು ಸುಪ್ರೀಂಕೋರ್ಟ್ ಮೂರು ತಿಂಗಳಲ್ಲಿ ತೆಗೆದುಹಾಕುವಂತೆ ಆದೇಶಿಸಿತ್ತು.