ETV Bharat / assembly-elections

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಇಲ್ಲ, ವರುಣಾ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿದ ಹೈಕಮಾಂಡ್: 16 ಮಂದಿ ಹೊಸ ಮುಖಗಳಿಗೆ ಅವಕಾಶ

author img

By

Published : Apr 15, 2023, 3:19 PM IST

Updated : Apr 15, 2023, 7:06 PM IST

ಕಾಂಗ್ರೆಸ್​ ಪಕ್ಷ ಇಂದು ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೈ ಹೈಕಮಾಂಡ್ ಮಾಜಿ ಸಿಎಂ​ ಸಿದ್ದರಾಮಯ್ಯನವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು ಕೋಲಾರ ಕ್ಷೇತ್ರದಿಂದ ಕೊತ್ತೂರು ಮಂಜುನಾಥ್​ಗೆ ಟಿಕೆಟ್​ ಘೋಷಣೆ ಮಾಡಲಾಗಿದೆ.

Congress 3rd list
Congress 3rd list

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದಿಂದಲೂ ಟಿಕೆಟ್ ನೀಡುವ ಬಗ್ಗೆ ಇದ್ದ ನಿರೀಕ್ಷೆಗಳು ಇದೀಗ ಹುಸಿಯಾಗಿವೆ. ಕೋಲಾರದಿಂದ ಕೊತ್ತನೂರು ಮಂಜುನಾಥ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಹಾಗಾಗಿ, ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರ ಮಾತ್ರ ಸೀಮಿತಗೊಳಿಸಲಾಗಿದೆ.

ಸಿದ್ದರಾಮಯ್ಯ ಕೋಲಾರದಿಂದಲೂ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಕಳೆದ ತಿಂಗಳಿಂದ ಭಾರಿ ಸದ್ದು ಮಾಡುತಿತ್ತು. ಇದಕ್ಕಾಗಿ ಸಾಕಷ್ಟು ಸಿದ್ಧತೆಯನ್ನು ಸಹ ಅವರು ಮಾಡಿಕೊಂಡಿದ್ದರು. ಅತ್ಯಂತ ಉತ್ಸಾಹದಿಂದಲೇ ಅವರು ಕೋಲಾರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಆದರೆ, ಮೊದಲ ಎರಡು ಸಭೆಯಲ್ಲಿ ಸಿಕ್ಕಷ್ಟು ಸ್ಪಂದನೆ ನಂತರದ ಸಭೆಯಲ್ಲಿ ಸಿಗಲಿಲ್ಲ. ಕೆ.ಹೆಚ್​. ಮುನಿಯಪ್ಪ ದೇವನಹಳ್ಳಿ ಅತ್ತ ಗಮನಹರಿಸಿ ಅಲ್ಲಿನ ಅಭ್ಯರ್ಥಿಯಾಗಿ ಸಿದ್ಧತೆ ನಡೆಸಿ ಕೋಲಾರದತ್ತ ಗಮನ ಕಡಿಮೆ ಮಾಡಿದ್ದರು.

ಇನ್ನು ಪತ್ನಿಯ ಅಗಲಿಕೆಯಿಂದ ಆಘಾತಕ್ಕೊಳಗಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಆಚೆ ಬರುವುದನ್ನು ಕಡಿಮೆ ಮಾಡಿದ್ದರು. ಈ ಎಲ್ಲಾ ಕಾರಣದಿಂದ ತಾವು ಸ್ಪರ್ಧಿಸಿದರೆ ಅಲ್ಲಿ ಸೋಲು ಖಚಿತ ಎಂಬುದು ಸಿದ್ದರಾಮಯ್ಯ ಅವರಿಗೆ ಮನವರಿಕೆಯಾಗ ತೊಡಗಿತ್ತು. ಈ ಮಧ್ಯ ಆಂತರಿಕ ವರದಿ ಪ್ರಕಾರ, ಕೋಲಾರದಲ್ಲಿ ಹಾಲಿ ಇರುವವರು ಶಾಸಕರಲ್ಲಿ ಕೆಜಿಎಫ್ ಶಾಸಕಿ ರೂಪ ಶಶಿಧರ್ ಹೊರತುಪಡಿಸಿದರೆ ಉಳಿದವರಿಗೆ ಗೆಲ್ಲುವ ಸಾಧ್ಯತೆ ಕಡಿಮೆ ಇದೆ ಎಂಬ ವರದಿ ಬಂದಿತ್ತು.

