ETV Bharat / bharat

ಭಾರತ್ ಜೋಡೋ ಯಾತ್ರೆ ಸಾಮಾಜಿಕ ಆಂದೋಲನ.. ಹಾಥ್ ಸೇ ಹಾಥ್ ಜೋಡೋ ರಾಜಕೀಯ ಅಭಿಯಾನ: ಕಾಂಗ್ರೆಸ್​​

author img

By

Published : Jan 13, 2023, 8:25 PM IST

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ತಲುಪಿ ಮುಕ್ತಾಯವಾಗಲಿದೆ. ಇದಕ್ಕೂ ಮುನ್ನವೇ ಜನವರಿ 26ರಿಂದ ಹಾಥ್ ಸೇ ಹಾಥ್ ಜೋಡೋ ರಾಜಕೀಯ ಅಭಿಯಾನವನ್ನು ಕಾಂಗ್ರೆಸ್​ ಆರಂಭಿಸಲು ಸಜ್ಜಾಗಿದೆ.

bharat-jodo-yatra-was-social-haath-se-haath-jodo-to-be-political-says-congress
ಭಾರತ್ ಜೋಡೋ ಯಾತ್ರೆ ಸಾಮಾಜಿಕ ಆಂದೋಲನ... ಹಾಥ್ ಸೇ ಹಾಥ್ ಜೋಡೋ ರಾಜಕೀಯ ಅಭಿಯಾನ: ಕಾಂಗ್ರೆಸ್​​

ನವದೆಹಲಿ: ಕಳೆದ ಒಂಬತ್ತು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಸತತ ಸೋಲುಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಹೀನಾಯ ಸ್ಥಿತಿಗೆ ತಲುಪಿದೆ. ತನ್ನ ವರ್ಚಸ್ಸನ್ನು ಮರಳಿ ಹೆಚ್ಚಿಸಿಕೊಳ್ಳಲು ಮತ್ತು ಪುನಶ್ಚೇತನಕ್ಕಾಗಿ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದಾರೆ. ಇದರ ಭಾಗವಾಗಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಜನರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಯಾತ್ರೆಯು ಸಾಮಾಜಿಕ ಆಂದೋಲನವಾಗಿದೆ. ಆದರೆ, ಮುಂಬರುವ ಹಾಥ್ ಸೇ ಹಾಥ್ ಜೋಡೋ ಕಾರ್ಯಕ್ರಮವು ರಾಜಕೀಯ ಅಭಿಯಾನವಾಗಲಿದೆ ಎಂದು ಕಾಂಗ್ರೆಸ್​ ಶುಕ್ರವಾರ ಪ್ರಕಟಿಸಿದೆ.

ಜ.30ಕ್ಕೆ ಭಾರತ್ ಜೋಡೋ ಯಾತ್ರೆ ಮುಕ್ತಾಯ: ಸೆಪ್ಟೆಂಬರ್​ 7ರಿಂದ ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್​ ಪಾದಯಾತ್ರೆ ನಡೆಸುತ್ತಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ಈ ಪಾದಯಾತ್ರೆ ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ತಲುಪಿ ಮುಕ್ತಾಯವಾಗಲಿದೆ. ಭಾರತ್ ಜೋಡೋ ಯಾತ್ರೆಯು ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧದ ಸಾಮಾಜಿಕ ಆಂದೋಲನವಾಗಿದೆ. ಆರ್ಥಿಕ ಅಸಮಾನತೆ ಮತ್ತು ಸಾಮಾಜಿಕ ಧ್ರುವೀಕರಣ ಹಾಗೂ ಅಧಿಕಾರದ ಕೇಂದ್ರೀಕರಣದ ವಿರುದ್ಧದ ಜನರಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಭಾರತ್ ಜೋಡೋ ಯಾತ್ರೆ ಉದ್ದೇಶವಾಗಿದೆ. ಇದು ರಾಜಕೀಯ ಲಾಭಕ್ಕಾಗಿ ಕೈಗೊಂಡ ಯಾತ್ರೆಯಲ್ಲ ಎಂದು ಕಾಂಗ್ರೆಸ್ ಒತ್ತಿ ಹೇಳುತ್ತಿದೆ.

