ETV Bharat / bharat

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮುಳುಗಿಸಿದ 'ಮಹದೇವ್'; ಮೋದಿ ಅಸ್ತ್ರಕ್ಕೆ ಸಿಕ್ಕ ಗೆಲುವು!

author img

By ETV Bharat Karnataka Team

Published : Dec 3, 2023, 4:34 PM IST

Chhattisgarh Assembly Elections Results 2023: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್​ ಸೋಲಿಗೆ ಮಹದೇವ್ ಬೆಟ್ಟಿಂಗ್ ಆ್ಯಪ್‌ ಪ್ರಕರಣದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ವಿರುದ್ಧದ ಆರೋಪಗಳೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Assembly polls 2023: Mahadev sinks Congress, BJP crosses halfway mark in Chhattisgarh
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮುಳುಗಿಸಿದ 'ಮಹದೇವ್'; ಮೋದಿ ಅಸ್ತ್ರಕ್ಕೆ ಸಿಕ್ಕ ಗೆಲುವು!

ರಾಯ್‌ಪುರ (ಛತ್ತೀಸ್‌ಗಢ): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪೈಕಿ ಛತ್ತೀಸ್‌ಗಢದಲ್ಲಿ ಎಲ್ಲ ಭವಿಷ್ಯಗಳು ಸುಳ್ಳಾಗಿವೆ. ಚುನಾವಣೋತ್ತರ ಸಮೀಕ್ಷೆಗಳು ಆಡಳಿತಾರೂಢ ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರೆಯಲಿವೆ ಎಂದು ಹೇಳಿದ್ದವು. ಆದರೆ, ಕಾಂಗ್ರೆಸ್​ ಪಕ್ಷ ಸೋಲಿನ ಸುಳಿಗೆ ಸಿಲುಕಿದೆ. ಬಿಜೆಪಿ ಗೆಲುವಿನ ನಗೆ ಬೀರಿದೆ. ಮಹದೇವ್ ಬೆಟ್ಟಿಂಗ್ ಆ್ಯಪ್‌ ಪ್ರಕರಣದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ವಿರುದ್ಧ ಕೇಳಿಬಂದ ಆರೋಪಗಳೇ ರಾಜ್ಯದಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ: ಕೇಸರಿ ಪಾಳಯದ ಕೈ ಹಿಡಿದ 'ಲಾಡ್ಲಿ ಬೆಹ್ನಾ' ಯೋಜನೆ!

ಛತ್ತೀಸ್‌ಗಢದ 90 ಸದಸ್ಯ ಬಲದ ವಿಧಾನಸಭೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಮ್ಯಾಜಿಕ್​ ನಂಬರ್​ 46. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಕಾಂಗ್ರೆಸ್​ 35 ಸ್ಥಾನಕ್ಕೆ ಕುಸಿದಿದೆ. ಬಿಜೆಪಿ 53 ಸ್ಥಾನಗಳೊಂದಿಗೆ ಸರಳ ಬಹುಮತದತ್ತ ಮುನ್ನಡೆ ಸಾಧಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಸಿಎಂ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರ ಮಾಡಿದ್ದ ಅಭಿವೃದ್ಧಿ ಕಾರ್ಯಗಳು ಹಾಗೂ ಯೋಜನೆಗಳ ಮುಂದಿಟ್ಟುಕೊಂಡು ಕಾಂಗ್ರೆಸ್​ ಪ್ರಚಾರಕ್ಕೆ ಇಳಿದಿತ್ತು. ಇದರ ಆಧಾರದ ಮೇಲೆಯೇ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಕೈ ಪಾಳಯದ ನಾಯಕರು ಹೊಂದಿದ್ದರು.

