ಕಸಕ್ಕೆ ಹಚ್ಚಿದ್ದ ಬೆಂಕಿ ಕಿಡಿ ತಗುಲಿ ಹೊತ್ತಿ ಉರಿದ ಕಾರುಗಳು - Fire accident
Published : Apr 6, 2024, 11:52 AM IST
ಬೆಂಗಳೂರು: ಕಸ ಸುಡಲು ಹಚ್ಚಿದ್ದ ಬೆಂಕಿಯ ಕಿಡಿ ಹಾರಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಎರಡು ಕಾರುಗಳಿಗೆ ತಗುಲಿ ಕ್ಷಣಾರ್ಧದಲ್ಲೇ ಸುಟ್ಟು ಕರಕಲಾಗಿವೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ವಾಟರ್ ಟ್ಯಾಂಕ್ ರಸ್ತೆಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ರಸ್ತೆ ಬದಿಯ ಪಕ್ಕದ ಖಾಲಿ ಜಾಗದಲ್ಲಿದ್ದ ಕಸಕ್ಕೆ ಯಾರೋ ಬೆಂಕಿ ಇಟ್ಟಿದ್ದರು. ಕೆಲ ಕ್ಷಣಗಳ ಬಳಿಕ ಅದೇ ರಸ್ತೆಯಲ್ಲೇ ಪಾರ್ಕ್ ಮಾಡಲಾಗಿದ್ದ ಕಾರುಗಳಿಗೆ ಬೆಂಕಿ ಆವರಿಸಿಕೊಂಡಿದೆ. ನೋಡು ನೋಡುತ್ತಿದ್ದಂತೆ ಅಗ್ನಿಯ ಜ್ವಾಲೆ ಕಾರುಗಳಿಗೂ ವ್ಯಾಪಿಸಿಕೊಂಡು ಕೆಲವೇ ಸೆಕೆಂಡ್ಗಳಲ್ಲಿ ಬೆಂಕಿಗಾಹುತಿಯಾಗಿವೆ.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ತಂಡ ಬೆಂಕಿಯನ್ನು ನಂದಿಸಿದೆ. ಕೊಂಚ ತಡವಾಗಿದ್ದರೂ ಪಕ್ಷದಲ್ಲೇ ಪಾರ್ಕ್ ಮಾಡಲಾಗಿದ್ದ ಇನ್ನಷ್ಟು ಕಾರುಗಳಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯಿತ್ತು. ಈ ಸಂಬಂಧ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಕಾರುಗಳು ಪಾರ್ಕಿಂಗ್ ಮಾಡಿದ್ದ ಸಮೀಪದಲ್ಲೇ ಕಸಕ್ಕೆ ಬೆಂಕಿಯನ್ನು ಹಚ್ಚಲಾಗಿತ್ತು. ಗಾಳಿಗೆ ಬೆಂಕಿ ಕಿಡಿ ಹಾರಿ ಒಂದರ ಹಿಂದೆ ಒಂದರಂತೆ ಪಾರ್ಕ್ ಮಾಡಲಾಗಿದ್ದ ಕಾರುಗಳಿಗೆ ತಗುಲಿ ಅವಘಡ ಸಂಭವಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೆಂಕಿಯನ್ನು ಹೊತ್ತಿಸುವಾಗ ಜಾಗ್ರತೆ ವಹಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.