ಸಿದ್ದರಾಮಯ್ಯ ತಾವು ಸ್ಪರ್ಧಿಸಿ ಗೆಲ್ಲುವ ಜೊತೆಗೆ ಇತರರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಆದರೆ, ಕಡೆಯ ಕ್ಷಣದಲ್ಲಿ ಅವರು ತಾವು ವರುಣ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಲು ಚಿಂತನೆ ನಡೆಸಿದ್ದರು. ಈ ಮಧ್ಯೆ ಹೈಕಮಾಂಡ್ ನಾಯಕರದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಅವರನ್ನು ಕರೆಸಿ ಸಭೆ ನಡೆಸಿ ಕೋಲಾರದಲ್ಲಿ ತಾವು ಸೋಲುವ ಸಾಧ್ಯತೆ ಇರುವ ಹಿನ್ನೆಲೆ ಕೇವಲ ವರುಣಾದಿಂದ ಮಾತ್ರ ಸ್ಪರ್ಧಿಸಿ ಎಂದು ಸೂಚಿಸಿದ್ದರು. ಈ ಹಿನ್ನೆಲೆ ಉಳಿದವರ ಸಲಹೆ ಪಡೆದ ಸಿದ್ದರಾಮಯ್ಯ ಕೇವಲ ವರುಣಾಗೆ ಸೀಮಿತರಾಗಿದ್ದಾರೆ.

ಕೊತ್ತೂರು ಮಂಜುನಾಥ್​ಗೆ ಟಿಕೆಟ್ ಘೋಷಣೆ: ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ತಪ್ಪು ಜಾತಿ ಪ್ರಮಾಣ ಪತ್ರ ನೀಡಿ ಶಾಸಕತ್ವದಿಂದ ಅನರ್ಹರಾಗಿ ಆರು ವರ್ಷ ಚುನಾವಣೆ ಸ್ಪರ್ಧೆಯಿಂದ ದೂರ ಉಳಿದಿದ್ದ ಕೊತ್ತೂರು ಮಂಜುನಾಥ್​ಗೆ ಈ ಬಾರಿ ಕೋಲಾರದಲ್ಲಿ ಮಣೆ ಹಾಕಲಾಗಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಕೊತ್ತೂರು ಮಂಜುನಾಥ್, 2018 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಅಭ್ಯರ್ಥಿ ಆಗಿದ್ದರು. ಆದರೆ, 2013 ವಿಧಾನಸಭೆ ಚುನಾವಣೆಯಲ್ಲಿ ಅವರು ತಪ್ಪು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ನ್ಯಾಯಾಲಯ ಅವರ ಶಾಸಕತ್ವವನ್ನು ಅನರ್ಹ ಗೊಳಿಸಿತ್ತು. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೊತ್ತೂರು ಮಂಜುನಾಥ್ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಅವರ ಆರ್ಥಿಕ ವೆಚ್ಚವನ್ನು ತಾವೇ ಹೊರುವುದಾಗಿ ಸಹ ಭರವಸೆ ನೀಡಿದ್ದರು.

ಆದರೆ, ಒಂದೊಮ್ಮೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ಕೊತ್ತೂರು ಮಂಜುನಾಥ್ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಈ ಕಾರಣಕ್ಕಾಗಿ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳುವವರೆಗೂ ಕೋಲಾರ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರಗಳ ಟಿಕೆಟ್ ಅನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಇದೀಗ ಸಿದ್ದರಾಮಯ್ಯ ನಿರ್ಧಾರ ಕೈಗೊಂಡಿರುವ ಹಿನ್ನೆಲೆ ಚಿಕ್ಕಬಳ್ಳಾಪುರ ಬದಲು ಕೋಲಾರದಿಂದಲೇ ಕೊತ್ತೂರು ಮಂಜುನಾಥ್​ಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಇನ್ನು ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಆಪ್ತರಿಗೆ ಮಣೆ ಹಾಕಲಾಗಿದೆ. ಕೃಷ್ಣರಾಜನಿಂದ ಎಂ.ಕೆ ಸೋಮಶೇಖರ್ ಹಾಗೂ ಚಾಮರಾಜ ಕ್ಷೇತ್ರದಿಂದ ಕೆ. ಹರೀಶ್ ಗೌಡ ಅವರಿಗೆ ಟಿಕೆಟ್ ನೀಡಲಾಗಿದ್ದು, ಚಾಮರಾಜ ಕ್ಷೇತ್ರದಿಂದ ಡಿ.ಕೆ. ಶಿವಕುಮಾರ್ ಆಪ್ತ ವಾಸು ಪ್ರಬಲ ಆಕಾಂಕ್ಷಿ ಆಗಿದ್ದರು. ಆದರೆ, ಅವರಿಗೆ ಟಿಕೆಟ್ ಕೈತಪ್ಪಿದೆ.

ಮೂವರು ಕಿಸಾನ್ ಪದಾಧಿಕಾರಿಗಳಿಗೆ ಟಿಕೆಟ್: ಮದಲನೆ ಪಟ್ಟಿಯಲ್ಲಿ ಕುಡಚಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಮಹೇಂದ್ರ ತಮ್ಮಣ್ಣ ಘೋಷಣೆಯಾಗಿತ್ತು ಹಾಗೂ ಎರಡನೆ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ವಿ. ಶಿವಗಂಗಾ ಅವರನ್ನು ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದ್ದು, ಇಂದು ಪ್ರಕಟಗೊಂಡ ಮೂರನೇ ಪಟ್ಟಿಯಲ್ಲಿ ತೇರದಾಳ ಕ್ಷೇತ್ರಕ್ಕೆ ರಾಜ್ಯ ಕಿಸಾನ್ ಕಾಂಗ್ರೆಸ್ ಸಂಚಾಲಕ ಸಿದ್ದು ಕೊಣ್ಣೂರ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ನಟಿ, ಮಾಜಿ ಸಚಿವೆ ಉಮಾಶ್ರೀ ಅವರಿಗೆ ಕಾಂಗ್ರೆಸ್ ಶಾಕ್ ನೀಡಿದೆ.

  • ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಿದೆ.
    ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಭಾಶಯಗಳನ್ನು ಕೋರುತ್ತೇವೆ.

    ಕಾಂಗ್ರೆಸ್ ಅಭ್ಯರ್ಥಿಗಳನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಿ ಸುವರ್ಣ ಕರ್ನಾಟಕದ ವೈಭವವನ್ನು ಮರುಸ್ಥಾಪಿಸಲು ಬೆಂಬಲಿಸಬೇಕೆಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ.

    ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ. pic.twitter.com/Dmi5jv5iGa

    — Karnataka Congress (@INCKarnataka) April 15, 2023 " class="align-text-top noRightClick twitterSection" data=" ">

ಮೂರನೇ ಪಟ್ಟಿಯಲ್ಲಿ ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಕಮಲ ತೊರೆದು ನಿನ್ನೆಯಷ್ಟೇ ಕಾಂಗ್ರೆಸ್ ಸೇರಿರುವ ಮಾಜಿ ಉಪ ಮುಖ್ಯಮಂತ್ರಿ (ಡಿಸಿಎಂ) ಲಕ್ಷ್ಮಣ್ ಸವದಿ ಅವರಿಗೆ ಅಥಣಿ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಬೆಂಗಳೂರಿನ ಪುಲಿಕೇಶಿನಗರ, ಸಿ.ವಿ. ರಾಮನ್ ನಗರ, ಶಿಗ್ಗಾಂವಿ ಹುಬ್ಬಳ್ಳಿ ಸೆಂಟ್ರಲ್​, ಕೆ ಆರ್ ಪುರಂ ಸೇರಿದಂತೆ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಬಾಕಿ ಇದೆ.

16 ಮಂದಿ ಹೊಸ ಮುಖಗಳಿಗೆ ಅವಕಾಶ: ಈ ಬಾರಿ ಅಳೆದುತೂಗಿ 16 ಮಂದಿ ಹೊಸ ಮುಖಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

1. ಮೂಡಿಗೆರೆ - ನಯನ ಮೋಟಮ್ಮ

2. ಬೊಮ್ಮನಹಳ್ಳಿ - ಉಮಾಪತಿ ಶ್ರೀನಿವಾಸ್ ಗೌಡ

3. ಔರಾದ್ - ಭೀಮ್ ಸೇನ್ ಶಿಂಧೆ

4. ಚಿಕ್ಕಬಳ್ಳಾಪುರ - ಪ್ರದೀಪ್‌ ಈಶ್ವರ್

5. ಬೆಳಗಾವಿ ದಕ್ಷಿಣ - ಪ್ರಭಾವತಿ ಮಸ್ತ್ ಮರಡಿ

6. ತೇರದಾಳ - ಸಿದ್ದಪ್ಪ ಕೊಣ್ಣೂರು

7. ಶಿರಹಟ್ಟಿ - ಸುಜಾತ ದೊಡ್ಡಮನಿ

8. ಕುಮಟಾ - ನಿವೇದಿತ್ ಆಳ್ವಾ

9. ಬಳ್ಳಾರಿ ಸಿಟಿ - ನಾ.ರ ಭರತ್ ರೆಡ್ಡಿ

10. ಶಿವಮೊಗ್ಗ - ಎಚ್.ಸಿ ಯೋಗೇಶ್

11. ಕಾರ್ಕಳ - ಉದಯ್ ಶೆಟ್ಟಿ

12. ದಾಸರಹಳ್ಳಿ - ಧನಂಜಯ್ ಗೌಡ

13. ಮದ್ದೂರು - ಉದಯ್ ಗೌಡ

14. ಹಾಸನ - ಬನವಾಸಿ ರಂಗಸ್ವಾಮಿ

15. ಪುತ್ತೂರು - ಅಶೋಕ್ ರೈ

16. ಚಾಮರಾಜ - ಹರೀಶ್ ಗೌಡ

ಇದನ್ನೂ ಓದಿ: ಜೆಡಿಎಸ್​ನಿಂದ ಮತ್ತೆ 5 ಕ್ಷೇತ್ರಗಳಿಗೆ ಹೆಸರು ಪ್ರಕಟ: ತೆನೆ ಹೊತ್ತ ಬಿಎಸ್​ವೈ ಸಂಬಂಧಿ ಎನ್ ಆರ್ ಸಂತೋಷ್

Last Updated :Apr 15, 2023, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.