ನವದೆಹಲಿ: ಟ್ರ್ಯಾಕ್ಟರ್ ಪರೇಡ್ ವೇಳೆ ರೈತರು ಹಾಗೂ ಪೊಲೀಸರು ಮಧ್ಯೆ ಉಂಟಾದ ಘರ್ಷಣೆಯಲ್ಲಿ 24 ವರ್ಷದ ಯುವಕನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಎರಡು ಮೂರು ದಿನಗಳಿಂದ ರಾಜಧಾನಿಯ ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಾಹಿಬ್ ಸಿಂಗ್ ನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ನಿನ್ನೆ ತಡರಾತ್ರಿ ಸಾಹಿಬ್ ಸ್ವಗ್ರಾಮ ರಾಂಪುರಕ್ಕೆ ಮೃತದೇಹ ರವಾನಿಸಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ನಿರ್ಧರಿಸಿದ್ದು, ಗ್ರಾಮದಲ್ಲಿ ಖಾಕಿ ಸರ್ಪಗಾವಲನ್ನು ನಿಯೋಜಿಸಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಾಹಿಬ್ ಅಜ್ಜ ಹರ್ದೀಪ್ ಸಿಂಗ್ ದಿಬ್ಬಾ, ನನ್ನ ಮೊಮ್ಮಗ ಟ್ರ್ಯಾಕ್ಟರ್ನಿಂದ ಬಿದ್ದು ಮೃತಪಟ್ಟಿಲ್ಲ. ಒಂದು ವೇಳೆ ಪೊಲೀಸರು ಹೇಳುವಂತೆ ಟ್ರ್ಯಾಕ್ಟರ್ನಿಂದ ಬಿದ್ದು ಗಾಯಗೊಂಡು ಮೃತಪಟ್ಟಿದ್ದರೆ, ಅವರ್ಯಾಕೆ ಅವನನ್ನು ಆಸ್ಪತ್ರೆಗೆ ಸೇರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಾಹಿಬ್ ಹಣೆಗೆ ಗುಂಡಿಟ್ಟು ಕೊಂದಿರುವ ಗುರುತು ಇದೆ. ಪ್ರತಿಭಟನೆಯ ಹಾದಿ ತಪ್ಪಿಸಲು ಸರ್ಕಾರ ಇಂಥ ದುಷ್ಕೃತ್ಯಗಳನ್ನು ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು. ಶಾಂತಿಯುತ ಪ್ರತಿಭಟನಗೆ ಅಡ್ಡಿಪಡಿಸಲು ಪೊಲೀಸರ ಸೋಗಿನಲ್ಲಿ ಆರ್ಎಸ್ಎಸ್, ಬಿಜೆಪಿ ಕಾರ್ಯಕರ್ತರು ಬಂದು ಗಲಭೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.