26ರಿಂದ ಹಾಥ್ ಸೇ ಹಾಥ್ ಜೋಡೋ: ಕಾಂಗ್ರೆಸ್​ ಪಕ್ಷವು ಭಾರತ್ ಜೋಡೋ ಯಾತ್ರೆಯ ಉದ್ದೇಶ ರಾಜಕೀಯವಲ್ಲ ಎಂದು ಕಾಂಗ್ರೆಸ್​ ಹೇಳುತ್ತಿದ್ದರೂ, ಯಾತ್ರೆಯ ಉದ್ದಕ್ಕೂ ಜನರಿಂದ ನಿರೀಕ್ಷೆಗಿಂತ ಹೆಚ್ಚಿನ ಮತ್ತು ಉತ್ತಮ ಬೆಂಬಲ ಸಿಕ್ಕಿದೆ ಎಂದರೆ ತಪ್ಪಲ್ಲ. ಇದರ ಯಶಸ್ಸನ್ನು ಮನಗಂಡು ಹಾಥ್ ಸೇ ಹಾಥ್ ಜೋಡೋಗೆ ಕಾಂಗ್ರೆಸ್​ ಸಜ್ಜಾಗಿದೆ. ಜನವರಿ 26ರಿಂದಲೇ ಈ ಹಾಥ್ ಸೇ ಹಾಥ್ ಜೋಡೋ ಪ್ರಾರಂಭವಾಗಲಿದೆ. 2023ರಲ್ಲಿ ನಡೆಯಲಿರುವ ಒಂಬತ್ತು ವಿಧಾನಸಭಾ ಚುನಾವಣೆಗಳು ಮತ್ತು 2024ರ ಲೋಕಸಭಾ ಚುನಾವಣೆಗೆ ಜನ ಬೆಂಬಲವನ್ನು ಗಳಿಸುವುದೇ ಇದರ ಗುರಿಯಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿದೆ.

ಜನ ಸಂಪರ್ಕ ಗಳಿಸುವ ಧ್ಯೇಯ: 2022ರ ಮೇ ತಿಂಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್​ ಶಿಬಿರದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,500 ಕಿಮೀ ಭಾರತ್ ಜೋಡೋ ಯಾತ್ರೆ ನಡೆಸುವ ಯೋಜನೆ ರೂಪತಾಳಿತ್ತು. ಜೊತೆಗೆ 2024ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಪುನಶ್ಚೇತನಗೊಳಿಸುವ ಹಾಗೂ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಸಂಕಲ್ಪ ಮಾಡಿತ್ತು. ಈಗ ಭಾರತ್​ ಜೋಡೋ ಯಾತ್ರೆ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಜನ ಸಂಪರ್ಕ ಕಾರ್ಯಕ್ರಮದ ರಾಜಕೀಯ ಲಾಭವನ್ನು ಪಡೆಯಲು ಉದ್ದೇಶಿಸಿದೆ. ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಲು ಈ ಜಾತ್ರೆಯನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದೆ.

