ETV Bharat / bharat

ಆಪರೇಷನ್ ಕಾವೇರಿ: ಸುಡಾನ್‌ನಿಂದ 186 ಮಂದಿ ಭಾರತೀಯರು ವಾಪಸ್

author img

By

Published : May 1, 2023, 3:25 PM IST

ಸುಡಾನ್​ ದೇಶದಲ್ಲಿ ಸೇನೆ ಹಾಗೂ ಅರೆ ಸೇನಾ ಪಡೆಗಳ ಮಧ್ಯೆ ಯುದ್ಧ ನಡೆಯುತ್ತಿದೆ. ಸುಮಾರು 400ಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

186 indians returned home from Sudan
ಸುಡಾನ್​ನಿಂದ ತಾಯ್ನಾಡಿಗೆ ಮರಳಿದ 186 ಭಾರತೀಯರು

ನವದೆಹಲಿ: ಸುಡಾನ್​ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಅಂತರ್ಯದ್ಧದಿಂದಾಗಿ ಅಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಅಲ್ಲಿಂದ ಭಾರತಕ್ಕೆ ಕರೆತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಭಾರತೀಯರ ಸ್ಥಳಾಂತರಕ್ಕಾಗಿಯೇ ಒಂದು ವಾರದ ಹಿಂದೆ ಪ್ರಾರಂಭಿಸಲಾದ 'ಆಪರೇಷನ್ ಕಾವೇರಿ' ಅಡಿಯಲ್ಲಿ ಭಾರತ ಇಂದು 186 ಜನರ ಮತ್ತೊಂದು ತಂಡವನ್ನು ಮಾತೃದೇಶಕ್ಕೆ ಕರೆತಂದಿದೆ. ಈ ಪ್ರಯಾಣಿಕರನ್ನು ಹೊತ್ತ ವಿಮಾನ ಇಂದು ಕೊಚ್ಚಿ ತಲುಪಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಭಾನುವಾರ 229 ಭಾರತೀಯರು ಬೆಂಗಳೂರಿಗೆ ಬಂದಿಳಿದಿದ್ದರೆ, ಅದರ ಹಿಂದಿನ ದಿನ 365 ಜನರು ದೆಹಲಿ ತಲುಪಿದ್ದರು. ಶುಕ್ರವಾರ ಎರಡು ಬ್ಯಾಚ್​ಗಳಲ್ಲಿ 745 ಜನರು ಭಾರತಕ್ಕೆ ಆಗಮಿಸಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಇದುವರೆಗೆ ಸುಡಾನ್​ ಯುದ್ಧಭೂಮಿಯಿಂದ ಭಾರತಕ್ಕೆ ಮರಳಿದ ಭಾರತೀಯರ ಒಟ್ಟು ಸಂಖ್ಯೆ 2,140 ಆಗಿದೆ.

ತಾಯ್ನಾಡಿಗೆ ಮರಳುವವರಿಗಾಗಿ ಸೌದಿ ಅರೇಬಿಯಾದ ನಗರ ಜೆಡ್ಡಾದಲ್ಲಿ ಭಾರತ ಶಿಬಿರ ನಿರ್ಮಿಸಿದ್ದು, ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಮೊದಲ ಹಂತದಲ್ಲಿ 360 ಜನರ ಬ್ಯಾಚ್​ ಅನ್ನು ಬುಧವಾರ ವಾಣಿಜ್ಯ ವಿಮಾನದಲ್ಲಿ ನವದೆಹಲಿಗೆ ಕರೆತರಲಾಗಿದೆ. 246 ಜನರಿದ್ದ ಎರಡನೇ ಬ್ಯಾಚ್​ ಗುರುವಾರ ಗುರುವಾರ ಭಾರತೀಯ ವಾಯುಪಡೆಯ C17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ಮುಂಬೈಗೆ ಆಗಮಿಸಿತು.

ಭಾರತವು 'ಆಪರೇಷನ್ ಕಾವೇರಿ' ಅಡಿಯಲ್ಲಿ, ತನ್ನ ನಾಗರಿಕರನ್ನು ಖಾರ್ಟೂಮ್ ಮತ್ತು ಇತರ ತೊಂದರೆಗೊಳಗಾದ ಪ್ರದೇಶಗಳಿಂದ ಪೋರ್ಟ್​ ಸುಡಾನ್‌ ಬಂದರಿಗೆ ಬಸ್‌ಗಳ ಮೂಲಕ ಕರೆತರುತ್ತಿದ್ದು, ಅಲ್ಲಿಂದ ಅವರನ್ನು ಭಾರತೀಯ ವಾಯುಪಡೆಯ ಹೆವಿ-ಲಿಫ್ಟ್ ಸಾರಿಗೆ ವಿಮಾನ ಹಾಗೂ ನೌಕಾಪಡೆಯ ಹಡಗುಗಳ ಮೂಲಕ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಕರೆದೊಯ್ಯಲಾಗುತ್ತಿದೆ.

ಜೆಡ್ಡಾದಿಂದ ಭಾರತೀಯರನ್ನು ವಾಣಿಜ್ಯ ವಿಮಾನಗಳಲ್ಲಿ ಅಥವಾ IAFನ ವಿಮಾನಗಳಲ್ಲಿ ತಾಯ್ನಾಡಿಗೆ ಕರೆತರಲಾಗುತ್ತಿದೆ. ಭಾರತವು ಜೆಡ್ಡಾ, ಪೋರ್ಟ್ ಸುಡಾನ್‌ನಲ್ಲಿ ಪ್ರತ್ಯೇಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ ಮತ್ತು ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೆಹಲಿಯಲ್ಲಿರುವ MEA ನ ಪ್ರಧಾನ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದರ ಜೊತೆಗೆ ಅವರೊಂದಿಗೆ ಸಮನ್ವಯ ಸಾಧಿಸುತ್ತಿದೆ.

ಸುಡಾನ್​ ದೇಶದ ಸೇನೆ ಮತ್ತು ಅರೆಸೈನಿಕ ಪಡೆಗಳ ನಡುವೆ ಅಂತರ್ಯದ್ಧ ನಡೆಯುತ್ತಿದ್ದು, ಈಗಾಗಲೇ ಸುಮಾರು ನಾಲ್ಕುನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಸುಡಾನ್​ನಲ್ಲಿ ಯುದ್ಧದ ತೀವ್ರತೆ ಹೆಚ್ಚಾಗುತ್ತಲೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್​ ಕಳೆದ ಸೋಮವಾರ ಯುದ್ಧಭೂಮಿಯಾಗಿರುವ ಸುಡಾನ್​ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರಲು 'ಆಪರೇಷನ್ ಕಾವೇರಿ' ಪ್ರಾರಂಭಿಸುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: ಸುಡಾನ್ ಸಂಘರ್ಷದಲ್ಲಿ ಮೃತರ ಸಂಖ್ಯೆ 528ಕ್ಕೇರಿಕೆ: 4500 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.