ETV Bharat / bharat

ಆರ್ಟಿಕಲ್ 35A ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ: ಸುಪ್ರೀಂ ಕೋರ್ಟ್​

author img

By ETV Bharat Karnataka Team

Published : Aug 28, 2023, 7:59 PM IST

Updated : Aug 28, 2023, 8:44 PM IST

ಆರ್ಟಿಕಲ್​ 35A ಜಾರಿಗೊಳಿಸುವುದರಿಂದ ಜಮ್ಮು ಮತ್ತು ಕಾಶ್ಮೀರದ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ.

article-35a-virtually-took-away-fundamental-rights-sc-during-article-370-hearing
ಆರ್ಟಿಕಲ್ 35A ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ: ಸುಪ್ರೀಂ ಕೋರ್ಟ್​

ನವದೆಹಲಿ :​ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಂದುವರೆಸಿದ ಸುಪ್ರೀಂ ಕೋರ್ಟ್​, ಆರ್ಟಿಕಲ್​ 35A ವಾಸ್ತವಿಕವಾಗಿ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಹೇಳಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆರ್ಟಿಕಲ್ 370 ಮತ್ತು 35A ವಿಧಿಗಳನ್ನು ರದ್ದುಗೊಳಿಸಿ 2019ರಲ್ಲಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ರದ್ಧತಿಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ಕೆಲವು ದಿನಗಳಿಂದ ಈ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ನೇತೃತ್ವದಲ್ಲಿ ನ್ಯಾ.ಎಸ್​.ಕೆ.ಕೌಲ್​, ನ್ಯಾ.ಸಂಜೀವ್​ ಖನ್ನಾ, ನ್ಯಾ.ಬಿ.ಆರ್.ಗವಾಯಿ ಹಾಗು ನ್ಯಾ.ಸೂರ್ಯಕಾಂತ್​ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ.

ಕೇಂದ್ರ ಸರ್ಕಾರದ ಪರ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ವಾದ ಮಂಡಿಸಿ, ನ್ಯಾಯಾಲಯದ ಮುಂದೆ ಆರ್ಟಿಕಲ್​ 35Aಯನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಚಾರಣೆ ಬಾಕಿ ಇದೆ ಎಂದು ಹೇಳಿದರು. ದಶಕಗಳಿಂದ ಜನರು ಇಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದರೂ, ಹೊರಗಿನ ವ್ಯಕ್ತಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾಗವನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಇಲ್ಲಿ ಯಾವುದೇ ಹೂಡಿಕೆಯೂ ಆಗುತ್ತಿರಲಿಲ್ಲ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​, ಆರ್ಟಿಕಲ್​ 35A ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಕ್ಷೇತ್ರಗಳಲ್ಲಿ ವಿನಾಯಿತಿ ನೀಡುತ್ತದೆ. ಇದು ರಾಜ್ಯ ಸರ್ಕಾರದ ಅಡಿಯಲ್ಲಿ ಪಡೆಯುವ ಉದ್ಯೋಗ, ಸ್ಥಿರ ಆಸ್ತಿಗಳ ಖರೀದಿ ಮತ್ತು ರಾಜ್ಯದಲ್ಲಿ ವಾಸಿಸುವ ಬಗ್ಗೆ ಪ್ರತ್ಯೇಕವಾಗಿ ವಿವರಿಸುತ್ತದೆ. ರಾಜ್ಯದಲ್ಲಿ 35A ಜಾರಿಗೊಳಿಸುವುದರಿಂದ ಆರ್ಟಿಕಲ್​ 19ನ ಮೂರು ಮೂಲಭೂತ ಹಕ್ಕುಗಳು ಮತ್ತು ಆರ್ಟಿಕಲ್​ 16 ಉಲ್ಲಂಘನೆಯಾಗುತ್ತದೆ. ಜನರ ವಾಸ್ತವಿಕ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳುವಂತಾಗುತ್ತದೆ ಎಂದು ಹೇಳಿದರು.

ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ವಾದ ಮುಂದುವರೆಸಿ, ಉದ್ಯೋಗ ನಮ್ಮ ಬದುಕುವ ಹಕ್ಕು ಎಂದು ಹೇಳಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು, 35A ಜಮ್ಮು ಕಾಶ್ಮೀರದ ಖಾಯಂ ನಿವಾಸಿಗಳಿಗೆ ವಿಶೇಷ ಹಕ್ಕುಗಳನ್ನು ನೀಡುತ್ತದೆ. ಹೊರಗಿನ ನಿವಾಸಿಗಳಿಗೆ ನಿರ್ಬಂಧ ವಿಧಿಸುತ್ತದೆ. ಅಲ್ಲದೆ ಆರ್ಟಿಕಲ್​ 16(1) ಎಲ್ಲರಿಗೂ ಸಮಾನ ಅವಕಾಶವನ್ನು ವಿವರಿಸುತ್ತದೆ ಎಂದರು.

ಕೇಂದ್ರ ಸರ್ಕಾರದ ರದ್ಧತಿ ನಿರ್ಧಾರವನ್ನು ಸಮರ್ಥಿಸಿಕೊಂಡ ಮೆಹ್ತಾ, ಈಗ ಭಾರತದ ಸಂವಿಧಾನವು ಜಮ್ಮು ಕಾಶ್ಮೀರಕ್ಕೆ ಅನ್ವಯಿಸುತ್ತಿದೆ. ಇದರಿಂದ ಜಮ್ಮು ಕಾಶ್ಮೀರದಲ್ಲಿ ಸಮಾನತೆ ಉಂಟಾಗಿದೆ. ಆರ್ಟಿಕಲ್​ 35 ತೆಗೆದ ನಂತರ ಅಲ್ಲಿನ ಜನರು ಮೂಲಭೂತ ಹಕ್ಕುಗಳನ್ನು ಪಡೆದರು. ಹೂಡಿಕೆಗಳು ಹೆಚ್ಚಾಗಿವೆ. ಪ್ರವಾಸೋದ್ಯಮ ಪ್ರಾರಂಭವಾಗಿದೆ. ಸಣ್ಣ ಉದ್ಯಮಗಳು ಶುರುವಾಗಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ ಸುಮಾರು 16 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಹೋಟೆಲ್​​ಗಳು ನಿರ್ಮಾಣವಾಗುತ್ತಿವೆ. ಜನರಿಗೆ ವಿಫುಲ ಉದ್ಯೋಗಾವಕಾಶಗಳು ದೊರೆಯುತ್ತಿದೆ ಎಂದು ಹೇಳಿದರು.

2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಆರ್ಟಿಕಲ್​ 370 ಮತ್ತು 35A ಅನ್ನು ತೆಗೆದು ಹಾಕುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿತು. ಬಳಿಕ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎಂದು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು. ಈ ಕ್ರಮವನ್ನು ಹಲವು ರಾಜಕೀಯ ಪಕ್ಷಗಳು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು.

ಇದನ್ನೂ ಓದಿ: ಆರ್ಟಿಕಲ್ 370 ರದ್ದತಿ ವಿರೋಧಿಸುವವರಿಗೆ ಜಮ್ಮು ಮತ್ತು ಕಾಶ್ಮೀರದ ಇತಿಹಾಸ ಮತ್ತು ಭೌಗೋಳಿಕತೆಯ ಅರಿವಿಲ್ಲ: ಗುಲಾಂ ನಬಿ ಆಜಾದ್

Last Updated :Aug 28, 2023, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.