ETV Bharat / bharat

ಖಲಿಸ್ತಾನ್​ ಬೆಂಬಲಿತ ಅಮೃತಪಾಲ್ ಸಿಂಗ್​ಗೆ​ ಪಾಕಿಸ್ತಾನದಿಂದ ಹಣದ ನೆರವು ಶಂಕೆ

author img

By

Published : Mar 1, 2023, 4:04 PM IST

ಖಲಿಸ್ತಾನ್​ ಪರ ನಾಯಕ ಅಮೃತಪಾಲ್ ಸಿಂಗ್​ನನ್ನು ಪಂಜಾಬ್‌ನಲ್ಲಿ ಮೂಲಭೂತವಾದ ಕೋಮುವಾದಿ ನಾಯಕನನ್ನಾಗಿ ಸ್ಥಾಪಿಸುವ ಯತ್ನ ನಡೆಯುತ್ತಿದೆ. ಪಾಕಿಸ್ತಾನದಿಂದ ಹಣದ ನೆರವು ಸಿಗುತ್ತಿದೆ ಎನ್ನಲಾಗಿದೆ.

amritpal-singh-and-khalistan-supporters-getting-funding-from-pakistan
ಖಲಿಸ್ತಾನ್​ ಬೆಂಬಲಿತ ಅಮೃತಪಾಲ್ ಸಿಂಗ್​ಗೆ​ ಪಾಕಿಸ್ತಾನದಿಂದ ಹಣದ ನೆರವು

ಚಂಡೀಗಢ (ಪಂಜಾಬ್​): ಪಂಜಾಬ್​ನ ಅಜ್ನಾಲಾದಲ್ಲಿ ಖಲಿಸ್ತಾನ್​ ಪರ ನಾಯಕ ಅಮೃತಪಾಲ್ ಸಿಂಗ್ ಬೆಂಬಲಿಗರು ಸೃಷ್ಟಿಸಿದ ಪ್ರಕ್ಷುಬ್ಧ ವಾತಾವರಣ ಬಗ್ಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಈ ಘಟನೆ ತಡೆಯುವಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸರು ವಿಫಲರಾಗಿದ್ದಾರೆ ಎಂಬ ಟೀಕೆ ಕೇಳಿ ಬರುತ್ತಿದೆ. ಅಮೃತಪಾಲ್ ಸಿಂಗ್​ ಮತ್ತು ಬೆಂಬಲಿಗರ ಕೃತ್ಯದ ಬಗ್ಗೆ ಖಂಡನೆ ವ್ಯಕ್ತವಾಗಿದೆ. ಇದರ ನಡುವೆ ಅಮೃತಪಾಲ್ ಮತ್ತು ಸಹಚರರು ಪಾಕಿಸ್ತಾನದಿಂದ ಹಣಕಾಸಿನ ನೆರವು ಪಡೆಯುತ್ತಿದ್ದಾರೆ ಎಂಬ ಹೇಳಲಾಗುತ್ತಿದೆ.

ಅಪಹರಣ ಪ್ರಕರಣದಲ್ಲಿ ಬಂಧಿತನಾದ ತನ್ನ ಆಪ್ತ ಸಹಾಯಕ ತೂಫಾನ್​ ಸಿಂಗ್​ ಬಿಡುಗಡೆಗಾಗಿ ಕಳೆದ ಗುರುವಾರ ಅಮೃತಪಾಲ್ ಸಿಂಗ್ ಪ್ರತಿಭಟನೆಗೆ ಕರೆ ನೀಡಿದ್ದ. ಈ ಓಗೊಟ್ಟು ಸಾವಿರಾರು ಜನರು ಶಸ್ತ್ರಸಜ್ಜಿತವಾಗಿ ಬೀದಿಗೆ ಇಳಿದಿದ್ದರು. ಅಲ್ಲದೇ, ಪೊಲೀಸ್​ ಠಾಣೆಗೆ ನುಗ್ಗಿ ಆತಂಕ ಸೃಷ್ಟಿಸಿದ್ದರು. ಗುರಾಣಿಯಾಗಿ ಬಳಸಿಕೊಂಡು ಪೊಲೀಸ್ ಠಾಣೆಯನ್ನು ವಶಪಡಿಸಿಕೊಂಡಿದ್ದರು. ಹೀಗಾಗಿ ಅಮೃತಪಾಲ್ ಸಿಂಗ್ ವಿಷಯದಲ್ಲಿ ಸರ್ಕಾರ ಮತ್ತು ಪೊಲೀಸರು ಅಸಹಾಯಕರಾಗಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ.

