ಮೆಡ್ಚಲ್: ಹೈದರಾಬಾದ್ ಸೈಬರ್ ಕ್ರೈಂ ಬ್ರಾಂಚ್ ಎಸಿಪಿ ಕುಟುಂಬದ ಮೂವರು ಸದಸ್ಯರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆ ಕಿಸರ ತಾಲೂಕಿನ ಯಾದ್ಗಾರ್ಪಲ್ಲಿಯ ಔಟರ್ ರಿಂಗ್ ರೋಡ್ನಲ್ಲಿ ನಡೆದಿದೆ.
ಹೈದರಾಬಾದ್ ಸೈಬರ್ ಕ್ರೈಂ ಬ್ರಾಂಚ್ ಎಸಿಪಿ ಕೆವಿಯಂ ಪ್ರಸಾದ್ ಕುಟುಂಬಸ್ಥರು ಪ್ರಕಾಶಂ ಜಿಲ್ಲೆಯ ಚಿರಾಲದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಮದುವೆ ಕಾರ್ಯಕ್ರಮಕ್ಕೆ ಹಾಜರಾಗಿ ವಾಪಸ್ಸಾಗುತ್ತಿದ್ದಾಗ ಎಸಿಪಿ ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಯಾದ್ಗಾರ್ಪಲ್ಲಿಯ ಔಟರ್ ರಿಂಗ್ ರೋಡ್ ಬಳಿಯ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಡಿವೈಡರ್ಗೆ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜಾಗಿದ್ದು, ಎಸಿಪಿ ಪ್ರಸಾದ್ ಪತ್ನಿ ಮತ್ತು ಸಹೋದರ ಬಾಲಕೃಷ್ಣ ಮಗನಾದ ಭಾಸ್ಕರ್ ಮತ್ತು ಆತನ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಎಸಿಪಿ ಸಹೋದರ ಬಾಲಕೃಷ್ಣಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದಾಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.