ETV Bharat / bharat

ವಯನಾಡ್‌ನಿಂದಲ್ಲ, ಹೈದರಾಬಾದ್‌ನಿಂದ ನನ್ನೆದುರು ಸ್ಪರ್ಧಿಸಿ: ರಾಹುಲ್ ಗಾಂಧಿಗೆ ಓವೈಸಿ ಸವಾಲು

author img

By ETV Bharat Karnataka Team

Published : Sep 25, 2023, 8:11 AM IST

Updated : Sep 25, 2023, 10:54 AM IST

AIMIM chief Asaduddin Owaisi: ತೆಲಂಗಾಣ ರಾಜ್ಯದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಅಂತೆಯೇ ಲೋಕಸಭಾ ಚುನಾವಣೆಗೂ ರಾಜ್ಯ ಸಿದ್ಧವಾಗುತ್ತಿದೆ. ಈ ನಡುವೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.

AIMIM chief Asaduddin Owaisi
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

ಹೈದರಾಬಾದ್ (ತೆಲಂಗಾಣ): ''ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನೀವು ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸಬೇಕೇ ಹೊರತು ವಯನಾಡ್​ ಕ್ಷೇತ್ರದಿಂದ ಅಲ್ಲ'' ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲೆಸೆದರು.

  • #WATCH | Hyderabad, Telangana: AIMIM chief Asaduddin Owaisi says "I am challenging your leader (Rahul Gandhi) to contest elections from Hyderabad and not Wayanad. You keep giving big statements, come to the ground and fight against me. People from Congress will say a lot of… pic.twitter.com/TXANRLWtjJ

    — ANI (@ANI) September 24, 2023 " class="align-text-top noRightClick twitterSection" data=" ">

ತಮ್ಮ ಲೋಕಸಭಾ ಕ್ಷೇತ್ರ ಹೈದರಾಬಾದ್‌ನಲ್ಲಿ ಭಾನುವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ''ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಕಾಂಗ್ರೆಸ್‌ ಆಡಳಿತವಿದ್ದ ಸಂದರ್ಭದಲ್ಲಿ ನಡೆಯಿತು'' ಎಂದರು. ಮುಂದುವರೆದು ಮಾತನಾಡುತ್ತಾ, ''ನಾನು ನಿಮ್ಮ ನಾಯಕನಿಗೆ (ರಾಹುಲ್ ಗಾಂಧಿ) ಹೈದರಾಬಾದ್‌ನಿಂದ ಚುನಾವಣೆಗೆ ಸ್ಪರ್ಧಿಸುವಂತೆ ತಿಳಿಸುತ್ತೇನೆ. ನಾನು ಇದಕ್ಕೆ ಸಿದ್ಧ" ಎಂದು ಹೇಳಿದರು.

ತೆಲಂಗಾಣದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿಗಾಗಿ ಎರಡೂ ಪಕ್ಷಗಳು ಹವಣಿಸುತ್ತಿದ್ದು, ಕಾಂಗ್ರೆಸ್ ಮತ್ತು ಎಐಎಂಐಎಂ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ.

'ತ್ರಿಕೂಟ'ದ ವಿರುದ್ಧ ಹೋರಾಟ- ರಾಹುಲ್ ಗಾಂಧಿ: ಈ ತಿಂಗಳ ಆರಂಭದಲ್ಲಿ ತೆಲಂಗಾಣದ ತುಕ್ಕುಗುಡದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ''ತೆಲಂಗಾಣದಲ್ಲಿ ಬಿಜೆಪಿ, ಬಿಆರ್‌ಎಸ್ ಮತ್ತು ಎಐಎಂಐಎಂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ಆದರೆ, ನಮ್ಮ ಪಕ್ಷವು ಈ ತ್ರಿಕೂಟದ ವಿರುದ್ಧ ಹೋರಾಡುತ್ತಿದೆ'' ಎಂದಿದ್ದರು.

''ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಬಿಆರ್‌ಎಸ್ ವಿರುದ್ಧವಷ್ಟೇ ಹೋರಾಡುತ್ತಿಲ್ಲ, ಬಿಜೆಪಿ ಮತ್ತು ಎಐಎಂಐಎಂ ಜೊತೆಗೂ ಹೋರಾಡುತ್ತಿದೆ. ಆ ಪಕ್ಷಗಳು ತಮ್ಮನ್ನು ಬೇರೆ ಬೇರೆ ಪಕ್ಷಗಳೆಂದು ಕರೆದುಕೊಳ್ಳುತ್ತಿವೆ. ಆದರೆ, ಅವುಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ'' ಎಂದು ರಾಹುಲ್ ಟೀಕಿಸಿದ್ದರು.

''ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಯಾವುದೇ ಸಿಬಿಐ, ಇಡಿ ಪ್ರಕರಣಗಳಿಲ್ಲ. ಏಕೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ 'ಸ್ವಂತ ಜನರು' ಎಂದು ಪರಿಗಣಿಸಿದ್ದಾರೆ'' ಎಂದು ಅವರು ವ್ಯಂಗ್ಯವಾಡಿದ್ದರು.

''ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಲಾಲು ಯಾದವ್ ಪಕ್ಷದ (ಆರ್‌ಜೆಡಿ) ನಾಯಕರು ಸಂಸತ್ತಿನಲ್ಲಿ ಮುಸ್ಲಿಮರ ಹೆಸರನ್ನು ತೆಗೆದುಕೊಳ್ಳಲು ಹೆದರುತ್ತಿದ್ದಾರೆ. ನಾನು ಎದ್ದು ನಿಂತು ಮುಸ್ಲಿಂ ಮತ್ತು ಒಬಿಸಿ ಮಹಿಳೆಯರಿಗೂ ಮೀಸಲಾತಿ ಸಿಗಬೇಕು ಎಂದು ಹೇಳಿದೆ. ನಾನು ಮಹಿಳೆಯರ ವಿರುದ್ಧ ಇದ್ದೇನೆ ಎಂದು ಅವರು ಹೇಳುತ್ತಲೇ ಇದ್ದಾರೆ. ಆದರೆ, ನೀವು ಮಹಿಳೆಯರು, ಒಬಿಸಿಗಳು ಮತ್ತು ಮುಸ್ಲಿಮರ ವಿರುದ್ಧ ಇದ್ದೀರಿ ಎಂಬುದು ಸತ್ಯ'' ಎಂದು ಓವೈಸಿ ದೂರಿದರು.

''ನಮ್ಮ ಇಬ್ಬರು ಸಂಸದರು ಮಹಿಳಾ ಮೀಸಲಾತಿ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇರುತ್ತಾರೆ. 450 ಸಂಸದರು ವಿಧೇಯಕಕ್ಕೆ ಮತ ಹಾಕಿದ್ದು, 2 ಮಂದಿ ಮಾತ್ರ ವಿರುದ್ಧವಾಗಿ ಮತ ಹಾಕಿದ್ದಾರೆ. ನಾನು ಪ್ರಧಾನಿ ಮೋದಿ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ'' ಎಂದರು.

ತೆಲಂಗಾಣಕ್ಕೆ 6 ಗ್ಯಾರಂಟಿಗಳ ಘೋಷಣೆ: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಎಲ್ಲಾ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಆಡಳಿತಾರೂಢ ಬಿಆರ್‌ಎಸ್ ಈಗಾಗಲೇ ಎಲ್ಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಕಾಂಗ್ರೆಸ್ ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಅಧಿಕಾರಕ್ಕೆ ಬಂದರೆ ಎಲ್ಲ ಭರವಸೆಗಳನ್ನೂ ಈಡೇರಿಸಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ: ಸದನದಲ್ಲಿ ಮಾತಿನ ದಾಳಿ ನಂತರ ಸದನದ ಹೊರಗೂ ನನ್ನ ಮೇಲೆ ದಾಳಿ ಪ್ರಯತ್ನ: ಬಿಎಸ್​ಪಿ ಸಂಸದ ಡ್ಯಾನಿಶ್ ಅಲಿ

Last Updated : Sep 25, 2023, 10:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.