ಕೋವಿಡ್ ಮಾರ್ಗಸೂಚಿ ಅನುಸರಿಸಿ ಗಣೇಶ ಹಬ್ಬ ಆಚರಣೆ.. ಯಾವ್ಯಾವ ರಾಜ್ಯಗಳಲ್ಲಿ ಏನೆಲ್ಲಾ ಕ್ರಮ?

author img

By

Published : Sep 10, 2021, 8:12 AM IST

ಗಣೇಶ ಹಬ್ಬ

ಕೋವಿಡ್​ ಹಿನ್ನೆಲೆ ಮಾರ್ಗಸೂಚಿಗಳನ್ನು ಅನುಸರಿಸಿ ಗಣೇಶ ಹಬ್ಬ ಆಚರಣೆ ಮಾಡಲು ಆಯಾಯ ರಾಜ್ಯ ಸರ್ಕಾರಗಳು ಅನುಮತಿ ನೀಡಿವೆ. ಯಾವ್ಯಾವ ರಾಜ್ಯಗಳಲ್ಲಿ ಏನೆಲ್ಲಾ ಕ್ರಮಗಳಿವೆ ಅನ್ನೋದ್ರ ವರದಿ ಇದು.

ನವದೆಹಲಿ: ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮಕ್ಕೆ ಕೋವಿಡ್ ಬ್ರೇಕ್ ಹಾಕಿದೆ. ಕೋವಿಡ್ ನಿಯಮಗಳನ್ನು ಅನುಸರಿಸಿ ಸಂಭ್ರಮಾಚರಣೆ ಮಾಡುವಂತೆ ಆಯಾಯ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಿವೆ. ಈ ಹಿನ್ನೆಲೆ ಕಳೆದ ವರ್ಷದಂತೆ ಈ ವರ್ಷವೂ ಸರಳವಾಗಿ ಗಣೇಶೋತ್ಸವ ನಡೆಯಲಿದೆ.

ಸಿದ್ದಿವಿನಾಯಕ ಗಣಪತಿ ದೇಗುಲದಲ್ಲಿ ಬೆಳಗ್ಗೆಯೇ ವಿಶೇಷ ಪೂಜೆ

ಮುಂಬೈನ ಪ್ರತಿಷ್ಠಿತ ಸಿದ್ಧಿ ವಿನಾಯಕ ಗಣಪತಿ ದೇಗುಲದಲ್ಲಿ ವಿನಾಯಕ ಚತುರ್ಥಿ ನಿಮಿತ್ತ ಬೆಳಗ್ಗೆಯೇ ವಿಶೇಷ ಪೂಜೆ ನೆರವೇರಿತು. ವಿಶೇಷ ಪೂಜೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಮುಂಬೈನಲ್ಲಿ 144 ಸೆಕ್ಷನ್ ಜಾರಿ

ಮುಂಬೈನಲ್ಲಿ ಗಣೇಶ ಚತುರ್ಥಿಯು ಬಹುದೊಡ್ಡ ಹಬ್ಬ. ರಾಜ್ಯದಲ್ಲಿ ಕೋವಿಡ್​​​ ಪ್ರಕರಣಗಳು ಹೆಚ್ಚಾಗಿರುವುದರಿಂದ ಸಾರ್ವಜನಿಕ ಆಚರಣೆಗಳನ್ನು ಮಾಡದಂತೆ ಪೊಲೀಸರು ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 10(ಇಂದಿನಿಂದ) ರಿಂದ 19 ರವರೆಗೆ ನಗರದಲ್ಲಿ 144 ಸೆಕ್ಷನ್​ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಗಣಪತಿಯ ಯಾವುದೇ ಮೆರವಣಿಗೆಗೆ ಅನುಮತಿ ನೀಡಿಲ್ಲ. ಜತೆಗೆ ಐದು ಜನರಿಗಿಂತ ಹೆಚ್ಚು ಜನರು ಒಂದು ಸ್ಥಳದಲ್ಲಿ ಸೇರುವಂತಿಲ್ಲ ಎಂದು ಮುಂಬೈ ಆಯುಕ್ತರ ಕಚೇರಿ ತಿಳಿಸಿದೆ.

ಇದು ನಮಗೆ ಪ್ರಮುಖ ಹಬ್ಬವಾಗಿದೆ. ಆದರೂ, ಕಳೆದ ವರ್ಷ ನಾವು ದೇವಸ್ಥಾನಗಳಿಗೆ ಹೋಗದೇ, ಆನ್​​ಲೈನ್​ನಲ್ಲಿ ಗಣೇಶನ ದರ್ಶನ ಪಡೆಯಬೇಕಿತ್ತು. ಆದ್ದರಿಂದ ಈ ಬಾರಿ ಹಬ್ಬ ಆಚರಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಪುಣೆಯಲ್ಲಿ ಗಣೇಶ ವಿಸರ್ಜನೆಗೆ ವ್ಯಾನ್​ಗಳನ್ನು ಬಳಸಬಹುದು ಎಂದು ನಗರ ಪೊಲೀಸ್ ಜಂಟಿ ಆಯುಕ್ತ ರವೀಂದ್ರ ಶಿಶ್ವೆ ಹೇಳಿದ್ದಾರೆ.

