ETV Bharat / bharat

ಮಗು ಕೊಲೆ ಕೇಸ್: ಪ್ರಮುಖ ಪುರಾವೆಯಾಗಿ ಐಲೈನರ್ ನಿಂದ ಗೀಚಲಾದ ಟಿಪ್ಪಣಿ ಪತ್ತೆ

author img

By ETV Bharat Karnataka Team

Published : Jan 12, 2024, 10:45 PM IST

ಮಗು ಕೊಲೆ ಆರೋಪ ಎದುರಿಸುತ್ತಿರುವ ಸುಚನಾ ಸೇಠ್ ಅವರು ತಮ್ಮ ನಾಲ್ಕು ವರ್ಷದ ಮಗನ ಶವವನ್ನು ಸಾಗಿಸಲು ಬಳಸಿದ್ದರು ಎನ್ನಲಾಗಿರುವ ಬ್ಯಾಗ್​ನ ಒಳಗೆ ಟಿಶ್ಯೂ ಮೇಲೆ ಐಲೈನರ್ ನಿಂದ ಗೀಚಲಾದ ಟಿಪ್ಪಣಿಯೊಂದನ್ನು ಗೋವಾ ಪೊಲೀಸರು ಪತ್ತೆ ಮಾಡಿದ್ದಾರೆ.

bengaluru-ceo-unhappy-over-handing-sons-custody-eyeliner-scribbled-note-recovered-from-bag
ಮಗು ಕೊಲೆ ಕೇಸ್: ಐಲೈನರ್ ನಿಂದ ಗೀಚಲಾದ ಟಿಪ್ಪಣಿ ಪೊಲೀಸರಿಗೆ ಪತ್ತೆ

ಪಣಜಿ(ಗೋವಾ): ಬೆಂಗಳೂರು ಮೂಲದ ಕಂಪನಿಯೊಂದರ ಸಿಇಒ ಸುಚನಾ ಸೇಠ್ ಅವರು ತಮ್ಮ ನಾಲ್ಕು ವರ್ಷದ ಮಗನ ಶವ ಸಾಗಿಸಲು ಬಳಸಿದ್ದ ಬ್ಯಾಗ್​ನ ಒಳಗೆ ಟಿಶ್ಯೂ ಮೇಲೆ ಐಲೈನರ್ ನಿಂದ ಗೀಚಲಾದ ಟಿಪ್ಪಣಿಯೊಂದನ್ನು ಗೋವಾ ಪೊಲೀಸರು ಪತ್ತೆ ಮಾಡಿದ್ದಾರೆ. ಕೊಲೆಯ ಉದ್ದೇಶ ಮತ್ತು ಆರೋಪಿಯ ಮಾನಸಿಕ ಸ್ಥಿತಿಯನ್ನು ತಿಳಿಯಲು ಈಗ ದೊರೆತಿರುವ ಪುರಾವೆ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಟಿಪ್ಪಣಿಯಲ್ಲಿ ಆರೋಪಿ, ಮಗನನ್ನು, ತನ್ನ ವಿಚ್ಛೇದಿತ ಪತಿಯ ಸುಪರ್ದಿಗೆ ನೀಡಲು ಇಷ್ಟವಿಲ್ಲ. ತನ್ನ ಪತಿ ಹಿಂಸಾತ್ಮಕ ನಡವಳಿಕೆಯನ್ನು ಹೊಂದಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೇಠ್ ಮತ್ತು ಅವರ ಪತಿಯ ನಡುವಿನ ವಿಚ್ಛೇದನ ಪ್ರಕ್ರಿಯೆಗಳು 2022 ರಿಂದ ನಡೆಯುತ್ತಿದೆ.

ಬಾಲಕನ ಶವ ಇರಿಸಲಾಗಿದ್ದ ಬ್ಯಾಗ್‌ನಿಂದ ಚೂರುಚೂರಾದ ನೋಟುಗಳು ಪತ್ತೆಯಾಗಿವೆ. ಭಾನುವಾರದಂದು ತಮ್ಮ ಮಗನನ್ನು ಭೇಟಿಯಾಗಲು ಪತಿಗೆ ಅವಕಾಶ ನೀಡಿರುವ ನ್ಯಾಯಾಲಯದ ತೀರ್ಪಿನಿಂದ ಸುಚನಾ ಸೇಠ್​ ಅಸಮಾಧಾನಗೊಂಡಿದ್ದರು ಎಂಬುದು ತೋರುತ್ತದೆ ಎಂದು ಮೂಲಗಳು ತಿಳಿಸಿವೆ. ಬೆಳಗ್ಗೆ ಸೇಠ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆಕೆಯ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಲು ಈಗಾಗಲೇ ಮಾನಸಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ತನಿಖೆಯ ಭಾಗವಾಗಿ ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಸೇಠ್​ ಅವರು ಜನವರಿ 6 ರಂದು ಚೆಕ್ ಇನ್ ಮಾಡಿದ್ದ ಗೋವಾದ ಹೋಟೆಲ್ ಕೋಣೆಗೆ ಕರೆದೊಯ್ಯಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಈಗಾಗಲೇ ಕೋಣೆಯಿಂದ ಎರಡು ಖಾಲಿ ಕೆಮ್ಮಿನ ಸಿರಪ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಕೊಲೆಯಾಗುವ ಮೊದಲು ಬಾಲಕನಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಮ್ಮಿನ ಔಷಧವನ್ನು ನೀಡಲಾಗಿತ್ತು ಎಂದು ಶಂಕಿಸಲಾಗಿದೆ. ಬಾಲಕನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿನ ವೇಳೆ ಯಾವುದೇ ಒದ್ದಾಟದ ಲಕ್ಷಣಗಳು ಕಂಡುಬಂದಿಲ್ಲ. ಸೇಠ್, ಹೋಟೆಲ್ ಕೋಣೆಯಲ್ಲಿ​ ತಾನು ಎಚ್ಚರಗೊಂಡಾಗ ತನ್ನ ಮಗ ಸತ್ತಿರುವುದು ಕಂಡುಬಂದಿದೆ ಎಂದು ಪೊಲೀಸರಿಗೆ ಹೇಳಿದ್ದರು. ಸೋಮವಾರ ಮಗನ ಶವದೊಂದಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾಗ ಅವರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು.

ಜಕಾರ್ತ (ಇಂಡೋನೇಷ್ಯಾ)ದಲ್ಲಿರುವ ಮಗುವಿನ ತಂದೆ ವೆಂಕಟ್ ರಾಮನ್ ಮಂಗಳವಾರ ರಾತ್ರಿ ಚಿತ್ರದುರ್ಗದ ಹಿರಿಯೂರಿಗೆ ತಲುಪಿ ಮರಣೋತ್ತರ ಪರೀಕ್ಷೆಯ ನಂತರ ಮಗನ ಶವವನ್ನು ಪಡೆದುಕೊಂಡಿದ್ದರು. ಮಗುವಿನ ಮೃತದೇಹವನ್ನು ಅವರ ತಂದೆ ಬುಧವಾರ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ಕೂಡಾ ನೆರವೇರಿಸಿದ್ದರು.

ಇದನ್ನೂ ಓದಿ: ಯುವತಿ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ವಂಚನೆ, ಆರೋಪಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.