23 ಪಕ್ಷಗಳಿಗೆ ಖರ್ಗೆ ಆಹ್ವಾನ: ಜನವರಿ 30ರಂದು ಶ್ರೀನಗರದಲ್ಲಿ ನಡೆಯಲಿರುವ ಭಾರತ್​ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಕಾಂಗ್ರೆಸ್​ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 23 ಸಮಾನ ಮನಸ್ಕ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ. ಇದು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರದರ್ಶನವೂ ಆಗಲಿದೆ. ಈ ಬಗ್ಗೆ ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಮಾತನಾಡಿದ್ದು, ಜನವರಿ 30ರಂದು ವಿವಿಧ ಪಕ್ಷಗಳ ನಾಯಕರು ಬರಲು ಸಾಧ್ಯವಾಗದಿದ್ದರೂ, ಅವರ ಪ್ರತಿನಿಧಿಗಳು ಭಾಗವಹಿಸುವುದನ್ನು ಕಾಣಬಹುದು. ಇದೇ ಸಂದರ್ಭದಲ್ಲಿ 2024ರ ಚುನಾವಣೆಯ ಬಗ್ಗೆ ಚರ್ಚಿಸಲು ಸಭೆ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ ಮನೆ ತಲುಪಲು ಯತ್ನ: ಭಾರತ್ ಜೋಡೋ ಯಾತ್ರೆಯ ಲೋಗೋದಲ್ಲಿ ಕಾಂಗ್ರೆಸ್‌ನ ಚಿಹ್ನೆ ಅಧಿಕೃತವಾಗಿ ಬಳಕೆ ಮಾಡಿದ್ದರೂ, ಮುಂಬರುವ ಹಾಥ್ ಸೇ ಹಾಥ್ ಜೋಡೋ ಅಭಿಯಾನದ ಲಾಂಛನದಲ್ಲಿ ಪಕ್ಷದ ಚಿಹ್ನೆಯೇ ಪ್ರಮುಖವಾಗಿ ಇರುತ್ತದೆ. ನಾವು ಹಾಥ್ ಸೇ ಹಾಥ್ ಜೋಡೋ ಅಭಿಯಾನದ ಮೂಲಕ ಪ್ರತಿ ಮನೆಯನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ದೇಶಾದ್ಯಂತ 6.5 ಲಕ್ಷ ಗ್ರಾಮಗಳ ಸುಮಾರು 2.5 ಲಕ್ಷ ಗ್ರಾಮ ಪಂಚಾಯಿತಿಗಳನ್ನೂ ಸಂಪರ್ಕಿಸಲು ನಾವು ಪ್ರಯತ್ನಿಸುತ್ತೇವೆ. ನಮ್ಮ ಕಾರ್ಯಕರ್ತರು ಪ್ರತಿ ಮನೆಯನ್ನು ತಲುಪಲಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ: ಕೊರೆವ ಚಳಿಯಲ್ಲೂ ಕೇವಲ ಟೀ ಶರ್ಟ್​; ರಹಸ್ಯ ಬಿಚ್ಚಿಟ್ಟ ರಾಹುಲ್ ಗಾಂಧಿ!

ಇದನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ 2022ರ ಡಿ. 24ರಂದು ರಾಜ್ಯ ಘಟಕಗಳ ಅಧ್ಯಕ್ಷರಿಗೆ ಪತ್ರ ಬರೆದು, ಸಮಸ್ಯೆ ಆಧಾರಿತ ಕಿರು ಯಾತ್ರೆಗಳು ಮತ್ತು ವಿಶೇಷ ಮಹಿಳಾ ಮೆರವಣಿಗೆಗಳನ್ನು ರೂಪಿಸುವಂತೆ ಸೂಚಿಸಿದ್ದಾರೆ. ಜೊತೆಗೆ ರಾಹುಲ್​ ಗಾಂಧಿ ಅವರ ಸಂದೇಶದ ಪ್ರತಿಗಳನ್ನು ಜನರಿಗೆ ತಲುಪಿಸಿದ್ದೇವೆ. ಈ ದೇಶವನ್ನು ಕಟ್ಟಲು 137 ವರ್ಷಗಳಿಂದ ಕಾಂಗ್ರೆಸ್ ಅವಿರತವಾಗಿ ಶ್ರಮಿಸುತ್ತಿದೆ. ಹಾಥ್ ಸೇ ಹಾಥ್ ಜೋಡೋ ಅಭಿಯಾನವು ಏಕತೆ ಮತ್ತು ಸಹೋದರತ್ವದ ಸಂದೇಶವನ್ನು ಹರಡುವ ಪ್ರಯತ್ನ. ದೇಶವನ್ನು ಕಾಡುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಬೀದಿಯಿಂದ ಸಂಸತ್ತಿನವರೆಗೆ ಹೋರಾಡುವುದಾಗಿ ಮತದಾರರಿಗೆ ರಾಹುಲ್ ತಮ್ಮ ಸಂದೇಶ ಪತ್ರದಲ್ಲಿ ಭರವಸೆ ನೀಡಿದ್ದಾರೆ ಎಂದು ಜೈರಾಮ್ ರಮೇಶ್ ವಿವರಿಸಿದ್ದಾರೆ.

ಇದನ್ನೂ ಓದಿ: ಭಾರತ್​ ಜೋಡೋ ಬಳಿಕ ಹಾಥ್​ ಸೇ ಹಾಥ್​ ಜೋಡೋ ಅಭಿಯಾನ: ಪ್ರಿಯಾಂಕಾ ಗಾಂಧಿ ನೇತೃತ್ವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.