ವಿದೇಶಿ ಏಜೆನ್ಸಿಗಳ ಕೈವಾಡ?: ಇದರ ನಡುವೆ ಪಂಜಾಬ್‌ನಲ್ಲಿ ಅಮೃತಪಾಲ್‌ನನ್ನು ಮೂಲಭೂತವಾದ ಕೋಮುವಾದಿ ನಾಯಕನನ್ನಾಗಿ ಸ್ಥಾಪಿಸುವ ಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಅಮೃತಪಾಲ್ ಹಾಗೂ ಈತನ ಸಹಚರರು ಪಾಕಿಸ್ತಾನದಿಂದ ಹಣದ ನೆರವು ಪಡೆದಿದ್ದಾರೆ ಎಂದು ಪಂಜಾಬ್ ಸರ್ಕಾರ ಆರೋಪಿಸುತ್ತಿದೆ. ಪ್ರತಿಪಕ್ಷಗಳ ನಾಯಕರೂ ಕೂಡ ಅಮೃತಪಾಲ್​ ಹಿಂದೆ ವಿದೇಶಿ ಏಜೆನ್ಸಿಗಳ ಕೈವಾಡವಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಅಮೃತಪಾಲ್‌ಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನಿಂದ ಬೆಂಬಲ ಸಿಗುತ್ತಿದೆ ಎಂದೂ ಕೇಂದ್ರ ಭದ್ರತಾ ಏಜೆನ್ಸಿಗಳು ಕೂಡ ಶಂಕಿಸಿದೆ. ತೀವ್ರಗಾಮಿ, ಕೋಮುವಾದಿ ನಾಯಕನನ್ನಾಗಿ ಸ್ಥಾಪಿಸಲು ಐಎಸ್‌ಐ ಪ್ರಯತ್ನಿಸುತ್ತಿದೆ. ಅಮೃತಪಾಲ್ ಸುತ್ತಲೂ ಶಸ್ತ್ರಸಜ್ಜಿತ ಯುವಕರು ಕಾಣಿಸಿಕೊಳ್ಳುತ್ತಿದ್ದಾರೆ. ಆ ಯುವಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಅಮೃತಪಾಲ್ ಮೇಲೆ ಐಎಸ್‌ಐ ಏಜೆಂಟ್‌ಗಳು ನಿರಂತರವಾಗಿ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ಸಾವಿರ ಜನರಿದ್ದಾರೆ - ಸಿಎಂ: ಇದರೊಂದಿಗೆ ಪಂಜಾಬ್​ನ ಯುವಕರಲ್ಲಿ ಪ್ರತ್ಯೇಕತಾ ಭಾವನೆ ಕೆರಳಿಸುವ ಪ್ರಯತ್ನಗಳೂ ಜರುಗುತ್ತಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಇದೇ ಭಾನುವಾರ ಗುಜರಾತ್‌ನ ಭಾವನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಪಂಜಾಬ್​ ಸಿಎಂ ಭಗವಂತ್ ಮಾನ್, ಒಂದು ಸಾವಿರ ಜನರಿದ್ದು, ಇವರು ಉಗ್ರಗಾಮಿ ಸಂಘಟನೆಯಾದ 'ವಾರಿಸ್ ಪಂಜಾಬ್' ಅನ್ನು ರಚಿಸಿರುವ ಖಲಿಸ್ತಾನ್​ ಪರ ನಾಯಕ ಅಮೃತಪಾಲ್ ಸಿಂಗ್ ಅನುಯಾಯಿಗಳು ಆಗಿದ್ದಾರೆ. ಜೈಲಿನಲ್ಲಿರುವ ಆರೋಪಿಯನ್ನು ಬಿಡುಗಡೆ ಮಾಡಲು ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಈ ಸಾವಿರ ಜನರು ಪಂಜಾಬ್ ​ಅನ್ನು ಪ್ರತಿನಿಧಿಸುವುದಿಲ್ಲ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನದಲ್ಲಿ ಪಾಕಿಸ್ತಾನದಿಂದ ಹಣ ಪಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಕೂಡ ಅಮೃತಪಾಲ್ ಹಿಂದೆ ಯಾವುದೋ ಏಜೆನ್ಸಿ ಕೈವಾಡ ಇದೆ ಎಂದು ಹಲವು ಬಾರಿ ಹೇಳಿಕೆ ಕೊಟ್ಟಿದ್ದಾರೆ. ಇಂತಹ ಏಜೆನ್ಸಿ ಕಾರಣದಿಂದಾಗಿ ಅಮೃತಪಾಲ್ ಕಡಿಮೆ ಅವಧಿಯಲ್ಲಿ ದೊಡ್ಡ ಮುಖವಾಗಿ ಹೊರಹೊಮ್ಮಿದ್ದಾರೆ. ಈ ವಿಚಾರದಲ್ಲಿ ಪ್ರತಿಪಕ್ಷಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪಂಜಾಬ್‌ನಲ್ಲಿ ಖಲಿಸ್ತಾನ್ ಘೋಷಣೆಯ ಪುನರುತ್ಥಾನ ಅನಾವರಣ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.