ಮೆಡ್ಚಲ್(ತೆಲಂಗಾಣ): ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಗೆಳೆಯನಿಂದ ತಾಯಿಯೊಬ್ಬಳು ಐದು ವರ್ಷದ ಮಗಳನ್ನು ಶಾಶ್ವತವಾಗಿ ಕಳೆದುಕೊಂಡಿರುವ ಘಟನೆ ಪೋಚಾರಂ ಗ್ರಾಮದಲ್ಲಿ ನಡೆದಿದೆ.
ಮಗುವಿನ ತಾಯಿ ಅನುಷಾಳಿಗೆ ಮೂರು ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ಕರುಣಾಕರ್ ಎಂಬ ವ್ಯಕ್ತಿ ಪರಿಚಯವಾಗಿದ್ದ. ಇವರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಹೀಗೆ ಇವರ ಸ್ನೇಹ ಸಾಗುತ್ತಿದ್ದಾಗ ಕರುಣಾಕರ್ ತನ್ನ ಸ್ನೇಹಿತ ರಮೇಶ್ನನ್ನು ಅನುಷಾಗೆ ಪರಿಚಯಿಸಿದ್ದ.
ಕೆಲ ದಿನಗಳ ಬಳಿಕ ರಮೇಶ್ ಮತ್ತು ಅನುಷಾ ಸ್ನೇಹವೂ ಕರುಣಾಕರ್ನನ್ನು ದೂರ ಮಾಡಿತು. ಇದರಿಂದ ಕೋಪಗೊಂಡ ಕರುಣಾಕರ್ ಗುರುವಾರ ಮಧ್ಯಾಹ್ನ 12.30ಕ್ಕೆ ನೇರವಾಗಿ ಅನುಷಾ ಮನೆಗೆ ತೆರಳಿದ್ದಾನೆ. ಈ ವೇಳೆ ಅನುಷಾ ಮನೆಯಲ್ಲಿ ರಮೇಶ್ ಇದ್ದನು. ಕರುಣಾಕರ್ ಬರುವುದನ್ನು ಗಮನಿಸಿದ ಅನುಷಾ ಮನೆಯ ಕೋಣೆಯೊಂದರಲ್ಲಿ ರಮೇಶ್ನನ್ನು ಮುಚ್ಚಿಟ್ಟಿದ್ದಳು.
ಕರುಣಾಕರ್ಗೆ ರಮೇಶ್ ಮನೆಯಲ್ಲಿರುವುದು ಗೊತ್ತಾಗಿದ್ದು, ಮತ್ತಷ್ಟು ಕುಪಿತಗೊಂಡಿದ್ದಾನೆ. ಕೋಣೆಯಿಂದ ಹೊರಬರುವಂತೆ ರಮೇಶ್ಗೆ ಕರುಣಾಕರ್ ಹೇಳಿದ್ದಾನೆ. ಇಲ್ಲವಾದಲ್ಲಿ ಮಗುವಿನ ಪ್ರಾಣವನ್ನು ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಆದ್ರೂ ಸಹ ರಮೇಶ್ ಕೋಣೆಯಿಂದ ಹೊರ ಬಾರದ ಹಿನ್ನೆಲೆ ಮಗುವಿನ ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ಅನುಷಾಳ ಆಕ್ರಂದನ ಕೇಳೆ ರಮೇಶ್ ಕೋಣೆಯಿಂದ ಹೊರ ಬಂದಿದ್ದಾನೆ. ಈ ವೇಳೆ ಅನುಷಾ ಮತ್ತು ರಮೇಶ್ ಮೇಲೆ ಕರುಣಾಕರ್ ಚಾಕುವಿನಿಂದ ದಾಳಿ ಮಾಡಿದ್ದು, ಆಗ ರಮೇಶ್ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ದಾಳಿಯ ಬಳಿಕ ಕರುಣಾಕರ್ ಸಹ ಕತ್ತು ಕುಯ್ದುಕೊಂಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕರುಣಾಕರ್ ಸೇರಿದಂತೆ ಮಗುವಿನ ತಾಯಿ ಅನುಷಾಳನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಮಗುವಿನ ತಂದೆ ಕಲ್ಯಾಣ್ ಯಾದಾದ್ರಿ ಜಿಲ್ಲೆಯ ಆತ್ಮಕೂರು ಪಂಚಾಯ್ತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಘಟನೆಯ ಬಗ್ಗೆ ಘಟ್ಕೇಸರ್ ಪೊಲೀಸರು ಕಲ್ಯಾಣ್ಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.