ಮತ್ತೊಂದೆಡೆ, ಬಿಜೆಪಿ ಹಾಗೂ ಪ್ರಧಾನಿ ಮೋದಿ ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರ, ಉದ್ಯೋಗ ಹಗರಣಗಳನ್ನು ಪ್ರಸ್ತಾಪಿಸಿ ಸಿಎಂ ಬಘೇಲ್ ಅವರನ್ನು ನೇರ ಟಾರ್ಗೆಟ್​ ಮಾಡಿದ್ದರು. ಚುನಾವಣಾ ಹೊಸ್ತಿಲಲ್ಲೇ ಮಹದೇವ್ ಬೆಟ್ಟಿಂಗ್ ಆ್ಯಪ್​ ಪ್ರಕರಣಕ್ಕೆ ಸಂಬಂಧಿಸಿದ ಹವಾಲಾ ಹಣದ ಬಗ್ಗೆ ಮೋದಿ ಪ್ರಸ್ತಾಪಿಸಿದ್ದರು. ಕಾಂಗ್ರೆಸ್​ನವರು ಲೂಟಿ ಮಾಡಲು 'ಮಹದೇವ್' (ದೇವರು) ಹೆಸರನ್ನೂ ಬಿಡುತ್ತಿಲ್ಲ ಎಂದು ಭಾವನಾತ್ಮಕ ಆಸ್ತ್ರವನ್ನೂ ಪ್ರಧಾನಿ ಬಳಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ಗೆ 'ಕೈ' ಹಿಡಿಯದ 150ಕ್ಕೂ ಹೆಚ್ಚು ಸಭೆ, ರೋಡ್ ಶೋಗಳು: ಮೂರು ರಾಜ್ಯಗಳಲ್ಲಿ ಭಾರಿ ಹಿನ್ನಡೆ

ಮಹಾದೇವ್ ಬೆಟ್ಟಿಂಗ್ ಆ್ಯಪ್​ ಹಗರಣವು 508 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ತನಿಖಾ ಸಂಸ್ಥೆಗಳು ಕಂತೆಗಟ್ಟಲೆ ಹಣವನ್ನು ವಶಪಡಿಸಿಕೊಂಡಿವೆ. ಛತ್ತೀಸ್‌ಗಢ ಸಿಎಂ ಅವರ ಆಪ್ತ ಸಹಾಯಕ ಕೂಡ ಜೈಲಿನಲ್ಲಿದ್ದಾರೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಎಷ್ಟು ಹಣವನ್ನು ಪಡೆದಿದ್ದಾರೆ, ಪಕ್ಷದ ಹೈಕಮಾಂಡ್‌ಗೆ ಎಷ್ಟು ಹಣವನ್ನು ವರ್ಗಾಯಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಮೋದಿ ತಮ್ಮ ಚುನಾವಣಾ ಪ್ರಚಾರಗಳಲ್ಲಿ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತ್ಯುತ್ತರ ಕೊಟ್ಟಿದ್ದ ಸಿಎಂ ಬಘೇಲ್, ಛತ್ತೀಸ್‌ಗಢದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಟ್ಟಾಗಿ ಕಾಂಗ್ರೆಸ್‌ನೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತನಿಖಾ ಸಂಸ್ಥೆಗಳ ಸಹಾಯದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. 'ಮಹದೇವ್ ಆ್ಯಪ್' ಆರೋಪದ ತನಿಖೆಯ ಹೆಸರಿನಲ್ಲಿ ಜಾರಿ ನಿರ್ದೇಶನಾಲಯ ಮೊದಲು ನನ್ನ ಆತ್ಮೀಯರ ಮನೆಗಳ ಮೇಲೆ ದಾಳಿ ನಡೆಸಿ ಮಾನಹಾನಿ ಮಾಡಿತ್ತು. ಇದೀಗ ಅಪರಿಚಿತ ವ್ಯಕ್ತಿಯ ಹೇಳಿಕೆ ಆಧರಿಸಿ 508 ಕೋಟಿ ರೂ. ಬಗ್ಗೆ ಉಲ್ಲೇಖಿಸಿದೆ ಎಂದು ದೂರಿದ್ದರು. ಆದರೂ, ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್​ ಕೈ ಹಿಡಿಯುವ ಮನಸ್ಸು ಮಾಡಿಲ್ಲ.

ಇದನ್ನೂ ಓದಿ: ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ: ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಮೇಲೆ ಪರಿಣಾಮವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.