ವಿಜಯವಾಡ: ಅಧಿಕಾರ ವಹಿಸಿಕೊಂಡಾಗಿನಿಂದ ಒಂದಿಲ್ಲೊಂದು ನೀತಿಯಿಂದ ಸುದ್ದಿಯಲ್ಲಿರುವ ಆಂಧ್ರಪ್ರದೇಶದ ಜಗನ್ ಸರ್ಕಾರ ಈಗ ಪರಿಷ್ಕೃತ ಅಬಕಾರಿ ನೀತಿ ಜಾರಿಗೆ ತರಲು ಮುಂದಾಗಿದೆ.
ಹೊಸ ನಿಯಮದಂತೆ, ಮದ್ಯದಂಗಡಿಗಳು ರಾತ್ರಿ 10 ಗಂಟೆ ಬದಲು, ಸಂಜೆ 6 ಗಂಟೆಗೇ ಬಾಗಿಲು ಮುಚ್ಚಬೇಕಿದೆ. ಇದರಿಂದ ಕೆಲಸ ಮುಗಿಸಿ, ರಾತ್ರಿ ಆರಾಮಾಗಿ ಮದ್ಯಪಾನ ಮಾಡುತ್ತಿದ್ದ 'ಮಧುಪ್ರಿಯ'ರಿಗೆ ಶಾಕ್ ಸಹ ಆಗಲಿದೆ.
ಹೊಸ ನಿಮಯ ಜಾರಿ ಆಗಿದ್ದೇ ಆದಲ್ಲಿ ಕುಡುಕರಿಗೇನೂ ಸಮಸ್ಯೆಯಾಗುವುದಿಲ್ಲ. ಆದರೆ ಕುಡಿಯುವ ನಿರಂತರತೆಗೆ ಕೊಂಚ ಕಡಿವಾಣ ಬೀಳಲಿದೆ ಎಂಬುದು ಅಬಕಾರಿ ಇಲಾಖೆಯ ಪ್ಲಾನ್.
ಇದರೊಟ್ಟಿಗೆ ಮದ್ಯದಂಗಡಿಗಳ ಸಂಖ್ಯೆ ಶೇ.20ರಷ್ಟು ಕಡಿಮೆ ಮಾಡುವ, ಬೆಲೆ ಏರಿಕೆ ಮಾಡುವ ಹಾಗೂ ಕೆಲವು ಬ್ರಾಂಡ್ಗಳನ್ನು ಬಂದ್ ಮಾಡುವ ನಿರ್ಧಾರವನ್ನೂ ರಾಜ್ಯ ಸರ್ಕಾರ ಮಾಡಿದೆ.
ತಾನು ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಮದ್ಯ ಮುಕ್ತವನ್ನಾಗಿ ಮಾಡುತ್ತೇನೆಂದು ವೈ.ಎಸ್. ಜಗಮೋಹನ್ ರೆಡ್ಡಿ ಚುನಾವಣಾ ವೇಳೆ ಹೇಳಿದ್ದರು. ಇದೀಗ ಸಿಎಂ ಆಗಿರುವ ಅವರು ತಮ್ಮ ಮಾತಿನಂತೆ ಮೊದಲ ಹೆಜ್ಜೆ ಇಡುತ್ತಿದ್ದಾರೆ.