'ಕೈ' ಬಿಟ್ಟ ಬೆನ್ನಲ್ಲೇ ಸುದ್ದಿಗೋಷ್ಠಿ​: ಕಾಂಗ್ರೆಸ್ ಟೀಕಿಸಿ, ಬಿಜೆಪಿ ಹೊಗಳಿದ ಹಾರ್ದಿಕ್ ಪಟೇಲ್​

author img

By

Published : May 19, 2022, 6:02 PM IST

Hardik Patel press meet
Hardik Patel press meet ()

ಗುಜರಾತ್​​ ಪಾಟಿದಾರ್​​ ಪ್ರಭಾವಿ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸದಸ್ಯತ್ವಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದು, ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದರು.

ಅಹಮದಾಬಾದ್​(ಗುಜರಾತ್​): ಕೆಳದ ಕೆಲ ತಿಂಗಳಿಂದಲೂ ಕಾಂಗ್ರೆಸ್ ನಾಯಕತ್ವದ ಬಗ್ಗೆ ಟೀಕೆ ವ್ಯಕ್ತಪಡಿಸುತ್ತಿದ್ದ ಗುಜರಾತ್​ನ ಹಾರ್ದಿಕ್ ಪಟೇಲ್​ ಕೊನೆಗೂ ಪಕ್ಷಕ್ಕೆ ಗುಡ್​​ಬೈ ಹೇಳಿ ಹೊರ ಬಂದಿದ್ದಾರೆ. ಇದರ ಬೆನ್ನಲ್ಲೇ ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಿ ಅನೇಕ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ವೇಳೆ ಭಾರತೀಯ ಜನತಾ ಪಾರ್ಟಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕೇಂದ್ರದ ನಿರ್ಧಾರಗಳನ್ನು ಸ್ವಾಗತಿಸಿದ ಹಾರ್ದಿಕ್​ ಪಟೇಲ್​

​ ದೇಶದಲ್ಲಿ ನಡೆಯುತ್ತಿರುವ ಹಿಂದೂ ಪರ ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷ ದೂರ ಇರುವುದು ಪಕ್ಷಕ್ಕೆ ಹಾನಿಯನ್ನುಂಟು ಮಾಡಿದ್ದು, ಇದಕ್ಕೆ ಜ್ಞಾನವಾಪಿ ಮಸೀದಿ ವಿವಾದ ಪ್ರಮುಖ ಉದಾಹರಣೆ ಎಂದು ತಿಳಿಸಿದರು. ದೇಶದಲ್ಲಿ ಅನೇಕರು ಮಹಾದೇವನ ಭಕ್ತರಿದ್ದಾರೆ. ಮಸೀದಿ ಅಥವಾ ಇತರ ಸ್ಥಳಗಳಲ್ಲಿ ಶಿವಲಿಂಗ ಪತ್ತೆಯಾದಾಗ ನಮ್ಮ ನಂಬಿಕೆಗಳು ಮತ್ತಷ್ಟು ಬಲಗೊಳ್ಳುತ್ತವೆ. ಇದನ್ನ ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಆದರೆ, ಕಾಂಗ್ರೆಸ್​ ನಾಯಕರು ಅಂತಹ ನಿರ್ಧಾರ ಅಥವಾ ಹೇಳಿಕೆಗಳಿಂದ ದೂರ ಸರಿಯತ್ತಾರೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಬಿಜೆಪಿ ಶ್ಲಾಘಿಸಿರುವ ಹಾರ್ದಿಕ್ ಪಟೇಲ್, ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧು ನಿರ್ಧಾರಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು. ಗುಜರಾತ್​ನಲ್ಲಿ ಕಾಂಗ್ರೆಸ್ ನಾಯಕರು ಇಲ್ಲಿನ ಜನರ ವಿರುದ್ಧ ಪಕ್ಷಪಾತ ಮಾಡ್ತಿದ್ದು, ಇದು ಪಕ್ಷದಲ್ಲಿ ದೊಡ್ಡ ಮಟ್ಟದ ಸಮಸ್ಯೆ ಉದ್ಭವವಾಗುವಂತೆ ಮಾಡಿದೆ ಎಂದರು.

ಕಾಂಗ್ರೆಸ್​ ಬರೀ ಪ್ರತಿಭಟನೆ ಮಾಡುತ್ತದೆ: ಸುಮಾರು 3 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ಪ್ರತಿಭಟನೆಯ ರಾಜಕೀಯಕ್ಕೆ ಇಳಿದಿರುವುದನ್ನು ನಾನು ಕಂಡುಕೊಂಡಿದ್ದೇನೆ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವಾಗಲಿ, ಸಿಎಎ-ಎನ್‌ಆರ್‌ಸಿ ಸಮಸ್ಯೆಯಾಗಲಿ, ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಲಿ ಅಥವಾ ಜಿಎಸ್‌ಟಿ ಜಾರಿಯಾಗಲಿ, ದೇಶವು ದೀರ್ಘಕಾಲದಿಂದ ಪರಿಹಾರವನ್ನು ಬಯಸಿದೆ ಮತ್ತು ಕಾಂಗ್ರೆಸ್ ಪಕ್ಷವು ಕೇವಲ ಅಡ್ಡಿಯುಂಟು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಗುಜರಾತ್‌ ಕಾಂಗ್ರೆಸ್ ಆಂತರಿಕ ಕಲಹ: ರಾಜೀನಾಮೆ ನೀಡಿದ ಹಾರ್ದಿಕ್​ ಪಟೇಲ್‌

ಇದೇ ವೇಳೆ ಮಾತು ಮುಂದುವರೆಸಿದ ಹಾರ್ದಿಕ್ ಪಟೇಲ್​, ನಾನು ಬಿಜೆಪಿ ಅಥವಾ ಎಎಪಿ ಸೇರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜನರು ಭಯಸುವ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಮೂರು ವರ್ಷ ಸಮಯ ವ್ಯರ್ಥ ಮಾಡಿದ್ದೇನೆ ಎಂದರು. 2017ರ ಗುಜರಾತ್​ ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಪಾಟಿದಾರ್​ ಸಮುದಾಯದ ಮುಖಂಡನಾಗಿ ಹೊರಹೊಮ್ಮಿದ್ದ ಹಾರ್ದಿಕ್ ಪಟೇಲ್​, 2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.