ನವದೆಹಲಿ : ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಅರ್ಧ ನಿಮಿಷವೂ ಕಾಯದೆ ವಾಹನಗಳು ಮುಂದೆ ಸಾಗುವ ಹಾಗೆ ತಡೆರಹಿತ ಟೋಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. "ತಡೆರಹಿತ ಟೋಲಿಂಗ್ ವ್ಯವಸ್ಥೆಗಾಗಿ ಪ್ರಯೋಗಗಳು ನಡೆಯುತ್ತಿವೆ ಮತ್ತು ಪ್ರಯೋಗಗಳು ಯಶಸ್ವಿಯಾದ ತಕ್ಷಣ ನಾವು ಅದನ್ನು ಜಾರಿಗೊಳಿಸಲಿದ್ದೇವೆ" ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ವಿ ಕೆ ಸಿಂಗ್ ಬುಧವಾರ ಹೇಳಿದ್ದಾರೆ.
ಹೊಸ ಟೋಲಿಂಗ್ ವ್ಯವಸ್ಥೆಯು ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ದೇಶದಲ್ಲಿ ಇನ್ನು ಮುಂದೆ ಕಿಲೋಮೀಟರ್ ಪ್ರಯಾಣದ ಆಧಾರದ ಮೇಲೆ ಟೋಲ್ ಪಾವತಿಸುವ ವ್ಯವಸ್ಥೆ ಬರಲಿದೆ ಎಂದು ಅವರು ಹೇಳಿದರು. ಫಾಸ್ಟ್ಯಾಗ್ಗಳ ಬಳಕೆಯು ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು 47 ಸೆಕೆಂಡ್ಗಳಿಗೆ ಕಡಿಮೆ ಮಾಡಿದೆ. ಆದರೆ ಸರ್ಕಾರವು ಅದನ್ನು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಗೆ ಇಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
ದೆಹಲಿ-ಮೀರತ್ ಎಕ್ಸ್ಪ್ರೆಸ್ವೇನಲ್ಲಿ ಈಗಾಗಲೇ ಈ ಯೋಜನೆಯ ಪ್ರಯೋಗ ನಡೆಯುತ್ತಿದೆ. ಅಲ್ಲಿ ಉಪಗ್ರಹ ಆಧಾರಿತ ಮತ್ತು ಕ್ಯಾಮೆರಾ ಆಧಾರಿತ ಕೆಲ ತಂತ್ರಜ್ಞಾನಗಳನ್ನು ಪರೀಕ್ಷಿಸಲಾಗುತ್ತಿದೆ. "ನೀವು ಹೆದ್ದಾರಿಗೆ ಪ್ರವೇಶಿಸಿದ ನಂತರ ನಿಮ್ಮ ವಾಹನದ ನೋಂದಣಿ ಫಲಕವನ್ನು ಕ್ಯಾಮೆರಾದಿಂದ ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ಡೇಟಾವನ್ನು ಒಟ್ಟುಗೂಡಿಸಿ ನೀವು ಪ್ರಯಾಣಿಸಿದ ಕಿಲೋಮೀಟರ್ಗಳಿಗೆ ಮಾತ್ರ ನಿಮಗೆ ಶುಲ್ಕ ವಿಧಿಸಲಾಗುತ್ತದೆ. ಉದಾಹರಣೆಗೆ ಪ್ರಸ್ತುತ ನೀವು 265 ರೂಪಾಯಿ ಟೋಲ್ ನೀಡುತ್ತಿದ್ದರೆ, ನೀವು ಪ್ರಯಾಣಿಸಿದ ಕಿಲೋಮೀಟರ್ಗಳಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ಟೋಲ್ ನಿಯಮವನ್ನು ಆಧರಿಸಿದೆ" ಎಂದು ಸಿಂಗ್ ಹೇಳಿದರು.
ಟೆಲಿಕಾಂ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಪ್ರಸ್ತುತ ಸರ್ಕಾರವು ಮಾಡಿದ ಉತ್ತಮ ಕೆಲಸದ ಪರಿಣಾಮವಾಗಿ ಇಂತಹ ಎಲ್ಲ ಪ್ರಗತಿ ನಡೆಯುತ್ತಿದೆ. ದೂರಸಂಪರ್ಕ ಕ್ಷೇತ್ರವು ಇತರ ಎಲ್ಲ ಕ್ಷೇತ್ರಗಳೊಂದಿಗೆ ಪರಸ್ಪರ ಸಂಪರ್ಕ ಹೊಂದಿದೆ. ಸುಧಾರಿತ ದೂರಸಂಪರ್ಕ ಜಾಲವು ಟೋಲ್ ಪ್ಲಾಜಾಗಳ ಡೇಟಾವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಟ್ರಕ್ ಡಿಕ್ಕಿಯಾಗಿ ಟೋಲ್ ಪ್ಲಾಜಾ ನೌಕರ ಸಾವು: ತಮಿಳುನಾಡಿನ ಮಧುರೈನ ಮಸ್ತಾನಪಟ್ಟಿ ಟೋಲ್ ಪ್ಲಾಜಾದಲ್ಲಿ ಭಾನುವಾರ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಟೋಲ್ ಪ್ಲಾಜಾ ನೌಕರನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮೃತ ಸತೀಶ್ ಕುಮಾರ್ ಮಧುರೈ ಜಿಲ್ಲೆಯ ಸಖಿಮಂಗಲಂ ನಿವಾಸಿಯಾಗಿದ್ದರು. ಮಾಹಿತಿಯ ಪ್ರಕಾರ, ಬ್ರೇಕ್ ವೈಫಲ್ಯದಿಂದ ಚಾಲಕ ತನ್ನ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ಟೋಲ್ ಬೂತ್ನಲ್ಲಿದ್ದ ಸತೀಶ್ ಕುಮಾರ್ ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಅವರಿಗೆ ಡಿಕ್ಕಿ ಹೊಡೆದ ಟ್ರಕ್, ಅವರನ್ನು ಕೆಲ ಮೀಟರ್ಗಳವರೆಗೆ ಎಳೆದುಕೊಂಡು ಹೋಗಿದೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಟ್ರಕ್ ಆಂಧ್ರಪ್ರದೇಶದ ಕಾಕಿನಾಡದಿಂದ ಕೇರಳಕ್ಕೆ 30 ಟನ್ ಅಕ್ಕಿಯನ್ನು ಸಾಗಿಸುತ್ತಿತ್ತು. ಇದನ್ನು ಗುಂಟೂರಿನ ಕೆ. ಬಾಲಕೃಷ್ಣನ್ (41) ಚಲಾಯಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಟೋಲ್ ಪ್ಲಾಜಾಗಳಲ್ಲಿ 100 ಮೀಟರ್ಗಿಂತ ಹೆಚ್ಚು ಕ್ಯೂ ಇದ್ದರೆ ತೆರಿಗೆ ಕಟ್ಟಬೇಕಿಲ್ಲ..!