ಆಂಧ್ರ-ತೆಲಂಗಾಣದಲ್ಲೂ ಅದ್ಧೂರಿ ಆಚರಣೆಗೆ ಬ್ರೇಕ್

ಆಂಧ್ರದಲ್ಲಿ ಕೋವಿಡ್ ತಡೆಗಟ್ಟುವಿಕೆ ದೃಷ್ಟಿಯಿಂದ ಗಣೇಶ ಮೆರವಣಿಗೆಗೆ ಅದ್ಧೂರಿ ಆಚರಣೆಗೆ ಜಗನ್ ಸರ್ಕಾರ ಅನುಮತಿ ನೀಡಿಲ್ಲ.

ಇನ್ನೂ ತೆಲಂಗಾಣದ ಹೈದರಾಬಾದ್​ನಲ್ಲಿ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆಯಿದೆ. ತೆಲಂಗಾಣ ಹೈಕೋರ್ಟ್ ಹೈದರಾಬಾದ್​​ನ ಹುಸೇನ್​ಸಾಗರ ಕೆರೆಯಲ್ಲಿ POP ಯಿಂದ ಮಾಡಿದ ಗಣೇಶನ ವಿಗ್ರಹಗಳನ್ನು ವಿಸರ್ಜಿಸಲು ಅನುಮತಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪರಿಸರ ಸ್ನೇಹಿ ಗಣಪತಿ ವಿಗ್ರಹಗಳ ವಿಸರ್ಜನೆಗಾಗಿ ವಿಶೇಷ ರಬ್ಬರ್ ಅಣೆಕಟ್ಟುಗಳನ್ನು ನಿರ್ಮಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಆದೇಶ ಬಂದ ನಂತರ, ಹೈದರಾಬಾದ್‌ನ ಮಾರುಕಟ್ಟೆಗಳು ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.

ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಗಣೇಶೋತ್ಸವ ಆಚರಿಸಲು ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆ ನಿನ್ನೆ ಬಿಬಿಎಂಪಿ ಪಾಲಿಕೆ ಎದುರು ಗಣೇಶ ಉತ್ಸವ ಸೇವಾ ಸಮಿತಿ ಪ್ರತಿಭಟನೆ ನಡೆಸಿತು.

ಬೆಂಕಿ ಕಡ್ಡಿಯಲ್ಲಿ ಮೂಡಿದ ಗಣಪ

ಒಡಿಶಾದಲ್ಲಿ ಪುರಿ ಮೂಲದ ಕಲಾವಿದ ಸಾಶ್ವತ್ ಸಾಹು ಬೆಂಕಿ ಕಡ್ಡಿಗಳನ್ನು ಬಳಸಿ ಗಣೇಶ ಮೂರ್ತಿಯನ್ನು ಮಾಡಿದ್ದಾರೆ. 23 ಇಂಚು ಉದ್ದ ಮತ್ತು 22 ಇಂಚು ಅಗಲದ ಮೂರ್ತಿಯನ್ನು 5,621 ಬೆಂಕಿಕಡ್ಡಿಗಳನ್ನು ಬಳಸಿ ತಯಾರಿಸಲಾಗಿದೆ. ಈ ವಿಗ್ರಹ ತಯಾರಿಸಲು 8 ದಿನಗಳು ಬೇಕಾಯಿತು ಎಂದು ಸಾಹು ಹೇಳಿದ್ದಾರೆ.

ದೆಹಲಿ - ಉತ್ತರಪ್ರದೇಶಗಳಲ್ಲೂ ಸರಳವಾಗಿ ಆಚರಣೆ

ಗುರುವಾರ ದೆಹಲಿಯ ಮಾರುಕಟ್ಟೆಗಳಲ್ಲಿ ಗಣೇಶ ವಿಗ್ರಹ ಖರೀದಿಸಲು ಜನರು ಮುಗಿಬಿದ್ದಿದ್ದರು. ಕೋವಿಡ್​ ಮಾರ್ಗಸೂಚಿ ಅನುಸರಿಸಿ ಹಬ್ಬ ಆಚರಿಸುವಂತೆ ಇಲ್ಲಿನ ಆಡಳಿತ ನಿರ್ದೇಶಿಸಿದೆ. ಜನರು ತಮ್ಮ ಮನೆಗಳಲ್ಲಿ ಮಾತ್ರ ಗಣೇಶ ಚತುರ್ಥಿ ಆಚರಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ವಿಗ್ರ ಪ್ರತಿಷ್ಠಾಪನೆಗೆ ಅವಕಾಶವಿಲ್ಲ ಎಂದು ಉತ್ತರಪ್ರದೇಶ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: ಗೌರಿ ಗಣೇಶ ಹಬ್ಬದ ಸಂಭ್ರಮ: ಆರೋಗ್ಯಕರ, ರುಚಿಕರವಾದ ಡ್ರೈ ಫ್ರೂಟ್ಸ್ ಮೋದಕ ಮಾಡಿ ಗಣಪನಿಗೆ ಅರ್ಪಿಸಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.